ಕೋಲಾರ : ಮಾವು ಬೆಳೆಗೆ ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಬೆಂಬಲ ಬೆಲೆ ಘೋಷಿಸದಿದ್ದರೆ ನಾಳೆಯಿಂದಲೇ ಉಗ್ರ ಹೋರಾಟ ಆರಂಭಿಸಿ ಜನಪ್ರತಿನಿಧಿಗಳಿಗೆ ಫೇರಾವ್ ಹಾಕಲಾಗುವುದು ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಕೆ ನೀಡಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹೋರಾಟವನ್ನು ಯಾವುದೇ ಅನುಮತಿ ಪಡೆಯದೆ, ಮುನ್ಸೂಚನೆ ನೀಡದೆ ಏಕಾಏಕಿ ಆರಂಭಿಸಲಾಗುವುದು. ಇದರಿಂದ ಉಂಟಾಗುವಂತ ಅನಾಹುತಗಳಿಗೆ ಸರ್ಕಾರವೇ ನೇರ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.
ಹೋರಾಟಗಳಿಗೆ ದೊರೆಯದ ಮಾನ್ಯತೆ
ಮಾವು ಬೆಳೆಗಾರರು ಕಳೆದ ಮೇ 15 ರಿಂದ ಮಾವು ಬೆಳೆಗೆ ಬೆಂಬಲ ಬೆಲೆ ನೀಡಲು ೨೦ರವರೆಗೆ ಹೋರಾಟ ಮಾಡಲಾಯಿತು, ಎಪಿಎಂಸಿ ಮಾರ್ಕೇಟ್ ಬಳಿ ಜೂ.೨ರಂದು ಪ್ರತಿಭಟನೆ ನಡೆಸಿ ಬೆಂಬಲ ಬೆಲೆ ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೇವು, ನಂತರದಲ್ಲಿ ಹಲವು ಹೋರಾಟ ತಹಸೀಲ್ದಾರ್, ಡಿ.ಸಿ. ಕಚೇರಿ ಮುಂದೆ ಮಾಡಿದ್ದೇವು, ಡಿ.ಸಿ.ಕಚೇರಿಯಲ್ಲಿ ಮಾವು ಬೆಳೆಗಾರರೊಂದಿಗೆ ಸಭೆ ನಡೆಸಲಾಯಿತು. ಸಚಿವರಿಗೆ ಮನವಿ ಸಲ್ಲಿಸಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿ ಒಂದು ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗಾಗಿ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿಸಿದರು.ಕಳೆದ ೧೭ ದಿನಗಳಿಂದ ಮಾಡಿದ ಹೋರಾಟಗಳಿಗೆ ಯಾವುದೇ ಪ್ರತಿಫಲ ಸಿಗದ ಹಿನ್ನೆಲೆಯಲ್ಲಿ ರೈತರು ತೀವ್ರವಾದ ಆತಂಕದ ಪರಿಸ್ಥಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ೫೦ ಸಾವಿರ ಹೆಕ್ಟೇರ್ನಲ್ಲಿ ಮಾವು ಬೆಳೆದಿದ್ದು, ರಾಜ್ಯದ ಮೂರನೇ ಎರಡು ಭಾಗ ಕೋಲಾರ ಜಿಲ್ಲೆಯಲ್ಲಿ ಬೆಳೆಯುತ್ತಾರೆ, ಮಾವಿನ ಸಂರಕ್ಷಣೆಗೆ ಯಾವುದೇ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅನಾಥವಾದ ಮಾವು ಮಂಡಳಿ
ಮಾವು ಉಪ ಉತ್ಪನ್ನಗಳ ಯಾವುದೇ ಕೈಗಾರಿಕೆಗಳು ಇಲ್ಲವಾಗಿದೆ. ಮಾವು ಅಭಿವೃದ್ದಿ ಮಂಡಳಿ ಅನಾಥವಾಗಿದೆ. ಸರ್ಕಾರಕ್ಕೆ ಮಾವು ಬೆಳೆಗಾರರ ರೈತರ ಮೇಲೆ ನಿರಾಸಕ್ತಿ, ರಾಜ್ಯಕ್ಕೆ ಆಗುವಷ್ಟು ಮಾವು ಬೆಳೆದು ವಿದೇಶಗಳಿಗೆ ಪೂರೈಕೆ ಮಾಡುವಷ್ಟು ಬೆಳೆದಿದ್ದು ಇಂದು ಮಾವು ಬೇಡಿಕೆ ಇಲ್ಲದೆ ಬೀದಿ ಪಾಲಾಗುವಂತಾಗಿದೆ ಎಂದು ವಿಷಾದಿಸಿದರು. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಾದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಶಾಸಕರು ಇದ್ದರೂ ಸಹ ಮಾವು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸಹ ಕಣ್ಣು, ಕಿವಿಗಳು ಸೇರಿದಂತೆ ಪಂಚೇಂದ್ರಿಯಗಳನ್ನು ಕಳೆದುಕೊಂಡ ವಿಕಲಚೇತನರಾಗಿದ್ದಾರೆ. ಕೋಮುಲ್, ಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಬ್ಯೂಸಿಯಾಗಿದ್ದಾರೆ. ಅವರಿಗೆ ರೈತರ ಬಗ್ಗೆ ಗಮನ ಹರಿಸಲು ಸಮಯದ ಕೊರತೆಯುಂಟಾಗಿದೆ. ಅವರಿಗೆ ಮಾವು ಬೆಳೆಗಾರರ ಬೀದಿ ಪಾಲು ಆಗಿದ್ದರರೂ ಸಹ ಚಕಾರ ಎತ್ತುತ್ತಿಲ್ಲ, ನಾಲಿಗೆ ಬಿದ್ದು ಹೋದಂತೆ ತಟ್ಟಸ್ಥರಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ರೈತರ ಬಗ್ಗೆ ಕಾಳಜಿ ಇಲ್ಲ
ನಾವು ಮಣ್ಣಿನ ಮಕ್ಕಳು, ನಾವು ರೈತರು, ರೈತರು ಈ ದೇಶದ ಬೆನ್ನಲವು ಮುಂತಾದ ಬೊಗಳೆ ಬಿಡುವಂತ ಜನಪ್ರತಿನಿಧಿಗಳಿಗೆ ರೈತರು ಬೀದಿಗೆ ಬಿದ್ದಿದರೂ ಸಹ ಕನಿಷ್ಟ ಸ್ಪಂದಿಸುವಂತ ಮಾನವಿಯತೇ ಇಲ್ಲವಾಗಿದೆ. ಕಳೆದ ೫೦ ವರ್ಷದಿಂದ ಆಳ್ವಿಕೆ ನಡೆಸುತ್ತಿದ್ದರೂ ರೈತರ ಸಂಕಷ್ಟಗಳಿಗೆ ದಾವಿಸುತ್ತಿಲ್ಲ, ೬ ಲಕ್ಷ ಟನ್ ಮಾವು ಬೆಳೆಯುತ್ತಿದ್ದರೂ ಯಾವುದೇ ಸೌಲಭ್ಯಗಳು ಕಲ್ಪಿಸಿಲ್ಲ. ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವ ಮೂಲಕ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಸ್ತೆ, ಬೋರ್ ವೆಲ್ ಹಾಗೂ ಮನೆಗಳ ಸೌಲಭ್ಯಗಳಷ್ಟೆ ಎಂದು ತಿಳಿದಿದ್ದಾರೆ ಆದರೆ ರೈತರ ಬಗ್ಗೆ ಯಾವೂದೇ ಕಾಳಜಿಯು ಇಲ್ಲವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾದ್ಯಕ್ಷ ಈರಪ್ಪರೆಡ್ಡಿ, ಪ್ರಧಾನಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಖಜಾಂಜಿ ಬೆಲ್ಲಾಂ ಶ್ರೀನಿವಾಸ್, ಪದಾಧಿಕಾರಿಗಳಾದ ದೇವರಾಜ್, ನಾರಾಯಣಸ್ವಾಮಿ, ಆರ್.ವೆಂಕಟೇಶ್, ಸೈಯದ್ ಫಾರುಕ್ ಆಸ್ಲಾಂ ಪಾಷ ಇದ್ದರು.