ಗಜೇಂದ್ರಗಡ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ತಾಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದ ಶಾದಿ ಮಹಲ್ ಸಭಾ ಭವನದಲ್ಲಿ ತಾಲೂಕು ಕಟ್ಟಡ ಕಾರ್ಮಿಕರ ಸಮಾವೇಶ ನಡೆಯಿತು.
ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸಾಮಾಜಿಕ ಭದ್ರತೆಯಡಿ ಮಂಡಳಿ ರಚನೆಯಾಗಿ ಸೌಲಭ್ಯಗಳು ಅರ್ಹ ಕಟ್ಟಡ ಕಾರ್ಮಿಕರಿಗೆ ಸಿಗುವಂತಾಗಬೇಕು. ಅನಕ್ಷರಸ್ಥ ಕಾರ್ಮಿಕರು ಅರ್ಜಿ ಸಲ್ಲಿಸುವಾಗ ಸಣ್ಣಪುಟ್ಟ ದೋಷಗಳ ನೆಪ ಮಾಡಿ ಅವುಗಳನ್ನು ಸರಿಪಡಿಸುವ ಅವಕಾಶ ನೀಡದೆ ಅರ್ಜಿಗಳನ್ನು ವಜಾ ಮಾಡಲಾಗುತ್ತಿದೆ. ಹೀಗಾಗಿ ಅರ್ಹ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ತಲುಪಿಸಬೇಕೆಂದು ಒತ್ತಾಯಿಸಿದರು.ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ರೈತರಿಗೆ ಭೂಮಿ, ವಸತಿ, ಬೆಂಬಲ ಬೆಲೆಗಾಗಿ ಮತ್ತು ಕಾರ್ಮಿಕರ ಕೆಲಸದ ಭದ್ರತೆಗೆ ಬಲಿಷ್ಠ ಚಳವಳಿ ಕಟ್ಟಬೇಕಿದೆ. ಅಲ್ಲದೆ ರೈತರು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಆದ್ಯತೆಯಲ್ಲಿ ಪರಿಹರಿಸಲು ಮುಂದಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದರು.ಸಿಐಟಿಯು ತಾಲೂಕು ಸಂಚಾಲಕ ಮೈಬು ಹವಾಲ್ದಾರ್ ಮಾತನಾಡಿ, ಜಾತಿ, ಧರ್ಮದ ಭಾವನಾತ್ಮಕ ವಿಷಯಗಳಿಗಿಂತ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಜಾಪ್ರಭುತ್ವದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದರು.ಜಿಲ್ಲಾ ಮುಖಂಡ ಹನುಮಂತಪ್ಪ ಮಾದರ ಮಾತನಾಡಿದರು. ಕಟ್ಟಡ ಕಾರ್ಮಿಕರ ತಾಲೂಕಿನ ಅಧ್ಯಕ್ಷ ಅಂದಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. "೨೧ ಜನರ ನೂತನ ತಾಲೂಕು ಸಮಿತಿ ರಚನೆಗೊಂಡಿತು. ಅಧ್ಯಕ್ಷರಾಗಿ ಅಂದಪ್ಪ ಕುರಿ, ಕಾರ್ಯದರ್ಶಿಯಾಗಿ ಪೀರು ರಾಠೋಡ, ಖಜಾಂಚಿಯಾಗಿ ಮೆಹಬೂಬ್ ಹವಾಲ್ದಾರ್ ಮರು ಆಯ್ಕೆಗೊಂಡರು. ಇನ್ನುಳಿದಂತೆ ೧೮ ಜನ ಸದಸ್ಯರು ತಾಲೂಕು ಸಮಿತಿಗೆ ಸರ್ವಾನುಮತದಿಂದ ಆಯ್ಕೆಗೊಂಡರು. "ಈ ವೇಳೆ ಅಂದಪ್ಪ ರಾಠೋಡ, ರೇವಣಪ್ಪ ರಾಠೋಡ, ಕನಕರಾಯ ಮಾದರ, ಶಂಕ್ರಪ್ಪ ಹೊಸಮನಿ, ಹನುಮಂತಪ್ಪ ಮಾದರ, ರುದ್ರಪ್ಪ ರಾಠೋಡ, ಶರಣಪ್ಪ ಬಂಡಿವಡ್ಡರ, ಈರಪ್ಪ ಬಂಡಿವಡ್ಡರ, ಸಂತೋಷ ಕುಮಾರ್, ಅನಿಲ ರಾಠೋಡ ಇದ್ದರು.