ಜೋಯಿಡಾ: ಪರಿಸರ ಸೂಕ್ಷ್ಮ ವಲಯ (ಇಎಸ್ಎ) ಅಧಿಸೂಚನೆ ರದ್ದುಪಡಿಸಲು ಆಗ್ರಹಿಸಿ ಸೆ. 19ರಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಜೋಯಿಡಾದಲ್ಲಿ ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಕಸ್ತೂರಿ ರಂಗನ್ ವರದಿ ಇದು ನೈಜತೆಯನ್ನು ಮರೆಮಾಚಿದೆ. ಈಗಾಗಲೇ ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳು, ಅರಣ್ಯ ಡಿಪೊ, ಬಾಂಬು ಕಟಾವು, ಕಾಳಿ ಹುಲಿ ಯೋಜನೆ, ಹಾರ್ನ್ಬಿಲ್ ಸಂರಕ್ಷಿತ ಪ್ರದೇಶ ಇಂತಹ ಅನೇಕ ಯೋಜನೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ, ವಿದ್ಯುತ್, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳು ಪೂರೈಸಲು ಸಾಕಷ್ಟು ತೊಂದರೆ ಆಗುತ್ತಿದೆ. ಉದ್ಯೋಗಾವಕಾಶಗಳು ಇಲ್ಲದೆ ಯುವಕರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಒಂದಾನುವೇಳೆ ಇಎಸ್ಎ ಅಂತಿಮ ಆದೇಶ ಜಾರಿಗೊಂಡರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಆದ್ದರಿಂದ ಅವೈಜ್ಞಾನಿಕ ಮತ್ತು ಅಸಮರ್ಪಕವಾದ ಕಸ್ತೂರಿ ರಂಗನ್ ವರದಿ ಆಧಾರಿತ ಈ ಅಧಿಸೂಚನೆ ರದ್ದುಪಡಿಸಲು ಅಗ್ರಹಿಸಿ ಉಗ್ರ ಹೋರಾಟ ನಡೆಸುವ ಬಗ್ಗೆ ಮತ್ತು ಈ ಹೋರಾಟದ ನೇತೃತ್ವ ಕಾಳಿ ಬ್ರಿಗೇಡ್ ವಹಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು. ಸೆ. 19ರಂದು ಜೋಯಡಾದ ಶಿವಾಜಿ ವೃತ್ತದಲ್ಲಿ ಸಭೆ ಸೇರಿ, ಅಲ್ಲಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಬಂದು ತಹಸೀಲ್ದಾರ್ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಕರಾರು ಅರ್ಜಿ ಸಲ್ಲಿಸುವ ಬಗ್ಗೆ ನಿರ್ಣಯ ಮಾಡಲಾಯಿತು.
ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ರದ್ದುಪಡಿಸಬೇಕು, ಹೊಸದಾಗಿ ಜಿಲ್ಲಾವಾರು ಅಧ್ಯಯನ ನಡೆಸಿ ವರದಿ ಪಡೆಯಲು ಸರ್ಕಾರಕ್ಕೆ ಆಗ್ರಹಿಸುವ ಬಗ್ಗೆ ನಿರ್ಣಯ ಮಾಡಲಾಯಿತು.ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ್ ದೇಸಾಯಿ ಮತ್ತು ಮುಖ್ಯ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್ ಸಭೆಯ ಸಂಯೋಜನೆ ಮಾಡಿದ್ದರು. ಉಮೇಶ್ ವೇಳಿಪ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕರ್ನಾಟಕ ಕಿಸಾನ್ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ರೇಡಕರ್ ಹೋರಾಟಕ್ಕೆ ಮಾರ್ಗದರ್ಶನ ಮಾಡಿದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಧಾಕರ್ ದೇಸಾಯಿ , ಹಿರಿಯರಾದ ರಫಿಕ್ ಖಾಜಿ, ಕೆ.ಎಲ್. ನಾಯ್ಕ್, ಶ್ರೀಕಾಂತ ಟೆಂಗ್ಸೆ, ಗೋಪಾಲ್ ಭಟ್ಟ, ಶಾಮ್ ಪೋಕಳೆ, ಕುಣಬಿ ಸಮಾಜ ಅಧ್ಯಕ್ಷ ಪ್ರೇಮಾನಂದ ವೇಳಿಪ್, ಕಾರ್ಯದರ್ಶಿ ದಯಾನಂದ, ಪ್ರಸನ್ನ ಗಾವಡಾ, ಕಾಂಗ್ರೆಸ್ ಧುರೀಣ ವಿನಯ ದೇಸಾಯಿ, ಜೋಯಿಡಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿದಾಸ್ ದೇಸಾಯಿ, ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಕಾರ್ಯದರ್ಶಿ ಸುದರ್ಶನ ಹೆಗಡೆ, ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಅಜಿತ್ ಗಾವಡಾ, ಕಾಳಿ ಬ್ರಿಗೇಡ್ ಕಾರ್ಯದರ್ಶಿ ಸಮೀರ್ ಮುಜಾವರ್, ಸಂಜೀವನಿ ಸೇವಾ ಟ್ರಸ್ಟ್ ಖಜಾಂಚಿ ಪ್ರಭಾಕರ್ ನಾಯ್ಕ್, ಕಾಳಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶುಭೇಂದು ಕಾಮತ್, ಅಂಬಾರಿ ಕ್ವಿನ್ಸ್ ಟ್ರಸ್ಟಿನ ಭವಾನಿ ಚವ್ಹಾಣ, ದತ್ತಾರಾಮ ದೇಸಾಯಿ, ಬಾಜಾರಕುಣಂಗ ಗ್ರಾಪಂ ಮಾಜಿ ಉಪಾಧ್ಯಕ್ಷ ಅಜಿತ್ ಮಿರಾಶಿ, ಮರಾಠಾ ಸಮಾಜದ ಮುಖಂಡ ಚಂದ್ರಕಾಂತ ದೇಸಾಯಿ ಉಪಸ್ಥಿತರಿದ್ದರು. ಜಗಲಬೇಟ, ಪ್ರಧಾನಿ, ಗುಂದ, ಉಳವಿ, ಕುಂಬಾರವಾಡಾ, ಅಣಸಿ, ನಾಗೋಡಾ ಗ್ರಾಪಂ ವ್ಯಾಪ್ತಿಯ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.