ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಹಾಸನದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Jun 26, 2024, 12:43 AM IST
ಡಾ|| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪ್ರತಿಭಟನೆ, ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಶೀಘ್ರ ಜಾರಿಗೆ ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯಿಂದ ಹಾಸನ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಡಿಸಿ ಸತ್ಯಭಾಮಗೆ ಮನವಿ । ನೆರೆಯ ರಾಜ್ಯಗಳಲ್ಲಿ ವರದಿ ಮಾದರಿಯ ಕಾನೂನು

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಶೀಘ್ರ ಜಾರಿಗೆ ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯಿಂದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

‘ನಮ್ಮ ಕರ್ನಾಟಕ ಸೇನೆ’ ಜಿಲ್ಲಾಧ್ಯಕ್ಷ ವೈ.ಡಿ.ಭಾನುಪ್ರಕಾಶ್ ಮಾತನಾಡಿ, ‘ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡಲು ೧೯೮೪ ಜನವರಿ ೨೫ ರಂದು ಡಾ.ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ೧೯೮೬ರಲ್ಲಿ ಈ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ. ಈ ವರದಿಯು ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯ ಸ್ವರೂಪದ ಅಧ್ಯಯನ ಕಾರ್ಯದ ಸಾದುವಾದ ಪರಿಹಾರ ಮಾರ್ಗಗಳನ್ನು ಹೊಂದಿತ್ತು. ವರದಿಯನ್ನು ಗಮನಿಸಿ, ಇದೇ ಮಾದರಿಯಲ್ಲಿ ಕೆಲವು ರಾಜ್ಯಗಳು ಕಾನೂನು ರಚಿಸಿವೆ ಎಂದರೆ ಡಾ.ಸರೋಜಿನಿ ಮಹಿಷಿ ವರದಿಯ ಮಹತ್ವ ಎಂತಹದ್ದು ತಿಳಿದುಕೊಳ್ಳಬೇಕು. ನಮ್ಮ ಪಕ್ಕದ ರಾಜ್ಯಗಳಾದ ತಮಿಳುನಾಡಿನಲ್ಲಿ ಸ್ಥಳೀಯ ಭಾಷಿಕರಿಗೆ ಶೇಕಡ ೯೦, ಆಂದ್ರದಲ್ಲಿ ಶೇ ೮೦ ರಷ್ಟು ಮೀಸಲಾತಿ ನೀಡಿ ಸರ್ಕಾರಗಳು ಆದೇಶ ಹೊರಡಿಸಿರುವುದು ಗಮನಾರ್ಹ ವಿಷಯವಾಗಿದೆ’ ಎಂದು ಹೇಳಿದರು.

‘೨೦೧೬ ರಲ್ಲಿ ಪ್ರೊ.ಎಸ್.ಟಿ.ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ಸಮಿತಿ ರಚಿಸಲಾಯಿತು. ಆಗ ಸಮಿತಿಯು ವರದಿ ನೀಡಿದಾಗ ಸರ್ಕಾರಿ ವಲಯದಲ್ಲಿಯೇ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ, ಈಗ ಜಾಗತೀಕರಣದ ಪರಿಣಾಮವಾಗಿ ಸರ್ಕಾರಿ ವಲಯದ ಉದ್ಯಮಗಳು ಹಿನ್ನೆಲೆಗೆ ಸರಿಯುತ್ತಿವೆ’ ಎಂದು ತಿಳಿಸಿದರು.

‘ಐಟಿಬಿಟಿ, ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕ್‌ಗಳು ಮೊದಲಾದ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಡಾ.ಸರೋಜಿನಿ ಮಹಿಷಿ ವರದಿ ಸಿದ್ಧಪಡಿಸಿದಾಗ ಈ ಉದ್ಯಮಗಳು ಇರಲಿಲ್ಲ. ಹಾಗಾಗಿ, ಇವುಗಳ ಪ್ರಸ್ತಾಪ ವರದಿಯಲ್ಲಿ ಇಲ್ಲ. ಅಲ್ಲದೇ, ರಾಜ್ಯದಲ್ಲಿ ಆಗ ಹೆಚ್ಚು ಕೇಂದ್ರ ಕಚೇರಿಗಳು ಇರಲಿಲ್ಲ. ಸಹಜವಾಗಿ ವರದಿಯಲ್ಲಿ ಇವು ಕಾಣಿಸಿಕೊಂಡಿಲ್ಲ. ಈ ಮೂರು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದನ್ನು ಮನಗಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಡಾ.ಸರೋಜಿನಿ ಮಹಿಷಿ ವರದಿಯನ್ನು ಪುನರ್ ಪರಿಶೀಲಿಸಲು ಸಮಿತಿ ರಚಿಸಿತ್ತು. ಕೇಂದ್ರ ಹಾಗೂ ಖಾಸಗಿ ಸೌಮ್ಯದ ಉದ್ಯಮ/ಸಂಸ್ಥೆ/ಕೈಗಾರಿಕೆ/ಕಚೇರಿಗಳು ವರದಿಯ ಅಡಿಯಲ್ಲಿ ತರುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಡಾ.ಸರೋಜಿನಿ ವರದಿಯನ್ನು ಪುನರ್ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿ ರಚಿಸಿ ಆದೇಶಿಸಿತು’ ಎಂದು ಹೇಳಿದರು.

‘ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ, ಪರಿಷ್ಕರಿಸಿದ ವರದಿಯಲ್ಲಿ ಕಾಯ್ದೆ ಮಾಡಲು ಅಗತ್ಯವಿರುವ ೧೪ ಅಂಶಗಳನ್ನು ಪಟ್ಟಿ ಮಾಡಿ, ಸರ್ಕಾರದ ಅವಗಾಹನೆಗೆ ಸಲ್ಲಿಸಿ ಅನುಷ್ಠಾನಕ್ಕೆ ಮನವಿ ಮಾಡಿದ್ದಾರೆ. ಕನ್ನಡಿಗರ ಮೇಲೆ ಅಪಾರ ಗೌರವ ಮತ್ತು ಕಾಳಜಿ ಇರುವ ತಾವು ಅತಿ ಶೀಘ್ರದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಲು ಮನವಿ ಪತ್ರ ನೀಡಿದರು.

‘ನಮ್ಮ ಕರ್ನಾಟಕ ಸೇನೆ’ಯ ಮಹಿಳಾ ಜಿಲ್ಲಾಧ್ಯಕ್ಷೆ ತನುಪ್ರಿಯಾ ಆಚಾರ್, ಉಪಾಧ್ಯಕ್ಷ ರವೀಂದ್ರ ಕುಮಾರ್, ಎಚ್.ಎನ್.ಬಸವರಾಜ್, ಎಚ್.ಆರ್.ರೂಪ, ಎಂ.ಜಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಆಲೂರು ತಾಲೂಕು ಅಧ್ಯಕ್ಷ ಆರಿಫ್ ಹಾಗೂ ಯುವ ಘಟಕ ಅಧ್ಯಕ್ಷ ಆಸೀಫ್, ಅರಸೀಕೆರೆ ಮಹಿಳಾ ತಾಲೂಕು ಅಧ್ಯಕ್ಷ ಚೇತನ್, ಅರುಣಕುಮಾರ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ