ಶಿವಾನಂದ ಗೊಂಬಿ
2019ರಲ್ಲಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಉಂಟಾಗಿದ್ದ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದೇ 2021ರಲ್ಲೇ ಕೋರ್ಟ್ಗೆ ಸಿ ರಿಪೋರ್ಟ್ ಹಾಕಿ ರೈಲ್ವೆ ಪೊಲೀಸರು ಕೈ ತೊಳೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರೈಲ್ವೆಯಲ್ಲಿ ನಡೆದ ಸ್ಪೋಟದ ಬಗ್ಗೆಯೇ ಇಲಾಖೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಆಗಿಲ್ಲ ಎಂದರೆ ರೈಲ್ವೆ ಪ್ರಯಾಣ ಎಷ್ಟು ಸುರಕ್ಷಿತ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.ಆಗಿದ್ದೇನು?
ಈ ಪಾರ್ಸಲ್ ಬಂದಿದ್ದು ವಿಜಯವಾಡದಿಂದ. ಅದರ ಮೇಲೆ ಕೊಲ್ಲಾಪುರದ ವಿಳಾಸವಿತ್ತು ಜತೆಗೆ ಶಿವಸೇನೆಯ ಶಾಸಕರೊಬ್ಬರ ಹೆಸರಿತ್ತು.
ರೈಲ್ವೆ ಪೊಲೀಸರು ವಿಜಯವಾಡಾ ಹಾಗೂ ಕೊಲ್ಲಾಪುರ ನಾಲ್ಕೈದು ಸಲ ತೆರಳಿ ತನಿಖೆ ನಡೆಸಿದ್ದುಂಟು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆ ಪಾರ್ಸಲ್ ಇಟ್ಟವರು ಯಾರು? ಹೀಗೆ ಸ್ಪೋಟಕ ಇಡಲು ಕಾರಣವೇನು? ಅವರ ಉದ್ದೇಶವೇನಾಗಿತ್ತು? ಎಂಬ ಬಗ್ಗೆಯೆಲ್ಲ ಸರಿಯಾಗಿ ರೈಲ್ವೆ ಪೊಲೀಸರಿಗೆ ಗೊತ್ತೇ ಆಗಲಿಲ್ಲ ಎಂದು ಮೂಲಗಳು ತಿಳಿಸುತ್ತವೆ.
ಬರೋಬ್ಬರಿ 2 ವರ್ಷಗಳ ಕಾಲ ತನಿಖೆ ನಡೆಸಿದ ರೈಲ್ವೆ ಪೊಲೀಸರಿಗೆ ಆರೋಪಿ ಯಾರು? ಆತನ ಉದ್ದೇಶವೇನಿತ್ತು? ದೊಡ್ಡ ಸಂಚು ಅಡಗಿತ್ತಾ? ಎಂಬ ಬಗ್ಗೆಯೆಲ್ಲ ಏನೊಂದು ಗೊತ್ತೆ ಆಗಲಿಲ್ಲ. ಹೀಗಾಗಿ ಆರೋಪಿ ಪತ್ತೆಯಾಗಿಲ್ಲ ಎಂದು ಕೋರ್ಟ್ಗೆ 2021ರ ನವೆಂಬರ್ 10ರಂದು ಸಿ ರಿಪೋರ್ಟ್ ಹಾಕಲಾಗಿದೆ. ಈ ಮೂಲಕ ರೈಲ್ವೆ ಪೊಲೀಸರು ಕೈತೊಳೆದುಕೊಂಡಿದ್ದಾರೆ.
ರೈಲ್ವೆಯೊಂದರಲ್ಲಿ ಸ್ಪೋಟಕ ಪತ್ತೆಯಾಗುತ್ತವೆ. ಅವುಗಳಲ್ಲಿ ಒಂದು ನಿಲ್ದಾಣದಲ್ಲೇ ಸ್ಪೋಟಗೊಳ್ಳುತ್ತದೆ. ಆದರೂ ಅದರ ಆರೋಪಿ ಗೊತ್ತೇ ಆಗುವುದಿಲ್ಲ ಎಂದರೆ ಇದು ರೈಲ್ವೆ ಪೊಲೀಸರ ವೈಫಲ್ಯವೇ ಸರಿ. ರೈಲಿನ ಪ್ರಯಾಣ ಎಷ್ಟು ಸುರಕ್ಷಿತ. ಯಾರು ಬೇಕಾದರೂ ರೈಲಿನಲ್ಲಿ ಏನು ಬೇಕಾದರೂ ಇಟ್ಟು ಹೋಗಬಹುದೇ? ಯಾರು ಕೇಳುವುದೇ ಇಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇದೀಗ ಎದ್ದಿವೆ. ಈ ಕಾರಣದಿಂದಲೇ ಮೆಟಲ್ ಡಿಟೆಕ್ಟರ್, ಬ್ಯಾಗೇಜ್ ಸ್ಕ್ಯಾನರ್ ಸಮರ್ಪಕವಾಗಿ ಅಳವಡಿಸಬೇಕು. ಇನ್ನು ಮೇಲಾದರೂ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಪ್ರಜ್ಞಾವಂತರದ್ದು.
ರೈಲ್ವೆ ನಿಲ್ದಾಣದಲ್ಲಿ ಸ್ಫೋಟವಾದ ಸ್ಫೋಟಕದಲ್ಲಿ ಪೊಟಾಸಿಯಂ, ಕ್ಲೋರೈಡ್, ಸಲ್ಪೇಟ್, ಸಲ್ಪರ್, ಅಲ್ಯುಮಿನಿಯಂ ಸೇರಿದಂತೆ ಇತರೆ ಸ್ಫೋಟಕ ವಸ್ತುಗಳಿದ್ದವಂತೆ. ಇವುಗಳನ್ನು ಹಂದಿ ಸೇರಿದಂತೆ ವಿವಿಧ ಪ್ರಾಣಿಗಳನ್ನು ಕೊಲ್ಲಲು ಅಥವಾ ಹೆದರಿಸಲು ಬಳಸಲಾಗುತ್ತಿದೆಯಂತೆ. ಎಫ್ಎಸ್ಎಲ್ ವರದಿ ಮೂಲಕ ಈ ಅಂಶ ಗೊತ್ತಾಗಿದೆ.