ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಆರ್.ಎಸ್.ನಾಗರಾಜು ಅವಿರೋಧ ಆಯ್ಕೆಯಾಗಿದ್ದಾರೆ.ಪಟ್ಟಣದ ಹೊರ ವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರ್.ಎಸ್.ನಾಗರಾಜು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವ ತನಕ ಇತರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಆರ್.ಎಸ್.ನಾಗರಾಜು ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಆದ ತಹಸೀಲ್ದಾರ್ ಟಿ.ರಮೇಶ್ ಬಾಬು ಘೋಷಿಸಿದರು. ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಮಾಯಿಸಿ ನೂತನ ಅಧ್ಯಕ್ಷರಿಗೆ ಹಾರ, ತುರಾಯಿ ಹಾಕಿ ಅಭಿನಂದಿಸಿದರು. ನೂತನ ಅಧ್ಯಕ್ಷರನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿನಂದಿಸಿ ಶುಭ ಕೋರಿದರು.
ನೂತನ ಅಧ್ಯಕ್ಷ ಆರ್.ಎಸ್.ನಾಗರಾಜು ಮಾತನಾಡಿ, ಎಪಿಎಂಸಿ ಸಮಗ್ರ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಪ್ರಮುಖ ಆದ್ಯತೆ ನೀಡುವೆ ಎಂದರು. ಈ ಸಮಯದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಡಿ.ಸಿ.ನಾಗೇಂದ್ರ, ಮಾಜಿ ಸದಸ್ಯ ಕೆರಹಳ್ಳಿ ನವೀನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಹಾಪ್ ಕಾಮ್ಸ್ ಅಧ್ಯಕ್ಷ ಎಂ.ನಾಗೇಶ್, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಮಹದೇವ್ಪ, ತಾಪಂ ಮಾಜಿ ಅಧ್ಯಕ್ಷ ಮಧುಶಂಕರ್, ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ಎಪಿಎಂಸಿ ಉಪಾಧ್ಯಕ್ಷ ರಾಜು, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಾಟಿ ಜಿ.ಮಹೇಶ್, ಮಂಚಹಳ್ಳಿ ಲೋಕೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಎಸ್ಆರ್ಎಸ್ ರಾಜು, ಫ್ಯಾಕ್ಸ್ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ಬೇಗೂರು ಸದಾ, ಮುಖಂಡರಾದ ಡಿ.ಎಂ.ಸತೀಶ್, ಅಭಿಷೇಕ್ ಅಂಕಹಳ್ಳಿ ಸೇರಿದಂತೆ ಎಪಿಎಂಸಿ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.ಗುರುವನ್ನು ಸೋಲಿಸಿದ್ದ ಆರ್ಎಸ್ಎನ್ಎಪಿಎಂಸಿ ಸದಸ್ಯರ ಚುನಾವಣೆಯಲ್ಲಿ ನೂತನ ಅಧ್ಯಕ್ಷ ಆರ್.ಎಸ್.ನಾಗರಾಜು ಅವರ ಗುರು ಕೆ.ಆರ್.ಲೋಕೇಶ್ರನ್ನು ಸೋಲಿಸಿದ್ದರು. ಲೋಕೇಶ್ ಸೋಲಿಸಿದ್ದ ಆರ್.ಎಸ್.ನಾಗರಾಜು ಗೆದ್ದು ಬೀಗಿದ್ದರು. ಈಗ ಎಪಿಎಂಸಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ರೈತಸಂಘದ ಮೂಲಕ ರಾಜಕೀಯ ಪ್ರವೇಶಿಸಿ ಆರ್.ಎಸ್.ನಾಗರಾಜು ರೈತಸಂಘದ ಬೆಂಬಲದಿಂದಲೇ ಗ್ರಾಪಂ ಸದಸ್ಯರಾಗಿದ್ದರು. ಹೊರೆಯಾಲ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅನುಭವಿದೆ.
ಬೇಗೂರು ಹತ್ತಿ ಮಾರುಕಟ್ಟೆ ಶೀಘ್ರ ಉದ್ಘಾಟನೆಅತೀ ಶೀಘ್ರದಲ್ಲಿಯೇ ಬೇಗೂರು ಹತ್ತಿ ಮಾರುಕಟ್ಟೆ ಉದ್ಘಾಟನೆಯಾಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಎಪಿಎಂಸಿ ನೂತನ ಅಧ್ಯಕ್ಷ ಆರ್.ಎಸ್.ನಾಗರಾಜು ಅಭಿನಂಧಿಸಿದ ಬಳಿಕ ಮಾತನಾಡಿ, ಬೇಗೂರು ಹತ್ತಿ ಮಾರುಕಟ್ಟೆಗೆ ನಾನೇ ಗುದ್ದಲಿ ಪೂಜೆ ಮಾಡಿದ್ದೆ, ನಾನೇ ಉದ್ಘಾಟನೆ ಮಾಡುವ ಸಮಯ ಬಂದಿದೆ ಎಂದರು. ಗುಂಡ್ಲುಪೇಟೆ ಎಪಿಎಂಸಿ ಆವರಣದಲ್ಲಿ ೮ ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಗೆ ಚಾಲನೆಯೂ ಅತೀ ಬೇಗ ಆಗಲಿದೆ,ನೂತನ ಅಧ್ಯಕ್ಷರು ರೈತ ಪರವಾದ ಕೆಲಸ ಮಾಡಿ ಎಂದು ಸಲಹೆ ನೀಡಿದರು.