ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಯೋಗದಲ್ಲಿ ಗುರುವಾರ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಣಿಚೆನ್ನಮ್ಮ ಅವರಿಂದ ಕಡ್ಡಾಯವಾಗಿ ಕಲಿಯಲೇಬೇಕಾದ ವಿಷಯಗಳೆಂದರೆ ಭಾರತೀಯ ಪರಂಪರೆಯಲ್ಲಿ ನಾರಿಯ ಸ್ತ್ರೀ ಶಕ್ತಿ ಸಬಲೀಕರಣ ವಿಶೇಷ ಸೌಭಾಗ್ಯ, ಹೆಣ್ಣು ಮಕ್ಕಳ ಶಿಕ್ಷಣ. ನಮ್ಮ ಒಗ್ಗಟ್ಟು, ಸಂಸ್ಕಾರ, ದೇಶಭಕ್ತಿ ಇವುಗಳನ್ನು ಕಲಿಯಬೇಕು ಎಂದರು.
ಈ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಹೆಣ್ಣುಮಕ್ಕಳು ಬಹಳ ವಿರಳವಾಗಿ ಕಾಣುತ್ತಿದ್ದರು. ಇದಕ್ಕೆ ಕಾರಣ ಶಿಕ್ಷಣ ಮತ್ತು ಹೆಣ್ಣಿಗೆ ಎಲ್ಲಿಯೂ ಮುಕ್ತವಾದ ಅವಕಾಶಗಳನ್ನು ನೀಡುತ್ತಿರಲಿಲ್ಲ ಎಂಬುದಾಗಿದೆ. ಆದರೆ ಇಂದು ಆದಾಯದ ದೃಷ್ಟಿಯ ಉದ್ದೇಶದಿಂದ ಅಂಜಿಕೆಯಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಸೈನಿಕರಾಗಿ ದೇಶಕ್ಕಾಗಿ ಸೇವೆ ಸಲ್ಲಿಸಲು ಕಳುಹಿಸುತ್ತಿರುವುದು ಬಹಳ ಕಡಿಮೆ. ಹಾಗಾಗಿ ದೇಶ ಸೇವೆಗಾಗಿ ಧೈರ್ಯ, ಶೌರ್ಯದಿಂದ ಹೋರಾಟ ಮಾಡುವ ಸ್ವಭಾವವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು. ಆಗ ಮಾತ್ರ ನಾವು ಮತ್ತೆ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಬಹುದು ಹಾಗೂ ಕಿತ್ತೂರು ರಾಣಿಚೆನ್ನಮ್ಮ ನಂತಹ ಅನೇಕರನ್ನು ಹುಟ್ಟುಹಾಕಬಹುದು ಎಂದು ತಿಳಿಸಿದರು.ಆಲೂರು ತಾಲೂಕು ಕಾರ್ಜುವಳ್ಳಿಯ ಶ್ರೀ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ತೊಟ್ಟಿಲು ತೂಗುವ ಕೈ ಮನಸ್ಸು ಮಾಡಿದರೆ ಜಗತ್ತನ್ನೇ ಆಳಬಹುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಕಿತ್ತೂರುರಾಣಿ ಚೆನ್ನಮ್ಮ. ದಿಟ್ಟತನದಿಂದ ಒಂದು ಸಂಸ್ಥಾನವನ್ನು ನಡೆಸಿ ಇಡೀ ಭಾರತ ದೇಶವನ್ನು ಆಕ್ರಮಿಸಿಕೊಂಡಿದ್ದ ಸೂರ್ಯ ಮುಳುಗದ ಆಡಳಿತ ವ್ಯವಸ್ಥೆಯ ವಿರುದ್ಧ ಒಬ್ಬ ಹೆಣ್ಣುಮಗಳು ಯುದ್ಧ ಕಹಳೆ ಊದುತ್ತಾಳೆ ಎಂದರೆ ಅವಳ ಧೈರ್ಯವನ್ನು ನಾವೆಲ್ಲರೂ ಶ್ಲಾಘಿಸಬೇಕು ಎಂದು ತಿಳಿಸಿದರು.
ಇಂದು ನಾವು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ. ಹಿಂದೆ ಕಿತ್ತೂರು ರಾಣಿ ಚೆನ್ನಮ್ಮನನ್ನು ಅವರ ತಂದೆ ತಾಯಿ ಹೇಗೆ ಬೆಳೆಸಿದರು ಎಂಬುದನ್ನು ನಾವು ತುಲನೆ ಮಾಡಬೇಕು. ಚೆನ್ನಮ್ಮ ಆಗಿನ ಕಾಲದಲ್ಲಿಯೇ ೬೪ ವಿದ್ಯೆಗಳನ್ನು ಕಲಿತಿದ್ದರು. ಇಂದು ನಮ್ಮ ಮಕ್ಕಳಿಗೆ ನಾವು ಎಷ್ಟು ರೀತಿಯ ವಿದ್ಯೆಗಳನ್ನು ಕಲಿಸಿದ್ದೇವೆ ಎಂಬುದನ್ನು ಆಲೋಚಿಸಬೇಕು. ಹೇಳಿದ್ದನ್ನು ಕಾರ್ಯರೂಪಕ್ಕೆ ತಂದರೆ ನಮ್ಮ ದೇಶ ಮತ್ತೆ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ ಎಂದರಲ್ಲದೆ, ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ಸಾಧನೆ ಮಾಡಲು ಮನಸ್ಸಿರುವ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಇದರ ಮೂಲಕ ನಾವು ಚೆನ್ನಮ್ಮನವರಿಗೆ ಕೃತಜ್ಞತೆ ಸಲ್ಲಿಸಿದ ಹಾಗೆ ಆಗುತ್ತದೆ ಎಂದು ತಿಳಿಸಿದರು.
ರಾಣಿಚೆನ್ನಮ್ಮ ತನ್ನ ಜನರಿಗೆ ಸ್ಪೂರ್ತಿಯನ್ನು ತುಂಬಿ, ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ. ಬಹಳ ವೀರಾವೇಷದಿಂದ ಪುಟ್ಟ ಸಂಸ್ಥಾನದ ಒಡತಿಯಾಗಿ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದವಳು. ಅವರು ಸಾಗಿಬಂದ ಹಾದಿ ಸುಗಮವಾಗಿರಲಿಲ್ಲ. ಸತತ ಪರಿಶ್ರಮದಿಂದ ಸಾಧನೆ ಮಾಡಿ ಮನುಕುಲಕ್ಕೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂತಹ ಮಹನೀಯರನ್ನು ಅನುಕರಣೆ ಮಾಡಬೇಕುಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಚ್. ಪಿ ತಾರಾನಾಥ್, ಆರಕ್ಷಕ ನಿರೀಕ್ಷಕರಾದ ಅನು, ತಹಸೀಲ್ದಾರ್ರಾದ ನಾಗರಾಜು, ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.