ಅರುಣ್‌ ಕುಮಾರ್‌, ಭಾಸ್ಕರ್‌ ಪ್ರಸಾದ್‌ ವಿರುದ್ಧ ಪ್ರತಿಭಟನೆ

KannadaprabhaNewsNetwork | Updated : Jun 22 2025, 11:48 PM IST

ಸರಳ ಸಜ್ಜನಿಕೆಗೆ ಹೆಸರಾದ ಇವರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಹಾಗೂ ಬೆದರಿಸುತ್ತಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ಮೈಸೂರು

ವಕೀಲ ಅರಣ್‌ಕುಮಾರ್‌ ಮತ್ತು ಭಾಸ್ಕರ್‌ಪ್ರಸಾದ್‌ ಅವರನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಮಹಾಸಭಾದ ಪದಾಧಿಕಾರಿಗಳು ನಗರದ ಪುರಭವನ ಆವರಣದ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಬಳಿ ಪ್ರತಿಭಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಅವರು ಒಳ ಮೀಸಲಾತಿಯ ವಿರೋಧಿಯಲ್ಲ. ಅರುಣ್‌ಕುಮಾರ್‌ ಮತ್ತು ಭಾಸ್ಕರ್‌ಪ್ರಸಾದ್‌ ವಿರುದ್ಧ ದೂರು ದಾಖಲಾಗಿರುವುದರಲ್ಲಿ ಸಚಿವ ಮಹದೇವಪ್ಪ ಅವರ ಪಾತ್ರ ಇಲ್ಲ ಎಂದು ತಿಳಿಸಿದರು.

ಸಚಿವ ಮಹದೇವಪ್ಪ ಮತ್ತು ಪರಿಷತ್‌ ಸದಸ್ಯ ತಿಮ್ಮಯ್ಯ ಅವರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾದ ಇವರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಹಾಗೂ ಬೆದರಿಸುತ್ತಿರುವುದು ಖಂಡನೀಯ. ಆದರೆ ಅರುಣ್‌ಕುಮಾರ್‌ ಮತ್ತು ಭಾಸ್ಕರ್‌ ಪ್ರಸಾದ್‌ಅವರು ಬಿಜೆಪಿಯ ಏಜೆಂಟ್‌ ಗಳಾಗಿ ವರ್ತಿಸುತ್ತಿದ್ದಾರೆ ಎಂದರು.

ನಮ್ಮ ನಾಯಕರು ಒಳ ಮೀಸಲಾತಿಯ ಪರವಾಗಿದ್ದಾರೆ. ಪ.ಜಾತಿ ಜನಾಗಂದವರ ಜಾತಿ ಸಮೀಕ್ಷೆ ಪ್ರಗತಿಯಲ್ಲಿದೆ. ಒಳಮೀಸಲಾತಿ ಜಾರಿಮಾಡಲು ಕಂಕಣಬದ್ಧರಾಗಿದ್ದಾರೆ. ಭಾಸ್ಕರ್‌ ಪ್ರಸಾದ್‌ ಮತ್ತು ಅರುಣ್‌ಕುಮಾರ್‌ಅವರು ತಮ್ಮ ರಾಜಕೀಯ ಪ್ರಚಾರಕ್ಕಾಗಿ ಕಾಂಗ್ರೆಸ್‌ ನಾಯಕರ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ದೂರಿದರು.

ಇದು ಸಮುದಾಯಗಳ ನಡುವೆ ದ್ವೇಷ, ವಿಭಾಗೀಯತೆ ಮತ್ತು ಒಡಕನ್ನು ಉಂಟು ಮಾಡುವ ಸಾಧ್ಯತೆ ಇದೆ. ಇಂತಹ ಕೃತ್ಯಗಳು ಸಮಾಜದಲ್ಲಿ ಅದರಲ್ಲೂ ಜನಾಂಗೀಯ ಸೌಹಾರ್ಧತೆಯನ್ನು ಕದಡುವ ಸಂಚಾಗಿದೆ. ಅದರಲ್ಲೂ ಇಂತಹ ವ್ಯಕ್ತಿಗಳಿಂದ ರಾಜಕಾರಣದಲ್ಲಿರುವ ವ್ಯಕ್ತಿಗಳಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಸಚಿವ ಮಹದೇವಪ್ಪ ಮತ್ತು ವಿಧಾನ ಪರಿಷತ್‌ಸದಸ್ಯ ಡಾ.ಡಿ. ತಿಮ್ಮಯ್ಯ ಅವರ ಕಣ್ಣುಗಳಿಗೆ ಮತ್ತು ದೈಹಿಕವಾಗಿ ಹಲ್ಲೆಯಾದರೆ ಅರುಣ್‌ಕುಮಾರ್‌ ಮತ್ತು ಭಾಸ್ಕರ್‌ಪ್ರಸಾದ್‌ಅವರೇ ನೇರ ಕಾರ, ಆದ್ದರಿಂದ ಇವರ ವಿರುದ್ಧ ದೂರು ದಾಖಲಿಸಿ, ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಾಸಭಾದ ಅಧ್ಯಕ್ಷ ಎಸ್‌. ರಾಜೇಶ್‌, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಮು, ಅಹಿಂದ ಸಂಘಟನೆ ಅಧ್ಯಕ್ಷ ದೇವಪ್ಪನಾಯಕ, ಕೇಶವ, ಸತ್ಯ, ಲೋಕೇಶ್‌ಮಾದಾಪುರ, ನಾಗೇಶ್‌, ಸೈಯದ್‌ಫಾರೂಕ್‌, ಎಸ್.ಎ. ರಹೀಮ್‌, ರವಿನಂದನ್‌, ಯೋಗೇಶ್‌ಉಪ್ಪಾರ್‌, ಶಿವಣ್ಣ, ರಾಜಶೇಖರ್‌, ಶ್ರೀನಿವಾಸ್‌ಧನಪಾಲ್‌, ಕುರುಬರಳ್ಳಿ ಪ್ರಕಾಶ್‌, ಉದಯಕುಮಾರ್‌, ಬಾಬು ಸೋಹೇಲ್‌, ಚನ್ನಯ್ಯ, ರವಿನಾಯಕ ಇದ್ದರು.