ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆಗೆ ಪೂರ್ಣಿಮಾ, ಮಹಿಳಾ ಕಾಂಗ್ರೆಸ್ ಖಂಡನೆ

KannadaprabhaNewsNetwork | Published : Apr 17, 2024 1:19 AM

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಅಪಮಾನ ಹೇಳಿಕೆ ನೀಡಿದ್ದಾರೆ. ಪದೇ ಪದೇ ಹೆಣ್ಣು ಮಕ್ಕಳ ಬಗ್ಗ ಇಂತಹುದ್ದೇ ಅಪವಾದಗಳನ್ನು ಮಾಡುತ್ತಾರೆ. ಕಳೆದ ಬಾರಿ ಸುಮಲತಾ ಅವರಿಗೆ ಗಂಡ ಸತ್ತು ೩ ತಿಂಗಳಾಗಿಲ್ಲ ಆಗಲೇ ರಾಜಕೀಯ ಬೇಕಾ ಎಂದು ನಿಂದಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್‌ನ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದನ್ನು ಅತ್ಯಾಚಾರ ವಿರೋಧಿ ಆಂದೋಲನ ಸಮಿತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಖಂಡಿಸಿದ್ದಾರೆ.

ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಅಪಮಾನ ಹೇಳಿಕೆ ನೀಡಿದ್ದಾರೆ. ಪದೇ ಪದೇ ಹೆಣ್ಣು ಮಕ್ಕಳ ಬಗ್ಗ ಇಂತಹುದ್ದೇ ಅಪವಾದಗಳನ್ನು ಮಾಡುತ್ತಾರೆ. ಕಳೆದ ಬಾರಿ ಸುಮಲತಾ ಅವರಿಗೆ ಗಂಡ ಸತ್ತು ೩ ತಿಂಗಳಾಗಿಲ್ಲ ಆಗಲೇ ರಾಜಕೀಯ ಬೇಕಾ ಎಂದು ನಿಂದಿಸಿದ್ದರು. ನಂತರ ಕೆ.ಆರ್.ಎಸ್. ಡ್ಯಾಮ್ ನೀರಿನ ಸೋರಿಕೆಯ ವಿಚಾರಕ್ಕೆ ಧನಿ ಎತ್ತಿದ್ದ ಸುಮಲತಾ ಅವರನ್ನು ಡ್ಯಾಮ್‌ಗೆ ಅಡ್ಡ ಮಲಗಿಸಿ ಎಂದು ಹೇಳಿದ್ದನ್ನು ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಯಾವ ನೈತಿಕತೆ ಇಟ್ಟುಕೊಂಡು ಜಿಲ್ಲೆಯ ಜನರ ಮತ ಕೇಳುತ್ತಾರೆ ಎಂದ ಅವರು, ಸುಮಲತಾ ಅವರೂ ಸಹ ಕಳೆದ ಬಾರಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ ಕಾಂಗ್ರೆಸ್ ಮತಗಳನ್ನು ಪಡೆದು ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನಿಮ್ಮ ಬಗ್ಗೆ ಲಘುವಾಗಿ ಮಾತನಾಡಿದವರ ಪರವಾಗಿ ನಿಲ್ಲುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಂಡ್ಯ ತಾಲೂಕು ಹಾಡ್ಯ ಗ್ರಾಮದಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣದಲ್ಲೂ ನಾವು ದೊಡ್ಡ ಮಟ್ಟದ ಹೋರಾಟ ಮಾಡಿದ್ದೇವೆ. ಆದರೂ ಕಾಂಗ್ರೆಸ್ ಪರವಾಗಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮುಖಂಡರಾದ ಸಿ. ಕುಮಾರಿ, ಮಂಜುಳಾ, ಅಂಜಲಿ, ರಾಧಮಣಿ, ಶಿಲ್ಪ ಇತರರು ಗೋಷ್ಠಿಯಲ್ಲಿದ್ದರು.

ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಕೆ.ಆರ್.ಪೇಟೆ:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವನಗುಡಿ ಆವರಣದಿಂದ ಹಳೆ ಪುರಸಭೆ ಕಚೇರಿ ವೃತ್ತದವರೆಗೆ ಕಾರ್ಯಕರ್ತೆಯರು ಮೆರವಣಿಗೆ ನಡೆಸಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ನಾಡಿನ ಸಮಸ್ತ ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಂಡ್ಯ ಲೋಕಸಭಾ ಕ್ಷೇತ್ರದ ಮಹಿಳಾ ಘಟಕದ ಕಾಂಗ್ರೆಸ್ ಉಸ್ತುವಾರಿ ಇಂದಿರಾ ಸತೀಶ್ ಬಾಬು ಮಾತನಾಡಿ, ನಾಡಿನ ಹೆಣ್ಣು ಮಕ್ಕಳ ಬಗ್ಗೆ ಕುಮಾರಸ್ವಾಮಿ ಅವರು ಲಘುವಾಗಿ ಮಾತನಾಡಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನಾಡಿನ ಹೆಣ್ಣು ಮಕ್ಕಳು ದಾರಿ ತಪ್ಪಿಲ್ಲ. ಬದಲಾಗಿ ಆರ್ಥಿಕವಾಗಿ ಸದೃಢಗೊಂಡಿದ್ದಾರೆ ಎಂದರು.

ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಮಂಡ್ಯದ ಮಹಿಳೆಯರು ಮಹಿಳಾ ಕುಲದ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ತಾಲೂಕು ಮಹಿಳಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಾದ ಕೆ.ಬಿ.ಪ್ರತಿಮಾ, ಲೋಲಾಕ್ಷಿ, ತಾಲೂಕು ಕಾಂಗ್ರೆಸ್ ಸೇವಾದಳ ಅಧ್ಯಕ್ಷೆ ಶಿವಮ್ಮ, ಮುಖಂಡರಾದ ಪದ್ಮಾ ಮೋಹನ್, ಗುಣಲಕ್ಷ್ಮಿ, ಅನುರಾಧಾ, ಮಮತಾ ಸೇರಿದಂತೆ ಹಲವರು ಇದ್ದರು.

Share this article