ಸವಣೂರು: ಅಂಧರ ಬಾಳಿನ ಆಶಾಕಿರಣ, ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಅಂತಃಕರಣದ ಮನೋಭಾವ ಸಮಾಜದಲ್ಲಿ ಬೆಳೆಯಬೇಕಾಗಿದೆ ಎಂದು ತೊಂಡೂರ ಗ್ರಾಮದ ಸಿದ್ಧಲಿಂಗೇಶ್ವರ ಕಲ್ಮಠದ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.ತಾಲೂಕಿನ ತೊಂಡೂರ ಗ್ರಾಮದ ಸಿದ್ಧಲಿಂಗೇಶ್ವರ ಕಲ್ಮಠದಲ್ಲಿ ಮಂಗಳವಾರ ಡಾ. ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಡಾ. ಪುಟ್ಟರಾಜ ಗವಾಯಿಗಳು ಸಾವಿರಾರು ವಿದ್ಯಾರ್ಥಿಗಳ ಪಾಲಿನ ದೇವರಾಗಿದ್ದರು. ಸಂಗೀತ ಲೋಕದ ಪಾಂಡಿತ್ಯ ಹೊಂದಿ ಕಣ್ಣು ಇಲ್ಲದವರ ಪಾಲಿನ ಆರಾಧ್ಯ ದೈವ ಆಗಿದ್ದರು. ಅವರ ಬದುಕು ನಮಗೆ ಪ್ರೇರಣೆ ನೀಡಲಿ ಎಂದರು.ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಶ್ರೀಮಠದ ಆವರಣದಲ್ಲಿ ತೆಂಗಿನ ಸಸಿ ನೆಡಲಾಯಿತು. ಡಾ. ಪುಟ್ಟರಾಜ ಗವಾಯಿಗಳ ಯುವ ಬಳಗ ಮತ್ತು ಗ್ರಾಮಸ್ಥರು ಏರ್ಪಡಿಸಿದ್ದ ಅನ್ನ ಪ್ರಸಾದಕ್ಕೆ ಬಸವಶಾಂತಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಹಾವೇರಿ: ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಅತಿಪ್ರಮುಖವಾಗಿದ್ದು, ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗವು ಒಂದು ಅದ್ಭುತ ಸಾಧನವಾಗಿದೆ. ಯೋಗಭ್ಯಾಸವನ್ನು ದಿನನಿತ್ಯದ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ, ರೋಗರಹಿತ ಜೀವನವು ನಮ್ಮದಾಗುತ್ತದೆ ಎಂದು ರಾಣಿಬೆನ್ನೂರಿನ ವರ್ತಕ ಹಾಗೂ ಯೋಗಪಟು ವಾಸುದೇವ ಗುಪ್ತಾ ತಿಳಿಸಿದರು.
ನಗರದ ರೋಟರಿ ಸಭಾಭವನದಲ್ಲಿ ಜೆಸಿಐ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯವೇ ಭಾಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯೋಗ ಕೇವಲ ಋಷಿಮುನಿಗಳಿಗೆ ಮಾತ್ರ ಸೀಮಿತವಲ್ಲ. ಅದು ಎಲ್ಲರ ಜೀವನ ವಿಧಾನವಾಗಿದೆ. ಸಾತ್ವಿಕ ಆಹಾರ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಗಳು ನಮ್ಮಲ್ಲಿ ಉತ್ತಮ ಗುಣಗಳನ್ನು ಪ್ರೇರೇಪಿಸುತ್ತವೆ. ಸದೃಢ ದೇಹವು ಸದೃಢ ಮನಸ್ಸನ್ನು ಹೊಂದುತ್ತದೆ. ಆರೋಗ್ಯವಂತ ಸಮಾಜವು ಆರೋಗ್ಯವಂತ ದೇಶದ ಲಕ್ಷಣವಾಗಿದೆ ಎಂದರು.ಜೆಸಿಐನ ಅಧ್ಯಕ್ಷೆ ವನಿತಾ ಮಾಗನೂರ ಮಾತನಾಡಿ, ಯುವಜನರಿಗೆ ನಾಯಕತ್ವ ಅವಕಾಶ ಕೊಡುವುದರ ಜತೆಗೆ ಅವರಿಗೆ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿಲು ಜೆಸಿಐ ವೇದಿಕೆ ಕಲ್ಪಿಸುತ್ತದೆ. ಇಂಥ ವೇದಿಕೆಗಳನ್ನು ಯುವಜನರು ಬಳಸಿಕೊಳ್ಳಬೇಕೆಂದರು.ಸಮಾರಂಭದಲ್ಲಿ ಮೀನಾ ಗುಪ್ತಾ, ಶೋಭಾ ತಾಂಡೂರ, ವಿರಾಜ ಕೋಟಕ್, ಸುಮನ್ ಕಡಕೋಳ, ರೇಷ್ಮಾ ಮುಷ್ಠಿ, ಮೇಘಾ ಇತರರು ಇದ್ದರು. ವನಿತಾ ಮಲ್ಲನಗೌಡರ ಕಾರ್ಯಕ್ರಮ ನಿರ್ವಹಿಸಿದರು.