ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಲಷ್ಕರ್ ಮೊಹಲ್ಲಾದ ಸಾಡೇ ರಸ್ತೆಯಲ್ಲಿರುವ ಐತಿಹಾಸಿಕ ರಸ್ತೆ ಮೀನಾ ಬಜಾರ್ ಬಹಳ ಜನಪ್ರಿಯವಾಗಿದ್ದು. ಈ ರಂಜಾನ್ ಈದ್ ಶಾಪಿಂಗ್ ಮೇಳ ಏ.11ಕ್ಕೆ ಮುಕ್ತಾಯವಾಗಲಿದೆ.ಮೀನಾ ಬಜಾರ್ ಮರ್ಚೆಂಟ್ಸ್ ಅಸೋಸಿಯೇಶನ್ ಮತ್ತು ಸೋಷಿಯಲ್ ವೆಲ್ ಫೇರ್ ಕಮಿಟಿಯನ್ನು ಕಳೆದ 25 ವರ್ಷಗಳ ಹಿಂದೆ ರಚಿಸಲಾಗಿದೆ.
ಶಾಸಕ ತನ್ವೀರ್ ಸೇಠ್ ಅವರು ಸಂಘದ ಚೇರ್ಮನ್ ಆಗಿದ್ದು, ಅಧ್ಯಕ್ಷ ಇಲಿಯಾಸ್ ಬೇಗ್, ಉಪಾಧ್ಯಕ್ಷ ನಿಸಾರ್ ಅಹಮದ್ ಖಾನ್, ಕಾರ್ಯದರ್ಶಿ ಸೈಯದ್ ಖೈಸರ್, ಸದಸ್ಯರಾದ ಸಲೀಂ, ಸಲ್ಮಾನ್ ಮತ್ತು ಇತರ ಸಮಿತಿಯ ಸದಸ್ಯರಾಗಿದ್ದಾರೆ.ಈ ರಂಜಾನ್ ಮೇಳಕ್ಕೆ, ಈದ್-ಉಲ್-ಫಿತರ್ ಮತ್ತು ಯುಗಾದಿ ಹಬ್ಬದ ಆಚರಣೆಗಾಗಿ ಎಲ್ಲ ಸಮುದಾಯದ ವ್ಯಕ್ತಿಗಳು ಅಂದರೆ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಗ್ರಾಹಕರು ಪವಿತ್ರ ರಂಜಾನ್ ತಿಂಗಳಲ್ಲಿ ಪ್ರತಿದಿನ ಆಗಮಿಸುತ್ತಿದ್ದಾರೆ.
ರಾಜ್ಯ ಮತ್ತು ಅಂತಾರಾಜ್ಯದಿಂದ ಆಗಮಿಸಿರುವ ಉದ್ಯಮಿಗಳು ಸಾವಿರಾರು ಅಂಗಡಿಗಳನ್ನು ನಿರ್ಮಿಸಿ ಬಟ್ಟೆ, ಅಲಂಕಾರಿಕ ವಸ್ತುಗಳು, ಪಾದರಕ್ಷೆಗಳು, ಉಡುಪುಗಳು, ಆಹಾರ ಪದಾರ್ಥಗಳು ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೈಸೂರು ನಗರ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಸೇರಿದಂತೆ ವಿವಿಧ ಕಡೆಗಳಿಂದ ಜನರು ಈ ಮೇಳಕ್ಕೆ ಬರುತ್ತಿದ್ದಾರೆ. ಈ ಮೇಳವು ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯರಾತ್ರಿವರೆಗೆ ತೆರೆದಿರುತ್ತದೆ. ಸಂಘದ ಆಡಳಿತ ಮಂಡಳಿಯು ಗ್ರಾಹಕರಿಗೆ ನಾಗರಿಕ ಸೌಲಭ್ಯಗಳು, ಶೌಚಾಲಯ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ನಂತಹ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಲ್ಲದೆ ಮೈಸೂರಿನ ಅಶೋಕ ರಸ್ತೆಯ ಮೀಲಾದ್ ಬಾಗ್ ನಲ್ಲಿ ಉಪವಾಸ ಮಾಡುವವರಿಗೆ, ಮಹಿಳೆಯರಿಗೆ ಇಫ್ತಾರ್ ವ್ಯವಸ್ಥೆ ಮಾಡಲಾಗುತ್ತಿದೆ.ಈ ರಂಜಾನ್ ಈದ್ ಶಾಪಿಂಗ್ ಮೇಳದ ಯಶಸ್ವಿಗಾಗಿ ಶ್ರಮಿಸುತ್ತಿರುವ ಪೊಲೀಸ್ ಆಯುಕ್ತರು, ಎನ್.ಆರ್. ಮತ್ತು ಮಂಡಿ ಪೊಲೀಸ್ ಠಾಣೆ ಸಿಬ್ಬಂದಿ, ಎನ್.ಆರ್. ಸಂಚಾರಿ ಪೊಲೀಸ್ ಸಿಬ್ಬಂದಿ, ಸೆಸ್ಕ್ ಇಲಾಖೆ, ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಇನ್ನಿತರ ಇಲಾಖೆಗಳಿಗೆ ಸಮಿತಿಯ ವ್ಯವಸ್ಥಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ.