ಕನ್ನಡಪ್ರಭ ವಾರ್ತೆ ಗದಗ
ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ರಾಮನವಮಿ ಅಂಗವಾಗಿ ಜಿಲ್ಲಾದ್ಯಂತ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಗರದ ಕುಷ್ಟಗಿ ಚಾಳದ ಶ್ರೀ ರಾಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮ ಕಣ್ಮನ ಸೆಳೆಯಿತು. ಇಲ್ಲಿ ಶ್ರೀ ಬಾಲರಾಮನ ತೋಟ್ಟಿಲೊತ್ಸವವನ್ನು ಭಕ್ತರು ಭಕ್ತಿ ಭಾವದಿಂದ ನೆರವೇರಿಸಿದರು. ಜೊತೆಗೆ ಶ್ರೀರಾಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ದೇವಾಲಯವನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಶ್ರೀರಾಮನ ಆಶೀರ್ವಾದ ಪಡೆದುಕೊಂಡರು.ಜಿಲ್ಲೆಯ ವಿವಿಧ ಭಾಗಗಳಾದ ರೋಣ, ನರಗುಂದ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ರಾಮನವಮಿ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ರಾಮನಾಮ ಸಂಕೀರ್ತನೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಗದಗ
ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀರಾಮನವಮಿ
ಮುಂಡರಗಿ: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಸಾಯಿ ಬಾಬಾ ಮೂರ್ತಿಗೆ ಮಂಗಲ ಸ್ನಾನ, ಆರತಿ, ಕಾಕಡಾರತಿ, ಅಭಿಷೇಕ, ಮಹಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ದುಪಾರ್ಚನೆ, ಅಲಂಕಾರ, ನೈವೇದ್ಯ, ಆರತಿ ಮಹಾಮಂಗಳಾರತಿ, ಮಹಾಪ್ರಸಾದ, ಸೂರ್ಯಾಸ್ಥಕ್ಕೆ ದೂಪಾರತಿ, ಸಂಜೆ ಶೇಜಾರತಿ ನಡೆಯಿತು.ದೇವಸ್ಥಾನದಲ್ಲಿ ರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಮಹಿಳೆಯರು ವಿವಿಧ ದೇವರ ಹೆಸರು ಕೂಗಿ ತೊಟ್ಟಿಲು ಜೋಗುಳ ಪದ ಹಾಡಿದರು, ನಂತರ ಮಹಿಳೆರಿಗೆ ಉಡಿ ತುಂಬಿದರು. ಚಿಕ್ಕ ಮಕ್ಕಳು ರಾಮನ ವೇಷಧರಿಸುವ ಮೂಲಕ ಸಂಭ್ರಮಿಸಿದರು. ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದರು, ಪೂಜಾ ಕೈಂಕರ್ಯಗಳುನ್ನು ವಿ.ಚಿ. ಜೋಶಿ ನಡೆಸಿಕೊಟ್ಟರು,ಈ ಸಂದರ್ಭದಲ್ಲಿ ಸುಮಿತ್ರಾ ತಾಪಸ್ಕರ, ಸುರೇಶ ಬೋಸ್ಲೆ, ಭರಮಪ್ಪ ಪುಟ್ಟಣ್ಣವರ, ನಿಂಗನಗೌಡ್ರ ಗೌಡ್ರ. ಮಂಜುಳಾ ಸಜ್ಜನರ, ರಾಮಣ್ಣ ಇಲ್ಲೂರು, ಹುಲ್ಲಿಗೆಮ್ಮ ಭಜಂತ್ರಿ, ಡಾ. ಅಕ್ಕಮದೇವಿ ಸಾಲಿ, ಕವಿತಾ ಪಾಸಿ, ಯಲ್ಲಪ್ಪ ಕವಲೂರ, ಮಂಜುನಾಥ ಜಾಗಟಗೇರಿ ಸೇರಿದಂತೆ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ.