23ರಂದು ಲವ್ ಜಿಹಾದ್ ವಿರುದ್ಧ ಹಾವೇರಿಯಲ್ಲಿ ಪ್ರತಿಭಟನೆ: ಕೆ.ಈ. ಕಾಂತೇಶ

KannadaprabhaNewsNetwork | Published : Apr 8, 2025 12:32 AM

ಲವ್ ಜಿಹಾದಗೆ ಬಲಿಯಾಗಿರುವ ಹಾವೇರಿ ಜಿಲ್ಲೆಯ ಮಾಸೂರಿನ ಸ್ವಾತಿ ಘಟನೆಯನ್ನು ಖಂಡಿಸಿ ಏಪ್ರಿಲ್ 23ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ರಾಯಣ್ಣ ಬ್ರಿಗೇಡ್ ರಾಜ್ಯ ಕಾರ್ಯದರ್ಶಿ ಕೆ.ಈ. ಕಾಂತೇಶ ಹೇಳಿದರು.

ಗದಗ: ಲವ್ ಜಿಹಾದಗೆ ಬಲಿಯಾಗಿರುವ ಹಾವೇರಿ ಜಿಲ್ಲೆಯ ಮಾಸೂರಿನ ಸ್ವಾತಿ ಘಟನೆಯನ್ನು ಖಂಡಿಸಿ ಏಪ್ರಿಲ್ 23ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ರಾಯಣ್ಣ ಬ್ರಿಗೇಡ್ ರಾಜ್ಯ ಕಾರ್ಯದರ್ಶಿ ಕೆ.ಈ. ಕಾಂತೇಶ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಸಿದ್ದಪ್ಪ ಸರ್ಕಲ್ ವರೆಗೂ ನಡೆಯಲಿದ್ದು, ರಾಜ್ಯದ ವಿವಿಧ ಮಠಗಳ ಮಠಾಧೀಶರು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಲವ್ ಜಿಹಾದ್ ಬಲೆಗೆ ಸಿಲುಕಿ ಸ್ವಾತಿ ಕಗ್ಗೊಲೆ ಆಗಿದ್ದಾರೆ. ಅದು ಲವ್ ಜಿಹಾದ್ ಅಲ್ಲ ಅಂತ ರಾಜ್ಯ ಸರ್ಕಾರ ವಾದ ಮಾಡುತ್ತಿದೆ. ಹಿಂದೂ ಮಹಿಳೆ ಸತ್ತ ನಂತರ ರಾಜ್ಯದ ಯಾವುದೇ ಜನಪ್ರತಿನಿಧಿಗಳಾಗಲಿ, ಕ್ಷೇತ್ರದ ಶಾಸಕರು ಸ್ವಾತಿ ಮನೆಗೆ ಭೇಟಿ ನೀಡಲಿಲ್ಲ. ಬಡ ಕುಟುಂಬದ ಹೆಣ್ಣು ಮಗಳು ಯಾವುದೇ ತಪ್ಪು ಮಾಡದೇ ಲವ್ ಜಿಹಾದ್ ಬಲೆಗೆ ಸಿಲುಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಇಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು, ಲವ್ ಜಿಹಾದ್ ಗೆ ಹಿಂದೂ ಮಹಿಳೆಯರು ಬಲಿಯಾಗುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಸಲ್ಮಾನರ ಮೇಲೆ ವಿಶೇಷ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿದೆ. ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಶೇ. 4% ರಷ್ಟು ಮೀಸಲಾತಿ ಘೋಷಿಸಿದ್ದಾರೆ. ಇವರಿಗೆ ಕೇವಲ ಮುಸಲ್ಮಾನರು ಮಾತ್ರ ಮತ ಹಾಕಿದ್ದಾರೆಯೇ ಅಥವಾ ಹಿಂದೂಗಳು ಹಾಕಿಲ್ಲವೇ? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಗಾಜಿ, ಕುಮಾರ ಮಾರನಬಸರಿ, ಬಸವರಾಜ ಕುರಿ, ವೆಂಕಟೇಶ ಹೂವಣ್ಣನವರ, ಜಯರಾಮ್ ಹುಲಗಣ್ಣನವರ ರಾಜು ಪೂಜಾರ ಉಪಸ್ಥಿತರಿದ್ದರು.