ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಪ್ರಚೋದನಕಾರಿ ಹೇಳಿಕೆ: ಶಾಸಕ ಚನ್ನಬಸಪ್ಪ ವಿರುದ್ಧ ಕಿಡಿ

KannadaprabhaNewsNetwork | Updated : Nov 05 2024, 12:34 AM IST

ಉಪ ಚುನಾವಣೆ ಇರುವುದರಿಂದ ಬಿಜೆಪಿಯವರು ವಿನಾ ಕಾರಣ ವಕ್ಫ್‌ ಬೋರ್ಡ್‌ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅವರು ಪ್ರಚೋದಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್‌ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಉಪ ಚುನಾವಣೆ ಇರುವುದರಿಂದ ಬಿಜೆಪಿಯವರು ವಿನಾ ಕಾರಣ ವಕ್ಫ್‌ ಬೋರ್ಡ್‌ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅವರು ಪ್ರಚೋದಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್‌ ಹರಿಹಾಯ್ದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಕ್ಫ್ ವಿವಾದ ರಾಜ್ಯದೆಲ್ಲೆಡೆ ಹಬ್ಬುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ರೈತರ ಹೆಸರಿನಲ್ಲಿ ಇರುವ ಜಮೀನಿನಲ್ಲಿ ಆಕಸ್ಮಾತ್ ವಕ್ಫ್ ಹೆಸರಿನಲ್ಲಿ ಪಹಣಿ ಇದ್ದರೆ ಅದನ್ನು ತೆಗೆದು ಹಾಕಲು ಹೇಳಿದ್ದೇನೆ. ರೈತರು ಆತಂಕ ಪಡುವುದು ಬೇಡ ಎಂದಿದ್ದಾರೆ. ಆದರೂ ಕೂಡ ಬಿಜೆಪಿಯವರು ಈ ವಿಷಯವನ್ನು ಉಪಚುನಾವಣೆಗಳ ಹಿನ್ನಲೆಯಲ್ಲಿ ರಾಜಕಾರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅದರಲ್ಲೂ ಶಾಸಕ ಎಸ್.ಎನ್. ಚನ್ನಬಸಪ್ಪನವರು ಜಮೀರ್ ಅಹಮ್ಮದ್ ಅವರು ಶಿವಮೊಗ್ಗಕ್ಕೆ ಬರುವುದು ಬೇಡ ಎಂದಿದ್ದಾರೆ. ಇಲ್ಲಿಯೂ ಕೂಡ ಅವರು ವಕ್ಫ್ ಆಸ್ತಿಯನ್ನು ಉಳಿಸಲು ಬರುತ್ತಾರೆ. ಇದು ಹಿಂದೂ ಸಮಾಜಕ್ಕೆ ಗೊತ್ತಾಗುತ್ತದೆ. ಆಗಲು ಕೂಡ ಜನರು ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಶಾಸಕರಾಗಿ ಚನ್ನಬಸಪ್ಪ ಅವರು ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಈಗಾಗಲೇ ಈ ಹಿಂದೆ ಎಸ್.ಎನ್. ಚನ್ನಬಸಪ್ಪನವರು ಹೊಡಿ ,ಬಡಿ , ಕಡಿ ಮಾತಿಗೆ ಪ್ರಸಿದ್ಧರಾದವರು. ಮುಖ್ಯಮಂತ್ರಿಗಳ ಚಂಡನ್ನೇ ರುಂಡಾಡುತ್ತೇವೆ ಎಂದವರು ಬರೀ ಬೆಂಕಿ ಹಚ್ಚುವ ಮಾಡುವರು. ಇವರಿಗೆ ಶಿವಮೊಗ್ಗ ಶಾಂತಿಯಿಂದ ಇರುವುದು ಬೇಕಾಗಿಲ್ಲ. ಯಾವಾಗಲೂ 144 ಸೆಕ್ಷನ್ ಜಾರಿಯಲ್ಲಿ ಇರಬೇಕು ಎಂಬುದು ಇವರ ಬಯಕೆ ಎಂದು ಕಿಡಿಕಾರಿದರು.ವಕ್ಫ್ ಬೋರ್ಡ್‍ನಲ್ಲಿ ಸುಮಾರು 15ಕ್ಕೂ ಹೆಚ್ಚು ಬಿಜೆಪಿಯ ಸದಸ್ಯರು ಇದ್ದಾರೆ ಅಲ್ಲವೇ? ಸಚಿವ ಜಮೀರ್ ಅಹಮ್ಮದ್ ಖಾನ್‍ರವರು ಶಿವಮೊಗ್ಗಕ್ಕೆ ಬರುವುದು ಇಲ್ಲಿನ ಆಶ್ರಯ ಮನೆಗಳ ವಿಚಾರಕ್ಕಾಗಿ. ಅಲ್ಪಸಂಖ್ಯಾತರಿಗೆ ಜಾಗ ಕೊಡಲು ಅವರು ಬರುತ್ತಿಲ್ಲ. ಅನೇಕ ಬಡವರು ಮನೆಗಾಗಿ ಕಾಯುತ್ತ ಇರುತ್ತಾರೆ. ಅಲ್ಲದೇ ಶಿವಮೊಗ್ಗಕ್ಕಾಗಿಯೇ ₹125 ಕೋಟಿ ಅನುದಾನವನ್ನು ಕೂಡ ಸರ್ಕಾರವೇ ಬಿಡುಗಡೆ ಮಾಡಿ ಫಲಾನುಭವಿಗಳ ಹಣವನ್ನು ಕಟ್ಟಬೇಕಾಗಿದೆ. ಹೀಗಿದ್ದು ಶಾಸಕರ ಈ ಮಾತು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಕುಮಾರ್, ದೇವೇಂದ್ರಪ್ಪ, ಖಲೀಂ ಪಾಶಾ, ಎಸ್.ಟಿ. ಚಂದ್ರಶೇಖರ್, ಮಧು, ಬಾಲಾಜಿ, ಯಮುನಾರಂಗೇಗೌಡ ಮುಂತಾದವರು ಇದ್ದರು.