ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇವಾಲಯದ ಸಪ್ತಸ್ವರ ನಾದ ಆಲಿಸಲು ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ದೇಶ, ವಿದೇಶಿ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ಸಿಹಿ ಸುದ್ದಿ ನೀಡಿದೆ. ಈಗ ದೇವಾಲಯದ ಕಂಬಕ್ಕೆ ಕ್ಯುಆರ್ ಕೋಡ್ ಅಂಟಿಸಿದ್ದು, ಇದನ್ನು ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದರೆ ಸಪ್ತಸ್ವರ ನಾದ ಹೊರಹೊಮ್ಮುತ್ತಿದೆ.ವಿಜಯ ವಿಠಲ ದೇವಾಲಯದಲ್ಲಿ ಸಪ್ತಸ್ವರ ಹೊರಡಿಸುವ 56 ಕಂಬಗಳನ್ನು ನಿರ್ಮಿಸಲಾಗಿತ್ತು. ಈಗ 42 ಕಂಬಗಳಿವೆ. ಈ ಕಂಬಗಳಿಂದ ಹೊರಹೊಮ್ಮುವ ಪಂಚವಾದ್ಯ, ಜಲ ತರಂಗ, ಗಂಟೆನಾದ, ಘಟವಾದ್ಯ, ಡಮರುಗ, ಮೃದಂಗ, ವೀಣೆ ನಾದ ಆಲಿಸಲು ಈಗ ಕ್ಯುಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಇದು ಪ್ರಾಯೋಗಿಕ ಹಂತದಲ್ಲಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಿ ದೇಶ, ವಿದೇಶಿ ಪ್ರವಾಸಿಗರ ಬಹುದಿನದ ಬೇಡಿಕೆ ಈಡೇರಿಸಿದಂತಾಗಲಿದೆ ಎಂದು ಹೇಳುತ್ತಾರೆ ಪುರಾತತ್ವ ಇಲಾಖೆಯ ಅಧಿಕಾರಿಗಳು.
ಏಕೆ ಕ್ಯುಆರ್ ಕೋಡ್?: ವಿಜಯ ವಿಠಲ ದೇವಾಲಯದ ಸಪ್ತಸ್ವರ ಮಂಟಪದ ನಾದ ಆಲಿಸಲು ಪ್ರವಾಸಿಗರು ಕಂಬಗಳನ್ನು ಮುಟ್ಟಲಾರಂಭಿಸಿದ್ದು, ಇದರಿಂದ ಕಂಬಗಳು ನೈಜ ಸ್ವರೂಪ ಕಳೆದುಕೊಳ್ಳಲಾರಂಭಿಸಿದ ಹಿನ್ನೆಲೆಯಲ್ಲಿ ಕಂಬಗಳನ್ನು ಮುಟ್ಟುವುದನ್ನು ಪುರಾತತ್ವ ಇಲಾಖೆ ನಿರ್ಬಂಧಿಸಿದೆ. ಈ ಕಾರ್ಯ ಮಾಡಿದರೂ ಪ್ರವಾಸಿಗರು ಸಪ್ತಸ್ವರ ನಾದ ಆಲಿಸುವ ಬೇಡಿಕೆ ಈಡುತ್ತಲೇ ಬಂದಿದ್ದರು. ಇನ್ನು ಪ್ರವಾಸಿಗರು ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಕಂಬಗಳನ್ನು ಮುಟ್ಟುವುದು ನಡದೇ ಇತ್ತು. ಇದನ್ನು ತಪ್ಪಿಸಲು ಈಗ ಕ್ಯುಆರ್ ಕೋಡ್ ಮೊರೆ ಹೋಗಲಾಗಿದೆ. ಇದರಿಂದ ಪ್ರವಾಸಿಗರ ಬೇಡಿಕೆ ಈಡೇರಿಸಿದಂತಾಗಲಿದೆ. ಜೊತೆಗೆ ಕಂಬಗಳನ್ನು ರಕ್ಷಿಸಿದಂತಾಗಲಿದೆ ಎಂದು ಈ ಐಡಿಯಾವನ್ನು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ.ವಿಜಯ ವಿಠಲ ದೇವಾಲಯದ ಆವರಣದಲ್ಲೇ ಕಲ್ಲಿನ ತೇರು ಇದೆ. ಈ ಸ್ಮಾರಕಕ್ಕೂ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಪ್ತಸ್ವರ ನಾದ ಹೊರಡಿಸುವ ಕಂಬಗಳ ಸಂರಕ್ಷಣೆಗೂ ಒತ್ತು ನೀಡಲಾಗಿದೆ. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಕಾಪಾಡಲು ಈ ಕಾರ್ಯವನ್ನು ಅಧಿಕಾರಿಗಳು ಮಾಡಿದ್ದಾರೆ.
ದೇವಾಲಯದ ಕಂಬಗಳಲ್ಲಿ ಹೊರಡುವ ಸಪ್ತಸ್ವರ ನಾದವನ್ನು ಕ್ಯುಆರ್ ಕೋಡ್ ಮೂಲಕ ಆಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಕಾರ್ಯ ಪ್ರಾಯೋಗಿಕ ಹಂತದಲ್ಲಿದ್ದು, ಈಗ ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ಕಡೆ ಇಡಲು ವ್ಯವಸ್ಥೆ ಮಾಡಲು ಕೇಂದ್ರ ಪುರಾತತ್ವ ಇಲಾಖೆ ಮುಂದಾಗಿದೆ.ಹಂಪಿಗೆ ವಾರ್ಷಿಕ 30 ಲಕ್ಷಕ್ಕೂ ಅಧಿಕ ದೇಶಿ ಪ್ರವಾಸಿಗರು ಹಾಗೂ 3 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಈಗಾಗಲೇ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಗ ಸಪ್ತಸ್ವರ ಹೊರಡಿಸುವ ನಾದವನ್ನು ಆಲಿಸಲು ಕ್ಯುಆರ್ ಕೋಡ್ ಮೂಲಕ ವ್ಯವಸ್ಥೆ ಮಾಡಲಾಗಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಿ, ಹಂಪಿಗೆ ಪ್ರವಾಸಿಗರನ್ನು ಸೆಳೆಯುವ ಕಾರ್ಯವನ್ನು ಪುರಾತತ್ವ ಇಲಾಖೆ ಮಾಡುತ್ತಿದೆ.
ಹಂಪಿಯ ವಿಜಯ ವಿಠಲ ದೇವಸ್ಥಾನದಲ್ಲಿ ಪ್ರಾಯೋಗಿಕವಾಗಿ ಪ್ರವಾಸಿಗರಿಗೆ ಸಂಗೀತವನ್ನು ಕೇಳಲು, ಸಂಗೀತ ಮಂಟಪದ ಕಂಬಗಳಿಗೆ ಕ್ಯುಆರ್ ಕೋಡ್ ಅನ್ನು ಅಳವಡಿಸಿದ್ದು, ಸ್ಕ್ಯಾನ್ ಮಾಡುವ ಮುಖಾಂತರ ಸಂಗೀತವನ್ನು ಕೇಳಬಹುದು, ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿನ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು ಎನ್ನುತ್ತಾರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪುರಾತತ್ವ ಅಧೀಕ್ಷಕ ನಿಹಿಲ್ ದಾಸ್.ಹಂಪಿಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಇಷ್ಟು ದಿನ ಪ್ರವಾಸಿಗರು ಸಂಗೀತವನ್ನು ಕೇಳದೇ ನಿರಾಸೆಯಿಂದ ಹೋಗುತ್ತಿದ್ದರು. ಈಗ ಕೇಂದ್ರ ಪುರಾತತ್ವ ಇಲಾಖೆಯಿಂದ ಕ್ಯುಆರ್ ಕೋಡ್ ಅಳವಡಿಸಿದ್ದು, ಮೊಬೈಲ್ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರು ಸಂಗೀತ ಆಲಿಸಬಹುದು ಎನ್ನುತ್ತಾರೆ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ. ಹಂಪಿ.