- ‘ಬದುಕಿನ ಒಂದು ನೆನಪು’ ಶ್ರದ್ದಾಂಜಲಿ ಕಾರ್ಯಕ್ರಮ
ಸಮಾಜದಲ್ಲಿನ ಶೋಷಿತರ, ರೈತರ, ದಲಿತರ ಮೂಲ ಹಕ್ಕಿಗಾಗಿ ವೈಯಕ್ತಿಕ ಜೀವನವನ್ನು ಜನಸಾಮಾನ್ಯರ ಏಳಿಗೆಗೆ ಮೀಸಲಿಟ್ಟು ಚಳುವಳಿ ರೂಪಿಸಿದ ಅಪರೂಪದ ಜನನಾಯಕ ಎಚ್.ಟಿ. ರಾಜೇಂದ್ರರವರು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷ, ರೈತ ಸಂಘ, ಕನ್ನಡ ಪರ ಸಂಘಟನೆಗಳು ಹಾಗೂ ಪ್ರಗತಿಪರ ಮುಖಂಡರು ಆಯೋಜಿಸಿದ್ದ ಎಚ್.ಟಿ.ರಾಜೇಂದ್ರ ಅವರ ‘ಬದುಕಿನ ಒಂದು ನೆನಪು’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾವುದೇ ವರ್ಗದ ಜನರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಕಂಡುಬಂದಲ್ಲಿ ನೇರವಾಗಿ ಖಂಡಿಸುವ ವ್ಯಕ್ತಿತ್ವದ ರೂಪ ಅವರಲ್ಲಿತ್ತು. ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿದ್ದರೂ ಕೂಡಾ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಅಗಾಧ ಗುಣ ಹೊಂದಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿದ್ದರೂ ಜನಾನುರಾಗಿ ಬದುಕಿದವರು ರಾಜೇಂದ್ರ. ವ್ಯಕ್ತಿಯ ಸಿದ್ಧಾಂತದಿಂದ ಯಾವುದೇ ಪಕ್ಷದ ಮುಖಂಡರು ಅಜಾತಶತೃವನ್ನು ಪಾಲಿಸುತ್ತದೆ. ಆ ಸಾಲಿನಲ್ಲಿ ರಾಜೇಂದ್ರರವರು ಸರ್ವಶ್ರೇಷ್ಠರು ಎನ್ನಲು ಸಂದೇಹವಿಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಸ್ಪರ್ಧೆ ಹಾಗೂ ಅಧಿಕಾರದಾಸೆಗೆ ಜನ್ಮದಿನದ ಕಟೌಟ್ಗಳು ಎಲ್ಲೆಡೆ ರಾರಾಜಿಸುತ್ತಿದ್ದಾರೆ. ಅಧಿಕಾರ ಕ್ಷೀಣಿಸಿದರೆ ಯಾವುದು ಇರುವುದಿಲ್ಲ. ಹೀಗಾಗಿ ಮೊದಲು ಜನ್ಮಕೊಟ್ಟ ಪಾಲಕರಿಗೆ ಶುಭಾಶಯ ತಿಳಿಸಬೇಕು ಎಂದು ಸಲಹೆ ಮಾಡಿದರು.ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರಾಜೇಂದ್ರ ವ್ಯಕ್ತಿತ್ವವನ್ನು ದೂರದಿಂದ ಗಮನಿಸಿದ ಅನುಭವಿದೆ. ಆದರೂ ಸರಳ, ಸಜ್ಜನಿಕೆ ಜೀವನಶೈಲಿ ರೂಪಿಸಿಕೊಂಡವರು. ಡಾ. ಬಿ.ಆರ್.ಅಂಬೇಡ್ಕರ್ ಸಿದ್ಧಾಂತಕ್ಕೆ ನ್ಯಾಯ ಬದ್ಧವಾಗಿ ನಡೆದುಕೊಂಡು ಬಡವರ ಕಲ್ಯಾಣಕ್ಕೆ ದುಡಿದಿರುವ ನಾಯಕರು ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಶೃಂಗೇರಿಯ ಮಲೆನಾಡು ಭಾಗದಲ್ಲಿ ರಾಜಕಾರಣ ಆರಂಭಿಸಿದ ರಾಜೇಂದ್ರರವರು ನಿರಂತರ ಹೋರಾಟದ ಮುಖೇನಾ ಅನ್ಯಾಯಕ್ಕೆ ಒಳಗಾದ ಜನರಿಗೆ ಹತ್ತಿರವಾಗಿದ್ದರು. ಇಂದಿನ ಆಧುನಿಕ ಜಗತ್ತಿನಲ್ಲಿ ರಾಜಕೀಯ ನಾಯಕರು ಇವರ ಬದುಕಿನ ಹೋರಾಟಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಿದೆ ಎಂದರು.ರೈತ ಸಂಘದ ಮುಖಂಡರಾದ ಗುರುಶಾಂತಪ್ಪ ಮಾತನಾಡಿ, ಸರ್ವ ಪಕ್ಷಗಳ ಮುಖಂಡರು ಒಪ್ಪುವ ಬುದ್ದಿ ಜೀವಿ, ರೈತಪರ ಹೋರಾಟಗಾರ ಹಾಗೂ ಸಮಾಜದ ಹಿತಚಿಂತನೆ ವ್ಯಕ್ತಿತ್ವ ಹೊಂದಿರುವ ಅಜಾತಶತೃ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜಪ್ಪ, ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯ ದರ್ಶಿ ಜಿ.ಎಸ್.ಚಂದ್ರಪ್ಪ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್, ಮುಖಂಡರಾದ ಎನ್.ಡಿ.ಮಂಜುನಾಥ್, ಹುಣಸೇಮಕ್ಕಿ ಲಕ್ಷ್ಮಣ್, ರಾಮಚಂದ್ರ, ಎಂ.ಡಿ.ರಮೇಶ್, ಸುನೀಲ್, ಎಚ್.ಎನ್. ಕೃಷ್ಣೇಗೌಡ ಉಪಸ್ಥಿತರಿದ್ದರು. 23 ಕೆಸಿಕೆಎಂ 1ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಎಚ್.ಟಿ.ರಾಜೇಂದ್ರ ಅವರ ‘ಬದುಕಿನ ಒಂದು ನೆನಪು’ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು. ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.