ಕೇಂದ್ರ ಮೋಟಾರು ಕಾಯ್ದೆ ರದ್ದತಿಗೆ ಆಗ್ರಹ

KannadaprabhaNewsNetwork |  
Published : Jan 18, 2024, 02:02 AM IST
17ಕೆಪಿಆರ್‌ಸಿಆರ್‌06: | Kannada Prabha

ಸಾರಾಂಶ

ಹಿಟ್ ಆ್ಯಂಡ್ ರನ್ ಪ್ರಕರಣದ ಶಾಸನದಲ್ಲಿನ ನ್ಯೂನತೆ ಸರಿಪಡಿಸಲು ಒತ್ತಾಯ. ರಾಯಚೂರಿನಲ್ಲಿ ಲಾರಿ ಮಾಲೀಕರಿಂದ ಅನಿರ್ದಿಷ್ಟಾವಧಿ ಮುಷ್ಕರ; ಪ್ರತಿಭಟನಾ ಮೆರವಣಿಗೆ. ಎಪಿಎಂಸಿಯಲ್ಲಿ ಲಾರಿ ಮುಷ್ಕರದಿಂದಾಗಿ ರೈತರು, ವ್ಯಾಪಾರಸ್ಥರು ಸಮಸ್ಯೆಯನ್ನು ಅನುಭವಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಭಾರತೀಯ ನ್ಯಾಯ ಸಂಹಿತಾ 2023 ಕಲಂ 2ರ ಅನ್ವಯ ಹಿಟ್ ಆ್ಯಂಡ್ ರನ್ ಪ್ರಕರಣದ ಶಾಸನದಲ್ಲಿನ ನ್ಯೂನತೆ ಸರಿಪಡಿಸಲು ಆಗ್ರಹಿಸಿ ಲಾರಿ ಮಾಲೀಕರು ಬುಧವಾರ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದು, ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮುಷ್ಕರ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕುಗಳಲ್ಲಿ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಇದರಿಂದಾಗಿ ಕಾಯಿಪಲ್ಲೆ, ನಿತ್ಯದ ಸಾಮಗ್ರಿಗಳು, ಕೃಷಿ ಬೆಳೆಗಳು ಸೇರಿದಂತೆ ಲಾರಿ ವಾಹನಗಳ ಮೇಲೆ ಅವಲಂಭಿತಗೊಂಡ ವ್ಯಾಪಾರ-ವಹಿವಾಟಿಗೆ ಸಮಸ್ಯೆ ಉಂಟಾಗಿತ್ತು.

ರಾಯಚೂರು ನಗರದ ಕರ್ನಾಟಕ ಸಂಘದ ಮುಂಭಾಗದಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆ, ವೃತ್ತ ಹಾಗೂ ಬೀದಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನಕ್ಕೆ ಬಂದು ತಲುಪಿತು. ನಂತರ ಸಂಘದ ಪದಾಧಿಕಾರಿಗಳು, ಸದಸ್ಯರು ಧರಣಿ ನಡೆಸಿ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ನೂತನ ಕಾಯ್ದೆಯಡಿ ಚಾಲಕರು ಅಪಘಾತ ಮಾಡಿ ಪರಾರಿಯಾದರೆ 7 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಖಂಡನೀಯ. ಭಾರತೀಯ ನ್ಯಾಯ ಸಂಹಿತೆ ಎರಡನೇ 2023ರ ಅಡಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಗಳ ಪ್ರಸ್ತಾಪಿತ ಕಾನೂನಿನಲ್ಲಿರುವ ನೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಹಸನ್ ಅಕ್ಬರ ನಾಗುಂಡಿ, ಸಂಘದ ಉಪಾಧ್ಯಕ್ಷ ಅಜೀಮ್ ಪಾಶ, ಸಾದೀಕ್, ರಫೀಕ್ ಸೇರಿದಂತೆ ಅನೇಕ ಖಾಸಗಿ ವಾಹನಗಳ ಸಂಘಗಳ ಪದಾಧಿಕಾರಿಗಳು,ಸದಸ್ಯರು, ಲಾರಿ ಮಾಲೀಕರು, ಚಾಲಕರು, ಸಹಾಯಕರು ಇದ್ದರು.ಮುಷ್ಕರಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಲಾರಿ ಮಾಲೀಕರ ಅನಿರ್ದಿಷ್ಟ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರ ಸಂಘ, ಆಜಾದ್ ಆಟೋ ಚಾಲಕರ ಸಂಘ, ಚಾಲಕರ ಒಕ್ಕೂಟ, ಶಂಕರನಾಗ ಸಾರಥಿ ಆಟೋ ಸಂಘ, ಶಕ್ತಿನಗರ ಟಿಪ್ಪರ್ ಮಾಲೀಕರ ಸಂಘ ಸೇರಿದಂತೆ ಅನೇಕರ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಮುಷ್ಕರಕ್ಕೆ ಬೆಂಬಲಿಸಿದರು.ವಾಹನಗಳ ತಡೆ

ಲಾರಿ ಮಾಲೀಕರ ಮುಷ್ಕರ ಹಿನ್ನೆಲೆಯಲ್ಲಿ ಲಾರಿಗಳ ಸಂಚಾರ ಬಂದ್ ಕರೆ ನೀಡಿದ್ದರಿಂದ ಪ್ರತಿಭಟನಾ ನಿರತರು ಖಾಸಗಿ ವಾಹನಗಳಿಗೆ, ಚಾಲಕರಿಗೆ ಹಾಗೂ ಜನರಿಗೆ ಕಿರಿಕಿರಿಯನ್ನು ನೀಡಿದ ಪ್ರಸಂಗಗಳು ಜರುಗಿದವು.

ಮುಂಜಾಗ್ರತಾ ಕ್ರಮವಾಗಿ ಬೇರೆ ಊರುಗಳಿಂದ ಬರುವ ಲಾರಿ, ಟ್ಯಾಂಕರ್‌ಗಲನ್ನು ಸಂಚಾರಿ ಪೊಲೀಸರು ಜಿಲ್ಲಾಧಿಕಾರಿ ನಿವಾಸದ ಸಮೀಪ ತಡೆದು ನಿಲ್ಲಿಸಿ ಬಳಿಕ ಬಿಟ್ಟುಕೊಟ್ಟರು.

ರೈತರ ಪರದಾಟ

ಲಾರಿ ಮಾಲೀಕರ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಗೆ ರೈತರು ಬೆಳೆದ ಬೆಳೆಗಳನ್ನು ತರಲು ಸಮಸ್ಯೆ ಎದುರಿಸುವಂತಾಗಿತು. ತೊಗರಿ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಲಾರಿ ಮಾಲೀಕರ ಸಮಸ್ಯೆ ಪರಿಹರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎನ್‌.ಲಕ್ಷ್ಮಣಗೌಡ ಕಡಕಂದೊಡ್ಡಿ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ