ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣ, ತಾಲೂಕಿನಲ್ಲಿ ಶ್ರೀರಾಮನವಮಿ ಹಿನ್ನೆಲೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ರಾಮನ ದೇವಾಲಯಗಳಲ್ಲಿ ಸಂಭ್ರಮ, ಸಡಗರ, ಶ್ರದ್ಧಾ ಭಕ್ತಿಯಿಂದ ಭಕ್ತರು ಪೂಜೆ ಪೂಜೆ ಸಲ್ಲಿಸಿದರು.ಪಟ್ಟಣದ ಹೊರವಲಯದ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ (ಬಿದ್ದಹನುಮಂತರಾಯ) ಭಕ್ತಮಂಡಳಿ ವತಿಯಿಂದ 32ನೇ ವರ್ಷದ ಶ್ರೀ ರಾಮ ನವಮಿ ಹಬ್ಬದ ಪೂಜಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ಬಂದ ಭಕ್ತರಿಗೆ ಅನ್ನದಾಸೋಹ ಪಾನಕ ಫಲಹಾರ ನೀಡಲಾಯಿತು. ಈ ದೇವಾಲಯಕ್ಕೆ ಸಿನಿಮಾ ನಟರಾದ ದಿ. ಡಾ. ರಾಜಕುಮಾರ್, ಪಾರ್ವತಮ್ಮ, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಕುಟುಂಬ ಸಮೇತ ಬಂದು ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು.ಪಟ್ಟಣದ ದೇವಾಲಯಗಳಾದ ಪಂಚಮುಖಿ ದೇವಸ್ಥಾನದ, ಕಾರ್ ಸ್ಟ್ಯಾಂಡ್ ಭಕ್ತ ಆಂಜನೇಯ, ಸಂತೆ ಮೈದಾನದ ಶ್ರೀ ಅಭಯ ಆಂಜನೇಯಸ್ವಾಮಿ, ಬೆಲ್ಲದ ಪೇಟೆ ಆಂಜನೇಯಸ್ವಾಮಿ, ತೋಟದಸಾಲು ಶ್ರೀ ರಾಮ ಮಂದಿರ, ರೈಲ್ವೆ ಸ್ಟೇಷನ್ ಹತ್ತಿರ ಹಾಗೂ ತಾಲೂಕಿನ ಎಂಎನ್ ಕೋಟೆ, ನಿಟ್ಟೂರು ಕಲ್ಲೂರು, ಕಡಬ, ಸಿಎಸ್ ಪುರ, ಮಣಿಕುಪ್ಪೆ, ಚೇಳೂರು, ಬೊಮ್ಮನಹಳ್ಳಿ, ಹಾಗಲವಾಡಿ ಸೇರಿದಂತೆ ತಾಲೂಕಿನ ವಿವಿಧ ಕಡೆಯಲ್ಲಿ ಶ್ರೀ ರಾಮ ನವಮಿ ಹಬ್ಬದ ಹಿನ್ನೆಲೆ ಬೆಳಗ್ಗೆಯಿಂದಲೇ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ಎಳೆನೀರು ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಗಣಪತಿ ಪೂಜೆ, ವಿಶೇಷ ಅಲಂಕಾರ, ಗಣಹೋಮ, ರಾಮತಾರಕ ಹೋಮ, ಪೂರ್ಣಾಹುತಿ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದವು. ಮಾರುತಿ ದೇವಸ್ಥಾನಗಳನ್ನು ರಂಗೋಲಿ, ತಳಿರು- ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ವಿಶೇಷ ಪೂಜೆ ನೆರವೇರಿಕೆ ಬಳಿಕ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಿದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.