ರಾಮ ದಶರಥಗಲ್ಲ, ಪುರೋಹಿತಗೆ ಹುಟ್ಟಿದ್ದು: ಪ್ರೊ. ಭಗವಾನ್

KannadaprabhaNewsNetwork |  
Published : Jun 10, 2024, 12:32 AM IST
೯ಎಚ್‌ಆರ್‌ಆರ್೨ಹರಿಹರದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರವರ ೧೩೩ನೇ, ಪ್ರೊ.ಬಿ.ಕೃಷ್ಣಪ್ಪ ನವರ ೮೬ನೇ ಜನ್ಮ ದಿನಾಚರಣೆ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಉದ್ಘಾಟಿಸಿದರು.೯ಎಚ್‌ಆರ್‌ಆರ್೨ಎಹರಿಹರದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಎಂ.ಗುರುಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ವಿವಾದಾತ್ಮಕ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಹರಿಹರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ವಿವಾದಾತ್ಮಕ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಹೇಳಿದರು.

ನಗರದ ಹೊರವಲಯದ ಕೃಷ್ಣಪ್ಪ ಭವನದದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ ಅವರ ೧೩೩ನೇ, ಪ್ರೊ. ಬಿ.ಕೃಷ್ಣಪ್ಪನವರ ೮೬ನೇ ಜನ್ಮ ದಿನಾಚರಣೆ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣದ ರಾಮ ದಶರಥ ಮಹಾರಾಜರ ಮಗ ಎಂಬುದಷ್ಟೆ ತಿಳಿದ ವಿಷಯವಾದರೂ ರಾಮ ದಶರಥ ಮಹಾರಾಜರಿಂದ ಹುಟ್ಟಿಲ್ಲ, ಬದಲಾಗಿ ಪುರೋಹಿತನೊಬ್ಬನಿಂದ ಹುಟ್ಟು ಕಂಡನು. ಅದೇ ರೀತಿ ಮಹಾಭಾರತದ ವಿಷಯಕ್ಕೆ ಬಂದರೆ ಮಕ್ಕಳು ಹುಟ್ಟಿಸಲಾಗಲ್ಲ ಎಂಬ ಶಾಪಗ್ರಸ್ಥನಾಗಿದ್ದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐವರು ಪಾಂಡವ ಸಹೋದರರ ತಂದೆ ಕುರು ರಾಜ್ಯದ ರಾಜ ಪಾಂಡು ಎಂದಿದ್ದರೂ, ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳ ಅನುಗ್ರಹದಿಂದ ಎಂದು ಭಗವಾನ್ ಹೇಳಿದರು.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ ಎಂದರು.

ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮೃತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದು ಹೇಳಿದರು.

ಅಮೆರಿಕಾದ ಜಗತ್ ಪ್ರಸಿದ್ಧ ಕೊಲಂಬಿಯಾ ವಿಶ್ವವಿದ್ಯಾನಿಲಯದ ಅಧ್ಯಾಪಕರು ಜಗತ್ತಿನ ಶ್ರೇಷ್ಠ ವಿದ್ವಾಂಸ ಡಾ.ಅಂಬೇಡ್ಕರ್ ಎಂದು ನಿರ್ಣಯಿಸಿದ್ದಾರೆ. ಅಂಬೇಡ್ಕರ್‌ ಅವರಿಗೆ ತಿಳಿಯದ ವಿಷಯವಿರಲಿಲ್ಲ, ಅವರಿಗೆ ಹಾಗೂ ಅಸ್ಪೃಶ್ಯರಿಗೆ ನ್ಯಾಯ ಕೊಡಿಸುವ ಹಂಬಲದಲ್ಲಿ ಅವರು ಜಗತ್ತಿನ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಿದ್ದರು ಎಂದರು.

ಈಗಿನ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಅಂಶಗಳು ಫ್ರೆಂಚ್ ಕ್ರಾಂತಿಯಿಂದ ಪ್ರೇರಿತವಾಗಿ ಬಂದಿಲ್ಲ, ಬದಲಾಗಿ ಅಂಬೇಡ್ಕರ್‌ ಅವರು ೪೦ ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಭ್ಯಾಸ ಮಾಡಿದ ಪರಿಣಾಮವಾಗಿದೆ. ಹಿಂದೂ ಧರ್ಮದಿಂದ ಬೇಸತ್ತ ಅಂಬೇಡ್ಕರ್‌ರವರು ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕಿಂತ ಹೆಚ್ಚು ಸಮಾನತೆ ಹಾಗೂ ವೈಜ್ಞಾನಿಕತೆಯನ್ನು ಪ್ರತಿಪಾದಿಸುವ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದರು.

ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯಿತರು, ಕುರುಬರು ಸೇರಿದಂತೆ ಎಲ್ಲ ಜಾತಿ, ಜನಾಂಗದವರು ಶೂದ್ರರು ಎಂದು ಪರಿಗಣಿಸಲ್ಪಡುತ್ತಾರೆ. ದಲಿತರೆಂದರೆ ಕೇವಲ ಎಸ್‌ಸಿ- ಎಸ್‌ಟಿ ಮಾತ್ರವಲ್ಲ. ಎಲ್ಲ ಜಾತಿ, ಜನಾಂಗದ ಬಡವರು, ಶೋಷಿತರು ಒಳಗೊಳ್ಳುತ್ತಾರೆಂದರು.

ಕ.ದ.ಸಂ.ಸ. ಕಾರ್ಯಕರ್ತರು ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು, ಭೂಮಿ ಮೇಲಿರುವ ಎಲ್ಲ ಮಾನವರು ಸಮಾನರು, ಯಾರೂ ಕೀಳಲ್ಲ, ಮೇಲಲ್ಲ, ನಮ್ಮ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ನಾವೆಲ್ಲಾ ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು. ಡಾ.ಅಂಬೇಡ್ಕರ್ ಹಾಗೂ ಪ್ರೊ. ಬಿ.ಕೃಷ್ಣಪ್ಪರ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದಲ್ಲಿ ಜಾತಿ ಜನಗಣತಿ ಅಂಕಿ ಅಂಶವನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕು. ಆ ಮೂಲಕ ಸಣ್ಣ, ಪುಟ್ಟ ಹಾಗೂ ಶೋಷಿತ ಸಮುದಾಯದವರಿಗೆ ಅನ್ನ, ಉದ್ಯೋಗ, ಶಿಕ್ಷಣ ಸಿಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಹಿಂಸೆ, ಶೋಷಣೆ, ಅಸ್ಪೃಶ್ಯತೆ ತಪ್ಪಿಸಿ ಸಮಾನತೆ ಸಾಧಿಸಲು ಬುದ್ಧ ರಾಜ್ಯವನ್ನು ಬಿಟ್ಟನು, ಚಕ್ರವರ್ತಿ ಅಶೋಕ ಯುದ್ಧವನ್ನು ಬಿಟ್ಟನು, ಜ್ಯೋತಿಬಾ ಫುಲೆ ಮನೆ ಬಿಟ್ಟರು, ಡಾ.ಅಂಬೇಡ್ಕರ್ ಧರ್ಮ ಬಿಟ್ಟರು, ಪ್ರೊ. ಬಿ.ಕೃಷ್ಣಪ್ಪರು ಪ್ರಾಂಶುಪಾಲರ ಹುದ್ದೆ ಬಿಟ್ಟರು. ರಾಜ್ಯದಲ್ಲಿ ಮಹಿಳಾ ಸಮಾನತೆ, ಜಾತ್ಯತೀತತೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರೆ ಅದಕ್ಕೆ ಕದಸಂಸ ಕಾರಣ ಎಂದರು.

ಆರೋಗ್ಯ ಮಾತೆ ಚರ್ಚ್‌ ಫಾದರ್ ಜಾರ್ಜ್ ಕೆ.ಎ., ದಸಂಸನ ರಾಜ್ಯ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರ್ಗಲ್, ಬಿ.ಎಸ್.ಗಂಗಾಧರಪ್ಪ, ಬಸವರಾಜ್ ನಾಗಮಂಗಲ, ವೆಂಕಟೇಶ್ ನಾಗಮಂಗಲ, ರಮೇಶ್‌ ಎಸ್.ಮಾದರ್, ದಸಂಸನ ರಾಜ್ಯ ಖಜಾಂಚಿ ಬಿ.ಎ. ಕಾಟ್ಕೆ, ರಾಜ್ಯ ಮಹಿಳಾ ಸಂಚಾಲಕಿ ರತ್ನಮ್ಮ, ಬಿ.ಎನ್. ಗಂಗಾಧರಪ್ಪ, ಬಿ.ಎನ್. ರಾಜು, ಬೆಲ್ಲದ ಮರದ ಕೃಷ್ಣಪ್ಪ, ಸಾವಿತ್ರ, ಶಿವಮೊಗ್ಗದ ಏಳುಕೋಟಿ, ಶಿವಬಸಪ್ಪ, ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ತಿಪ್ಪಣ್ಣ ಕಡ್ಲೆಗೊಂದಿ, ಚೌಡಪ್ಪ ಭಾನುವಳ್ಳಿ, ನಾಗರಾಜ್, ರಾಜ್ಯದ ವಿವಿಧೆಡೆಯಿಂದ ಪದಾಧಿಕಾರಿಗಳು ಆಗಮಿಸಿದ್ದರು.

- - - -೯ಎಚ್‌ಆರ್‌ಆರ್೨:

ಹರಿಹರದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್‌, ಪ್ರೊ. ಬಿ.ಕೃಷ್ಣಪ್ಪ ಜನ್ಮ ದಿನಾಚರಣೆ, ರಾಜ್ಯ ಪದಾಧಿಕಾರಿಗಳ ಸಭೆಯನ್ನು ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಉದ್ಘಾಟಿಸಿದರು. -೯ಎಚ್‌ಆರ್‌ಆರ್೨ಎ:

ಹರಿಹರದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಕೆ.ಎಸ್.ಭಗವಾನ್, ಎಂ.ಗುರುಮೂರ್ತಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ