ಮಡಿಕೇರಿ : ಕೊಡಗು ಜಿಲ್ಲಾದ್ಯಂತ ಶುಕ್ರವಾರ ಮಳೆ ಕೊಂಚ ಇಳಿಮುಖಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಹಲವು ಕಡೆಗಳಲ್ಲಿ ಬಿಡುವು ನೀಡಿ ಆಗಾಗ್ಗೆ ಮಳೆ ಸುರಿಯಿತು. ಮಳೆಯ ತೀವ್ರತೆ ತಗ್ಗಿದ್ದರಿಮದ ಜಿಲ್ಲೆ ಕೆಲವು ಕಡೆಗಳಲ್ಲಿ ಉಂಟಾಗಿದ್ದ ಪ್ರವಾಹ ಇಳಿಮುಖಗೊಂಡಿದೆ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಹಾನಿಯುಂಟಾಗಿದೆ.
ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ - ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಬರೆ ಕುಸಿದಿದ್ದು, ಒಂದು ವಿದ್ಯುತ್ ಕಂಬ ಮುರಿದು ಹೋಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ರಸ್ತೆಯು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಗ್ರಾಮಕ್ಕೆ ತೆರಳಲು ಬದಲಿ ಸಂಪರ್ಕ ರಸ್ತೆ ಬಳಸಲಾಗಿದೆ.
ನಿಟ್ಟೂರು ಗ್ರಾಮದ ವ್ಯಾಪ್ತಿಯ ಚಿಣ್ಣರ ಹಾಡಿ ಸಂಪರ್ಕ ಸೇತುವೆ ಪಕ್ಕದಲ್ಲಿ ಬರೆ ಕುಸಿದಿದೆ. ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಅಕ್ಕಣ್ಣಿ ಅವರ ಗುಡಿಸಲಿಗೆ ಕಾವೇರಿ ನದಿ ನೀರು ನುಗ್ಗಿದೆ. ಮನೆಯವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 40.50 ಮಿ.ಮೀ. ಮಳೆಯಾಗಿದೆ.ಮಡಿಕೇರಿ ತಾಲೂಕಿನಲ್ಲಿ 71.28 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 28.10 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 31.75 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 54.35 ಮಿ.ಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ17 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ: ಮಡಿಕೇರಿ ಕಸಬಾ 64, ನಾಪೋಕ್ಲು 68.60, ಸಂಪಾಜೆ 57.50, ಭಾಗಮಂಡಲ 95, ವಿರಾಜಪೇಟೆ 29.20, ಅಮ್ಮತ್ತಿ 27, ಹುದಿಕೇರಿ 28, ಶ್ರೀಮಂಗಲ 73, ಪೊನ್ನಂಪೇಟೆ 10, ಬಾಳೆಲೆ 16, ಸೋಮವಾರಪೇಟೆ 44, ಶನಿವಾರಸಂತೆ 31, ಶಾಂತಳ್ಳಿ 120, ಕೊಡ್ಲಿಪೇಟೆ 22.40, ಕುಶಾಲನಗರ 11, ಸುಂಟಿಕೊಪ್ಪ 23 ಮಿ.ಮೀ.ಮಳೆಯಾಗಿದೆ.
ಕೊಡಗು: ಇಂದೂ ಶಾಲಾ, ಕಾಲೇಜಿಗೆ ರಜೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಜೂನ್ 28ರಂದು ರಜೆ ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.