ಬ್ಯಾಂಕ್ ಅಧಿಕಾರಿಗಳು ಕಿರುಕುಳ ನಿಲ್ಲಿಸುವಂತೆ ಪ್ರತಿಭಟನೆ

KannadaprabhaNewsNetwork | Published : May 30, 2025 11:53 PM
ರೈತರ ಬಂಗಾರದ ಸಾಲದ ನವೀಕರಣ ಸಂದರ್ಭದಲ್ಲಿ ಅಸಲು ಮತ್ತು ಬಡ್ಡಿ ಒಟ್ಟಿಗೆ ಪಾವತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಲೀಡ್ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರ ಚಿನ್ನದ ಸಾಲದ ನವೀಕರಣ ಸಂದರ್ಭದಲ್ಲಿ ಅಸಲು ಮತ್ತು ಬಡ್ಡಿ ಒಟ್ಟಿಗೆ ಪಾವತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಲೀಡ್ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ನಗರದ ಜೋಡಿ ರಸ್ತೆಯಲ್ಲಿರುವ ಲೀಡ್ ಬ್ಯಾಂಕ್ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕಿರುಕುಳ ನೀಡುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕೃಷಿ ಸಾಲಕ್ಕಾಗಿ ರೈತರು ತಮ್ಮ ಆಪತ್ತು ಮತ್ತು ಸಂಕಷ್ಟಕ್ಕೆ ಅನುಗುಣವಾಗಿ ಬ್ಯಾಂಕುಗಳಲ್ಲಿ ಭವಿಷ್ಯದ ನಿಧಿಯಂತೆ ಸಂಗ್ರಹ ಮಾಡಿಕೊಂಡಿರುವ ಬಂಗಾರವನ್ನು ಅಡಮಾನವಿಟ್ಟು ಸಾಲವನ್ನು ಪಡೆದು ಕೃಷಿ ಚಟುವಟಿಕೆಗೆ ಬಳಕೆ ಮಾಡುತ್ತಾರೆ. ಆದರೆ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಬ್ಯಾಂಕುಗಳು ರೈತರ ಚಿನ್ನದ ಸಾಲಕ್ಕೆ ಅಸಲು ಬಡ್ಡಿಯನ್ನು ಒಟ್ಟಿಗೆ ಪಾವತಿ ಮಾಡಲು ಕಿರುಕುಳ ನೀಡುತ್ತಿವೆ. ತಕ್ಷಣ ಇದು ನಿಲ್ಲಬೇಕು ಎಂದು ಆಗ್ರಹಿಸಿದರು.ಜಿಲ್ಲೆಯಲ್ಲಿರುವ ಬ್ಯಾಂಕುಗಳು ರೈತರ ಬಂಗಾರದ ಸಾಲಕ್ಕೆ ಆರ್‌ಬಿಐ ನಿಯಮವಿದೆ. ಅಸಲು ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಪಾವತಿ ಮಾಡಿದರೆ ಮಾತ್ರ ನವೀಕರಣ ಮಾಡಲಾಗುವುದು ಎಂದು ರೈತರಿಗೆ ಹೇಳುತ್ತಿದ್ದಾರೆ ಎಂದರು.

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಆರ್‌ಟಿಸಿಯನ್ನು ಪಡೆದು ಬ್ಯಾಂಕುಗಳು ರೈತರ ಚಿನ್ನವನ್ನು ಗಿರವಿ ಇಟ್ಟುಕೊಂಡು ಸಾಲ ನೀಡುತ್ತಿದ್ದರು. ಆವಾಗ ನಿಗದಿತ ಸಮಯದ ಒಳಗೆ ನವೀಕರಣ ಮಾಡಿದರೆ ರೈತರ ಖಾತೆಗೆ ಮೂರು ಪರ್ಸೆಂಟ್ ಬಡ್ಡಿಯನ್ನು ಕೇಂದ್ರ ಸರ್ಕಾರ ಜಮಾ ಮಾಡುವ ನಿಯಮ ನಡೆಸಿಕೊಂಡು ಕೇಂದ್ರ ಸರ್ಕಾರ ಬಂದಿದ್ದು ಈ ನಿಯಮವನ್ನು ರದ್ದು ಮಾಡಿ ರೈತರಿಗೆ ಆರ್‌ಟಿಸಿ ಇರಲಿ ಇಲ್ಲದಿರಲಿ ಸಾಮೂಹಿಕವಾದಂತ ಬಡ್ಡಿ ವಸೂಲಿ ಮಾಡುವ ನಿಯಮವನ್ನು ಜಾರಿಗೆ ತಂದಿದೆ. ಇದನ್ನು ತಕ್ಷಣ ಕೈ ಬಿಟ್ಟು ಮೊದಲು ಇದ್ದಂತಹ ರೈತರಿಗೆ ಮೂರು ಪರ್ಸೆಂಟ್ ಬಡ್ಡಿ ಸಹಾಯಧನವನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಲೋಕಸಭಾ ಸದಸ್ಯರು ಕೃಷಿ ಕ್ಷೇತ್ರ ಉಳಿಯುವುದಾಗಿ ಕೇಂದ್ರದ ಗಮನ ಸೆಳೆದು ರೈತರ ಬಂಗಾರದ ಕೃಷಿ ಸಾಲಕ್ಕೆ ಬಡ್ಡಿ ಪ್ರೋತ್ಸಾಹ ಧನವನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕು. ಬಂಗಾರ ಬ್ಯಾಂಕಿನಲ್ಲಿ ಇರುವುದರಿಂದ ಕೇವಲ ಬಡ್ಡಿಯನ್ನು ಪಾವತಿಸಿಕೊಂಡು ಕೃಷಿ ಬಂಗಾರದ ಸಾಲವನ್ನು ನವೀಕರಣ ಮಾಡಿಕೊಡಬೇಕು. ತಕ್ಷಣ ರಾಜ್ಯ ಸರ್ಕಾರವು ರಾಜ್ಯ ಬ್ಯಾಂಕರ್ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಕ್ಕೆ ತಂದು ಆರ್‌ಬಿಐ ನಿಯಮವನ್ನು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಇಲ್ಲವಾದಲ್ಲಿ ಬೆಂಗಳೂರಿನ ಆರ್‌ಬಿಐ ವಲಯ ಕಚೇರಿ ಮುಂದೆ ಈ ನಿಯಮ ತಿದ್ದುಪಡಿಗಾಗಿ ಒತ್ತಾಯಿಸಿ ರಾಜ್ಯದ ರೈತರ ಜೊತೆಗೂಡಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಭಾಗ್ಯರಾಜ್ ಎಚ್ಚರಿಕೆ ನೀಡಿದರು. ತಕ್ಷಣ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳನ್ನು ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಸಿದ್ದರಾಜು, ಅರಳಿ ಕಟ್ಟೆ ಪ್ರಭುಸ್ವಾಮಿ, ಗುರುವಿನಪುರ ಮೋಹನ್, ಚಂದ್ರು, ಮುಕುಡಹಳ್ಳಿ ರಾಜು, ಪುಟ್ಟ ಮಲ್ಲೇಗೌಡ, ಕಿಳಲಿಪುರ ಶ್ರೀಕಂಠ, ನಂದೀಶ್, ಉರ್ದಳ್ಳಿ ರಾಮಣ್ಣ ಇತರರು ಇದ್ದರು.