ಅಪೂರ್ಣ ಚಾವಣಿ ಕಾಮಗಾರಿಯಿಂದ ಮಳೆ ನೀರು ಸೋರಿಕೆ

KannadaprabhaNewsNetwork | Published : Jul 5, 2024 12:52 AM

ಅಯೋಧ್ಯೆ ಶ್ರೀರಾಮ ಮಂದಿರದ ಚಾವಣಿ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ. ಹೀಗಾಗಿ ಮಳೆ ಬಂದಾಗ ಸೋರಿಕೆಯಾಗಿದೆಯೇ ಹೊರತು, ರಾಮಮಂದಿರ ಕಾಮಗಾರಿಯಲ್ಲಿ ಯಾವುದೇ ಕುಂದುಕೊರತೆಯಾಗಿಲ್ಲ. ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಯೋಧ್ಯೆ ಶ್ರೀರಾಮ ಮಂದಿರದ ಚಾವಣಿ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ. ಹೀಗಾಗಿ ಮಳೆ ಬಂದಾಗ ಸೋರಿಕೆಯಾಗಿದೆಯೇ ಹೊರತು, ರಾಮಮಂದಿರ ಕಾಮಗಾರಿಯಲ್ಲಿ ಯಾವುದೇ ಕುಂದುಕೊರತೆಯಾಗಿಲ್ಲ. ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆಯಲ್ಲಿ ಬಡತನ ಹೆಚ್ಚಿರುವುದರಿಂದ ಮತದಾರರು ಆಸೆ, ಆಮಿಷಕ್ಕೊಳಗಾಗಿ ಮತ ಚಲಾಯಿಸಿದ್ದಾರೆ. ಇದು ಹಿಂದುಗಳ ಧಾರ್ಮಿಕ ನಂಬಿಕೆಗೆ ಹೊಡೆತ ಎಂದು ಭಾವಿಸಬಾರದು ಎಂದು ಹೇಳಿದರು.

ಹಿಂದು ಬಗ್ಗೆ ರಾಹುಲ್‌ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ:

ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಸಹಿಷ್ಣು ಆಗಿರುವವರನ್ನು ಕೆದಕುವುದು, ಕೆಡುವುದು ಕೆಲವರ ಚಾಳಿ ಆಗಿ ಹೋಗಿದೆ. ಸಹಿಷ್ಣುದಾರರನ್ನು ಕೆಣಕಬೇಕು. ಹಾಗೆ ಕೆಣಕಿ ಒಂದಿಷ್ಟು ಗೊಂದಲ ಸೃಷ್ಟಿ ಮಾಡಬೇಕು. ತಮ್ಮ ಬೇಳೆ ಬೇಯಿಸಿಕೊಳ್ಳಬೇಕು. ಪಂಗಡ ಪಂಗಡಗಳನ್ನು, ಸಮಾಜದ ಎರಡು ಪ್ರಮುಖ ಎರಡು ಪಂಗಡಗಳನ್ನು ಒಡೆಯುವುದು, ಅಲ್ಲಿ ಬೆಂಕಿ ಹಚ್ಚುವುದು ಏನು ಕಷ್ಟದ ಕೆಲಸ ಅಲ್ಲ. ಈಗ ಮಣಿಪುರದಲ್ಲಿ ಬೆಂಕಿ ಹಚ್ಚಿದ್ದಾಗಿದೆ. ಇವತ್ತಿಗೂ ಅದನ್ನ ತಣಿಸಲು ಸಾಧ್ಯ ಆಯ್ತಾ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ನಾಯಕರು, ಮುಖಂಡರು ಅನ್ನುವಂತಹವರು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಾರೆ ಅಂತಾ ಅಂದ್ರೆ ಸಮಾಜ ಅಂತಹವರನ್ನು ಮೊದಲು ದೂರ ಇಡಬೇಕು ಎಂದು ತಿರುಗೇಟು ನೀಡಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರಿಗೆ ಹಿನ್ನಡೆಯಾದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಇಂತಹ ಸೋಲು, ಮೋಸದ ಸೋಲು. ನಮ್ಮಲ್ಲಿ ಬಡತನ ಇನ್ನೂ ಇದೆ. ದುಡ್ಡು ಕೊಡುತ್ತೇವೆ ಅಂತಾ ಅಂದರೆ ಆಗಲ್ಲ. ಇಂತಹ ಮೋಸದ ಸೋಲು ಸಹಜ. ಅವರ ಪ್ರಭಾವ ಕಾಲದ ಮೇಲೆ ಕಡಿಮೆ ಆಯಿತೋ ಅಥವಾ ದುಡ್ಡಿನ ವ್ಯಾಮೋಹ, ಮೋಸದ ಕೆಲಸ ಅದು ಹೆಚ್ಚು ಕೆಲಸ ಮಾಡಿತೋ ಎಂಬುದನ್ನು ತೀರ್ಮಾನ ಮಾಡುವುದು ಕಷ್ಟ ಎಂದರು.

ಸ್ವಪಕ್ಷೀಯರೇ ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿಗಳು, ಇರಬಹುದು, ಅದರ ಬಗ್ಗೆ, ಅದರೊಳಗೆ ಹೆಚ್ಚು ನಾವು ತಲೆ ಹಾಕಲ್ಲ. ಅದರೊಳಗೆ ನಾವು ಕೆಲಸ ಮಾಡುವುದಿಲ್ಲ, ನಾವು ಸಮಾಜದ ಒಳ್ಳೆಯ ಕೆಲಸ ಮಾಡುವವರು ಎಂದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಗೋಪಾಲ ನಾಯಕ, ಪ್ರಕಾಶ ಅಕ್ಕಲಕೋಟ, ಶ್ರೀಪಾದ ಸಿಂಗಮಲ್ಲೆ, ಅಶೋಕರಾವ್, ವಿಜಯ ಜೋಶಿ, ವಿಕಾಸ ಪದಕಿ, ರಾಕೇಶ ಕುಲಕರ್ಣಿ ಉಪಸ್ಥಿತರಿದ್ದರು.

---

ಬಾಕ್ಸ್‌

ಸಂವಿಧಾನ ಬದ್ಧವಾಗಿ ಕಾರ್ಯ ಮಾಡಬೇಕು

ರಾಜಕೀಯ ಪಕ್ಷಗಳಿಂದ ಜಾತಿ ವ್ಯವಸ್ಥೆ ಸಮಸ್ಯೆಯಾಗಿದೆ. ಆಯಾ ಪಂಗಡಗಳಿಗೆ ಅನ್ಯಾಯವಾದಾಗ ಆ ಪಂಗಡಗಳ ಮಠಾಧಿಪತಿಗಳು ವಿರೋಧಿಸುತ್ತಾರೆ. ಜಾತಿ ಆಧಾರದ ಮೇಲೆ ಸೀಟು, ಟಿಕೆಟ್, ನಿಗಮ ಮಂಡಳಿ ನೀಡುವುದಾದರೆ ಮಠಾಧೀಶರು ಮಾಡುವುದೂ ಸರಿ. ಮೊದಲು ಅಲ್ಲಿ(ರಾಜಕೀಯದಲ್ಲಿ) ಸರಿಯಾಗಲಿ ಆಗ ಇಲ್ಲಿ ಸರಿಯಾಗುತ್ತದೆ. ಯಾರೇ ಆಧಿಕಾರದಲ್ಲಿರಲಿ ಸಂವಿಧಾನ ಬದ್ಧವಾಗಿ ಕಾನೂನು ಬದ್ಧವಾಗಿ ಆಡಳಿತ ಮಾಡಬೇಕೆಂದು ಪೇಜಾವರ ಶ್ರೀಗಳು ಸಲಹೆ ನೀಡಿದರು.

ಚುನಾಯಿತರಾಗಿ ಬಂದ ಬಳಿಕ ಯಾವುದೇ ಪಕ್ಷದ ಸರ್ಕಾರ ಆಗಲ್ಲ, ಅದು ಎಲ್ಲರ ಸರ್ಕಾರವಾಗುತ್ತದೆ. ನಮ್ಮ ಪಕ್ಷ, ಪ್ರತಿಪಕ್ಷ ಎಂದು ತಾರತಮ್ಯ ಮಾಡುವುದು ಸರಿಯಲ್ಲ ಎಂದರು.