ಚೆಲುವನ ದೇಗುಲದಲ್ಲಿ ಸಂಭ್ರಮದಿಂದ ನಡೆದ ಪುನರ್ವಸು ಉತ್ಸವ

KannadaprabhaNewsNetwork |  
Published : Feb 11, 2025, 12:47 AM IST
10ಕೆಎಂಎನ್ ಡಿ2021,22 | Kannada Prabha

ಸಾರಾಂಶ

ಕ್ರಿ.ಶ.1017ರ ಬಹುದಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರದಂದು ತೊಂಡನೂರಿನಿಂದ ಸಾವಿರ ಶಿಷ್ಯರೊಂದಿಗೆ ಯದುಗಿರಿಗೆ ಆಗಮಿಸಿದ ಭಗವದ್ ರಾಮಾನುಜರು ಬೆಟ್ಟದ ಮಧ್ಯೆ ಕಾಡಿನ ನಡುವೆಯಿದ್ದ ಹುತ್ತಕಂಡು ಹಿಡಿದು ಕಲ್ಯಾಣಿ ತೀರ್ಥ ಮತ್ತು ಹಾಲಿನಿಂದ ಹುತ್ತಕರಗಿಸಿ ಮೊದಲ ಅಭಿಷೇಕ ಮಾಡಿ ಶ್ರೀಚೆಲುವನಾರಾಯಣನ ದರ್ಶನ ಪಡೆದ ಕಾರಣ ಪ್ರತಿ ಸಂವತ್ಸವರದಲ್ಲೂ ಮಕರಶುಕ್ಲ ಪುನರ್ವಸುವಿನಂದು ಪುನರ್ವ ಉತ್ಸವ ನೆರವೇರುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪುನರ್ವಸು ಉತ್ಸವ ಸೋಮವಾರ ಸಡಗರ ಸಂಭ್ರಮದಿಂದ ನೆರವೇರಿತು.

ಕ್ರಿ.ಶ.1017ರ ಬಹುದಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರದಂದು ತೊಂಡನೂರಿನಿಂದ ಸಾವಿರ ಶಿಷ್ಯರೊಂದಿಗೆ ಯದುಗಿರಿಗೆ ಆಗಮಿಸಿದ ಭಗವದ್ ರಾಮಾನುಜರು ಬೆಟ್ಟದ ಮಧ್ಯೆ ಕಾಡಿನ ನಡುವೆಯಿದ್ದ ಹುತ್ತಕಂಡು ಹಿಡಿದು ಕಲ್ಯಾಣಿ ತೀರ್ಥ ಮತ್ತು ಹಾಲಿನಿಂದ ಹುತ್ತಕರಗಿಸಿ ಮೊದಲ ಅಭಿಷೇಕ ಮಾಡಿ ಶ್ರೀಚೆಲುವನಾರಾಯಣನ ದರ್ಶನ ಪಡೆದ ಕಾರಣ ಪ್ರತಿ ಸಂವತ್ಸವರದಲ್ಲೂ ಮಕರಶುಕ್ಲ ಪುನರ್ವಸುವಿನಂದು ಪುನರ್ವ ಉತ್ಸವ ನೆರವೇರುತ್ತಾ ಬಂದಿದೆ.

ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ಕ್ರೋದಿನಾಮ ಸಂವತ್ಸರದ ಮಕರ ಶುಕ್ಲಪುನರ್ವಸು ಪವಿತ್ರ ದಿನವಾದ ಸೋಮವಾರ ಪುನರ್ವಸು ಮಹೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಉತ್ಸವದ ನಿಮಿತ್ತ ಚೆಲುವನಾರಾಯಣನ ದೇವಾಲಯದ ಆವರಣವನ್ನು ರಂಗವಲ್ಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.

ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸಿದ ರಾಮಾನುಜರು ತಿರುನಾರಾಯಣನ ದರ್ಶನ ಭಾಗ್ಯಪಡೆದ 929ನೇ ವರ್ಷದ ಪುನರ್ವಸು ಉತ್ಸವದ ಅಂಗವಾಗಿ ಬೆಳಗ್ಗೆ 5.30ಕ್ಕೆ ರಾಮಾನುಜಾಚಾರ್ಯರಿಗೆ ವೇದಪಾರಾಯಣ ಮತ್ತು ವಿಶೇಷ ಆರಾಧನೆಯೊಂದಿಗೆ ಅಭಿಷೇಕ ಮಾಡಲಾಯಿತು.

7ರ ವೇಳೆ ಕಲ್ಯಾಣಿಗೆ ಉತ್ಸವ ನೆರವೇರಿಸದ ಬಳಿಕ 10.30ರವರೆಗೆ ಕಲ್ಯಾಣಿಯಲ್ಲಿ ಶ್ರೀರಾಮಾನುಜರಿಗೆ ನಿತ್ಯ ಪೂಜಾ ಕೈಂಕರ್ಯ ನೆರವೇರಿತು. ಕಲ್ಯಾಣಿಯಿಂದ ಹೊರಟ ಆಚಾರ್ಯರ ಉತ್ಸವ ಮದ್ಯಾಹ್ನ 12.30ರ ವೇಳೆಗೆ ದಿವ್ಯಪ್ರಬಂಧ ಪಾರಾಯಣ, ವಿಶೇಷ ಮಂಗಳವಾದ್ಯದೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ತಲುಪಿತು.

ಶ್ರೀವೈಷ್ಣವ ಪಾರಾಯಣದವರು ಹುತ್ತ ಕರಗಿಸಿ ಚೆಲುವನಾರಾಯಣಸ್ವಾಮಿಯನ್ನು ದರ್ಶನ ಮಾಡಿ ಸಂತೋಷಗೊಂಡ ರಾಮಾನುಜರೇ ಸ್ವತಃ ಹಾಡಿದ ದಿವ್ಯಮಂತ್ರವನ್ನು ಒಕ್ಕೊರಲಿನಿಂದ ಭಕ್ತಿಯೊಂದಿಗೆ ಪಾರಾಯಣ ಮಾಡಿದರು. ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ಆಚಾರ್ಯರ ದರ್ಶನ ಪಡೆದು ಪುನೀತರಾದರು.

ಭಕ್ತರ ಮನಸೂರೆಗೊಂಡ ತಟ್ಟೆಗಳ ವೈಭವ:

ವಂಗೀಪುರಂ ತಿರುಮಾಳಿಗೆಯಲ್ಲಿ ರಾಮಾನುಜರಿಗೆ ಸಮರ್ಪಿಸಲು ನೂರಾರು ತಟ್ಟೆಗಳಲ್ಲಿ ಸೇಬು, ಸೀಬೆ, ದಾಳಿಂಬೆ, ಪರಂಗಿ, ಚಕೋತ, ದ್ರಾಕ್ಷಿ, ಮಾವು, ಖರ್ಜೂರ, ಕಲ್ಲುಸಕ್ಕರೆ, ತೆಂಗು, ಕೊಬ್ಬರಿ ಹೀಗೆ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವುಗಳನ್ನು ಜೋಡಿಸಲಾಗಿತ್ತು.

ಉತ್ಸವ ದೇವಾಲಯ ತಲುಪಿದ ನಂತರ ಆಂಧ್ರ, ತಮಿಳುನಾಡು ಮುಂತಾದ ಕಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರೊಂದಿಗೆ ಇಳೆಯಾಳ್ವಾರ್‌ಸ್ವಾಮೀಜಿ ದಂಪತಿ ವಿದ್ವಾನ್‌ರಾಮಪ್ರಿಯ ಭಾ.ವಂಪಾರ್ಥಸಾರಥಿ, ಭಾ.ವಂ ಯಾಮುನಾಚಾರ್ಯ, ಛತ್ರಿ, ಚಾಮರ, ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತ ಭವ್ಯಮೆರವಣಿಗೆಯಲ್ಲಿ ತಟ್ಟೆಗಳನ್ನು ಕೊಂಡೊಯ್ದು ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಸಮರ್ಪಿಸಿದರು.

ವಿಶೇಷ ಪೂಜಾ ಕೈಂಕರ್ಯ ಮತ್ತು ನಿವೇದನ ನಡೆದ ನಂತರ ಹಣ್ಣುಗಳಿಂದ ಮಾಡಿದ ಪಂಚಾಮೃತ ಮತ್ತು ಕಂದಂಬ ಸಕ್ಕರೆ ಪೊಂಗಲ್, ದದಿಯೋದನ ಪ್ರಸಾದಗಳನ್ನು ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಣೆ ಮಾಡಲಾಯಿತು. ರಾತ್ರಿ ರಾಮಾನುಜರು ಸ್ವಸ್ಥಾನಕ್ಕೆ ಮರಳುವ ಮೂಲಕ ಪುನರ್ವಸು ಕೈಂಕರ್ಯಗಳು ಮುಕ್ತಾಯವಾದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ