ಮಳೆ ಮಾಪನ ಕೇಂದ್ರ ಅವ್ಯವಸ್ಥೆ: ವಿಮೆ ಸಿಗುವುದು ಹೇಗೆ ?

KannadaprabhaNewsNetwork |  
Published : Jun 24, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಮಳೆ ಮಾಪನ ಕೇಂದ್ರಗಳೇ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದರೆ ರೈತರಿಗೆ ಬೆಳೆ ವಿಮೆ ಸಿಗುವುದಾದರೂ ಹೇಗೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

- ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಕನ್ನಡ ಪ್ರಭ ವಾರ್ತೆ ಚಿಕ್ಕಮಗಳೂರು

ಮಳೆ ಮಾಪನ ಕೇಂದ್ರಗಳೇ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದರೆ ರೈತರಿಗೆ ಬೆಳೆ ವಿಮೆ ಸಿಗುವುದಾದರೂ ಹೇಗೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಹವಾಮಾನ ಆಧಾರಿತ ಬೆಳೆ ವಿಮೆ, ಮಳೆ ಮಾಪನ ಕೇಂದ್ರಗಳ ಸಮರ್ಥಕ ನಿರ್ವಹಣೆ ಮತ್ತು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿ ಮಲೆನಾಡು ಭಾಗದಲ್ಲಿ ನಾವು ಎಲ್ಲೇ ಹೋದರು ರೈತರು ನಮಗೆ ಬೆಳೆ ವಿಮೆ ಬಂದಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ.

ಕಳಸದಲ್ಲಿ ಮಳೆ ಮಾಪನ ಕೇಂದ್ರ ಅಳವಡಿಕೆ ಮಾಡಲಾಗಿದೆ. ಅಲ್ಲಿ ಕೆಲವೇ ಕಿ.ಮೀ ದೂರದಲ್ಲಿರುವ ಹೊರನಾಡಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತದೆ. ಕಳಸದ ಮಳೆಮಾಪನ ಕೇಂದ್ರದ ಮಾಹಿತಿ ಆಧರಿಸಿ ಆ ಭಾಗದ ರೈತರಿಗೆ ಬೆಳೆ ವಿಮೆ ಪಾವತಿಸು ವುದಾದರೆ ಹೊರನಾಡು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿ ಬೆಳೆ ಕಳೆದುಕೊಂಡ ರೈತರಿಗೆ ಅನ್ಯಾಯವಾಗುತ್ತದೆ. ಇದನ್ನೇ ಎಲ್ಲಾ ಭಾಗದ ರೈತರು ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಮಾಪನ ಕೇಂದ್ರಗಳ ಮಾಹಿತಿ ಆಧರಿಸಿಯೇ ರೈತರಿಗೆ ಬೆಳೆ ವಿಮೆ ಪಾವತಿಯಾಗುತ್ತದೆ. ಮಳೆ ಮಾಪನ ಕೇಂದ್ರಗಳೇ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ರೈತರಿಗೆ ಬೆಳೆ ವಿಮೆ ಬರುವುದಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ರೈತರು ಗ್ರಾಹಕ ನ್ಯಾಯಾಲಯದ ಮೊರೆ ಹೋದರೆ ಗತಿ ಏನು ಎಂದರು.

ಇದಲ್ಲದೆ ಜಿಲ್ಲೆಯಲ್ಲಿ ಎಷ್ಟು ಮಳೆ ಮಾಪನ ಕೇಂದ್ರಗಳಿವೆ. ಅದರಲ್ಲಿ ಎಷ್ಟು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಇನ್ನಷ್ಟು ಕೇಂದ್ರಗಳು ದುರಸ್ತಿಯಲ್ಲಿವೆ ಎಂಬ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಜಿಲ್ಲೆಯಲ್ಲಿರುವ 242 ಮಳೆಮಾಪನ ಕೇಂದ್ರಗಳಲ್ಲಿ 107 ಕೇಂದ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆರು ಕೇಂದ್ರಗಳಿಗೆ ನೆಟ್ವರ್ಕ್ ಸಮಸ್ಯೆ ಇದೆ. ಉಳಿದ 129 ಕೇಂದ್ರಗಳು ದುರಸ್ತಿಯಾಗಬೇಕಿದೆ. ಈಗಾಗಲೇ ಮಳೆಮಾಪನ ಕೇಂದ್ರಗಳ ದುರಸ್ತಿ ಆರಂಭವಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಮಳೆಮಾಪನ ಕೇಂದ್ರಗಳ ಮಾಹಿತಿ ಆಧರಿಸಿ ರೈತರಿಗೆ ಬೆಳೆವಿಮೆ ಪಾವತಿ ಮಾಡಲಾಗುತ್ತದೆ.ಈ ಕೇಂದ್ರಗಳೇ ಕಾರ್ಯನಿರ್ವಹಿಸದಿದ್ದರೆ ರೈತರಿಗೆ ಬೆಳೆ ವಿಮೆ ಸಿಗದೇ ಅನ್ಯಾಯವಾಗುತ್ತದೆ. ಹೀಗಾಗಿ ಮಳೆ ಮಾಪನ ಕೇಂದ್ರಗಳ ದುರಸ್ತಿಗೆ ಮೊದಲ ಆದ್ಯತೆ ಎಂದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳಾ ಸಭೆಗೆ ಮಾಹಿತಿ ನೀಡಿ 2024-25ನೇ ಸಾಲಿನಲ್ಲಿ ಬೆಳೆ ವಿಮೆಗಾಗಿ ಜಿಲ್ಲೆಯಲ್ಲಿ 39,509 ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 37,131 ಅರ್ಜಿದಾರರಿಗೆ ₹98 ಕೋಟಿ ಬೆಳೆ ವಿಮೆ ಪಾವತಿ ಯಾಗಿದೆ. ಕೆಲ ಮಳೆ ಮಾಪನ ಕೇಂದ್ರಗಳ ಸಮಸ್ಯೆಯಿಂದ ಕೆಲವರಿಗೆ ಬೆಳೆ ಪರಿಹಾರ ವಿತರಣೆಯಾಗಿಲ್ಲ. ಈ ಬಾರಿ ಎಲ್ಲಾ ಸಮಸ್ಯೆ ಬಗೆಹರಿಸಿ ರೈತರಿಗೆ ನ್ಯಾಯಯುತವಾಗಿ ಬೆಳೆ ವಿಮೆ ಬರುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.-- ಕೋಟ್....

ಜಿಲ್ಲೆಯಲ್ಲಿ ಯಾವ ಮಳೆ ಮಾಪನ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೋ ಅವುಗಳನ್ನು ಇನ್ನು 15 ದಿನಗಳ ಒಳಗಾಗಿ ದುರಸ್ತಿ ಪಡಿಸಬೇಕು. ಒಂದು ವೇಳೆ ಮಳೆ ಮಾಪನ ಕೇಂದ್ರಗಳ ಕಾರಣದಿಂದ ರೈತರಿಗೆ ಬೆಳೆ ವಿಮೆ ಬಾರದೇ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ.

ಕೋಟ ಶ್ರೀನಿವಾಸ ಪೂಜಾರಿ, ಸಂಸದ, ಉಡುಪಿ ಚಿಕ್ಕಮಗಳೂರು(ಫೋಟೋ‌ಇದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಖಾಸಗೀಕರಣ ನೇಕಾರರಿಗೆ ಕಂಟಕ
ಕೋಮುವಾದಕ್ಕೆ ಬಳಕೆಯಾಗುವ ಭಕ್ತಿ ಅಪ್ರಸ್ತುತ: ಕಾ.ತ.ಚಿಕ್ಕಣ್ಣ