ಪುತ್ತೂರು: ಇತ್ತೀಚೆಗೆ ಬಿಜೆಪಿಯವರು ನಡೆಸಿದ ಪ್ರತಿಭಟನೆಯೊಂದರಲ್ಲಿ ಶಾಸಕ ಅಶೋಕ್ ರೈ ಭಾರತ್ ಮಾತಾ ಕೀ ಜೈ ಅನ್ತಾರೆ. ಮೋದಿಜಿಗೆ ಬೈತಾರೆ ಎಂಬ ಹೇಳಿಕೆ ನೀಡಿದ್ದಾರೆ. ಭಾರತ್ ಮಾತಾ ಕೀ ಜೈ ಅನ್ನಲು ಬಿಜೆಪಿಯವರು ಪೇಟೆಂಟ್ ತಗೊಂಡಿದ್ದಾರಾ? ನನ್ನ ಕೊನೆಯ ಉಸಿರು ಇರುವವರೆಗೆ ಭಾರತ್ ಮಾತಾ ಕೀ ಜೈ ಅನ್ನುತ್ತೇನೆ. ನಾನೊಬ್ಬ ಹಿಂದೂ ಅನ್ನುತ್ತೇನೆ. ಇದಕ್ಕೆ ಅವರ ಅಪ್ಪಣೆ ಬೇಕಾಗಿಲ್ಲ ಎಂದು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಹೇಳಿದ್ದಾರೆ. ಮೂವರು ಫಲಾನುಭವಿಗಳಿಗೆ ಪುತ್ತೂರು ಶಾಸಕರು ೯೪ಸಿ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಬಿಜೆಪಿ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯಲ್ಲಿ ಶಾಸಕರ ವಿರುದ್ದ ಹೇಳಿಕೆ ನೀಡಲಾಗಿತ್ತು. ಈ ಬಗ್ಗೆ ಸೋಮವಾರ ತನ್ನ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಪ್ರತಿಭಟನೆಯಲ್ಲಿ ಒಬ್ಬರು ‘ಅವನ ಅಪ್ಪನ ಜಾಗ ಕೊಡುವುದಾ’ ಎಂದು ತನ್ನ ತಂದೆಗೆ ಬೈದು ಅವಮಾನಿಸಿದ್ದಾರೆ. ರಾಜಕೀಯದಲ್ಲಿ ಟೀಕೆಗಳು ಸಹಜ. ಆದರೆ ಸಂಸ್ಕಾರಯುತ ಅಪ್ಪ-ಅಮ್ಮನಿಗೆ ಹುಟ್ಟಿದ ಯಾರೂ ಇನ್ನೊಬ್ಬರ ತಂದೆಗೆ ಬೈಯುವ ಕೆಲಸ ಮಾಡುವುದಿಲ್ಲ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಆದರೆ ನಾನು ಆತನ ವಿರುದ್ದ ಕಟು ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದರು.