ಹಗರಿಬೊಮ್ಮನಹಳ್ಳಿ: ನೆಮ್ಮದಿ ಹುಡುಕುವ ಭರದಲ್ಲಿ ಜನರು ಒತ್ತಡಕ್ಕೆ ಒಳಗಾಗಿ ದಿನವಿಡೀ ಶ್ರಮಿಸುತ್ತಿದ್ದಾರೆ. ದುಡಿದಿರುವ ಹಣ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಪೂಜೆ, ದೈವ ನಂಬಿಕೆ ಮತ್ತು ಧ್ಯಾನ ನೆಮ್ಮದಿಯ ಬದುಕಿಗೆ ಮೂಲವಾಗಿದೆ ಎಂದು ಚಿತ್ತಾಪುರದ ದಂಡೋತಿಯ ಬಾಲಯೋಗಿನಿ ಜಯಶ್ರೀ ಮಾತಾಜಿ ಕಿವಿಮಾತು ಹೇಳಿದರು.ಪಟ್ಟಣದ ಜಗದಂಬಾ ದೇಗುಲದ ಕಳಸಾರೋಹಣ ಅಂಗವಾಗಿ ದೇಗುಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಣೇಶ ಹಾಗೂ ದತ್ತಾತ್ರೇಯ, ನೂತನ ಕಳಸದ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂಜೆಗೈದಿರುವ ಗಣೇಶ ಹಾಗೂ ದತ್ತಾತ್ರೇಯ ಮೂರ್ತಿಗಳ ಜೊತೆಗೆ ಕಳಶಗಳ ಜಲಾಧಿವಾಸ ನಡೆಸಲಾಯಿತು. ಪುರೋಹಿತ ಬದರಿನಾರಾಯಣ ಆಚಾರ್ ನೇತೃತ್ವದಲ್ಲಿ ಸಂಗಡಿಗರಾದ ಬಿ.ಕೆ.ಕೃಷ್ಣರಾವ್, ಗೋಪಿ ಭಟ್ಟರು, ಶೇಷಗಿರಿ ಆಚಾರ್ ಮತ್ತು ಸುಬ್ರಹಣ್ಯ ಆಚಾರ್ ಶ್ರದ್ಧಾ ಭಕ್ತಿಯಿಂದ ಪೂಜೆ, ಹೋಮ ನೆರವೇರಿಸಿದರು. ದೇಗುಲದ ಪೂಜಾರಿ ರಾಘವೇಂದ್ರ ನಿರಂಜನ್ ಸಹರಿಸಿದರು.
ಇದಕ್ಕೂ ಮುನ್ನ ಭಾನುವಾರ ಸಂಜೆ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಇರಿಸಲಾಗಿದ್ದ ಗಣೇಶ, ದತ್ತಾತ್ರೇಯ ಮೂರ್ತಿಗಳ ಜತೆ ಕಳಶಗಳ ಗಂಗಾ ಪೂಜೆಗೈದು ಬೆಳ್ಳಿಯ ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ಜಗದಂಬಾ ದೇವಸ್ಥಾನಕ್ಕೆ ತರಲಾಯಿತು.ಮೆರವಣಿಗೆಯಲ್ಲಿ ಕಳಸ ಮತ್ತು ಕುಂಭ ಹೊತ್ತು ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು. ಜಾನಪದ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು.