ಕನ್ನಡಪ್ರಭ ವಾರ್ತೆ ವಿಜಯಪುರ
ನಿತ್ಯ ಬೆಳಗ್ಗೆ 5ಗಂಟೆಯಿಂದಲೇ ರಾಮಲಿಂಗೇಶ್ವರನ ಗರ್ಭಗುಡಿಯಲ್ಲಿ ಆರಂಭವಾಗುತ್ತಿದ್ದ ವಿಶೇಷ ಪೂಜೆ, ಅಭಿಷೇಕ ಮತ್ತು ಅನ್ನಪ್ರಸಾದ ನಿರಂತರವಾಗಿತ್ತು. ಶತಮಾನಗಳ ಹಿಂದೆ ಉದ್ಭವನಾಗಿದ್ದ ಲಿಂಗವನ್ನು ರಂಭಾಪುರದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಜಾತ್ರೆಯಲ್ಲಿ ನಡೆದ ಕಾರ್ಯಕ್ರಮಗಳು:ದೇವಸ್ಥಾನದ ಆವರಣದಲ್ಲಿ ನಿತ್ಯ ಅನ್ನಪ್ರಸಾದ, ಕೆಂಡ ಹಾಯುವುದು, ಪುರವಂತಿಕೆ, ಪಲ್ಲಕ್ಕಿ ಉತ್ಸವ, ಜ್ಞಾನದಿಪೋತ್ಸವ, ಪ್ರವಚನ, ಸಂಗೀತ ಸಂಜೆ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಜೋಡೆತ್ತಿನ ಬಂಡಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಬಹುತೇಕ ಕಡೆಗಳಲ್ಲಿನ ಜಾತ್ರೆಗಳಲ್ಲಿ ದೇವರ ಪಲ್ಲಕ್ಕಿ ದೇವಸ್ಥಾನದ ಸುತ್ತಲು ಪ್ರದಕ್ಷಿಣೆ ಹಾಕಿ, ಮರಳಿ ದೇವಸ್ಥಾನದಲ್ಲಿ ನೆಲೆಸುತ್ತವೆ. ಆದರೆ ಇಲ್ಲಿನ ರಾಮಲಿಂಗೇಶ್ವರನ ಮೂರ್ತಿ ಹೊತ್ತ ಪಲ್ಲಕ್ಕಿ ಗ್ರಾಮದ ಮನೆ ಮನೆಗೆ ತೆರಳಿ ಅಲ್ಲಿನ ಭಕ್ತರಿಗೆ ದರ್ಶನ ಕೊಟ್ಟು ಬರುತ್ತಾನೆ ದೇವರು. ಹೀಗೆ ಭಕ್ತರ ಮನೆಗೆ ತೆರಳಿದ ವೇಳೆ ಮನೆಯವರು ಹೊರಗೆ ಬಂದು ಒಂದು ಬಿಂದಿಗೆ ನೀರು ಹಾಗೂ ಒಂದು ತೆಂಗಿನ ಕಾಯಿಯನ್ನು ಸಮರ್ಪಿಸುತ್ತಾರೆ.
ರಾಮಲಿಂಗ ದೇವರ ಇನ್ನೊಂದು ವಿಶೇಷ ಎಂದರೆ ಪಲ್ಲಕ್ಕಿಯೊಂದಿಗೆ ಭಕ್ತರ ಮನೆಗೆ ತೆರಳಿದ ವೇಳೆ ಅವರ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಅಥವಾ ಅವರ ಮನೆಯಲ್ಲಿ ದುಷ್ಟಶಕ್ತಿಯ ಪ್ರಭಾವ ಇದೆ ಎಂದೆನಿಸಿದರೆ ಅಲ್ಲಿಯೇ ದೇವರ ಪಲ್ಲಕ್ಕಿ ಹೊಯ್ದಾಡಲು ಶುರು ಮಾಡುತ್ತದೆ. ಈ ವೇಳೆ ಮನೆಯವರಲ್ಲಿ ಯಾರಿಗಾದರೂ ದುಷ್ಟಶಕ್ತಿ ಇದ್ದಲ್ಲಿ ಅಂತಹವರು ದೇವರ ಪಲ್ಲಕ್ಕಿ ಮುಂದೆ ಬಂದು ಕುಣಿಯುತ್ತ ಆ ದುಷ್ಟಶಕ್ತಿಗಳು ರಾಮಲಿಂಗೇಶ್ವರನ ಎದುರು ಶರಣಾಗುತ್ತವೆ. ಈ ವೇಳೆ ದೇವರ ಪಲ್ಲಕ್ಕಿಯಲ್ಲಿನ ಲಿಂಬೆಹಣ್ಣನ್ನು ಅವರ ತಲೆಯ ಮೇಲೆ ಒಡೆದು, ವಿಭೂತಿ ಹಚ್ಚಿದಾಗ ಅವರ ಮೈಮೇಲಿನ ಭೂತಗಳು ದೂರವಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ದೇವರ ಮೇಲಿನ ಭಕ್ತಿ ಹಾಗೂ ದೇವರ ಆಚರಣೆಗಳು ಕಡಿಮೆ ಆಗುತ್ತಿದ್ದರೂ ಸಹ ಇಲ್ಲಿ ಮಾತ್ರ ಅನಾದಿ ಕಾಲದಿಂದಲೂ ಆಚರಣೆಗಳನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. 28ರಂದು ನಡೆದ ದೇವರ ಜಾತ್ರೆಯಂದು ಪಲ್ಲಕ್ಕಿ ಉತ್ಸವದ ವೇಳೆ ಹತ್ತಾರು ಪುರುವಂತರು ಒಡಪುಗಳನ್ನು ಹಾಕುತ್ತ ಪುರುವಂತಿಕೆ ಆಡುತ್ತಾರೆ.
ಹೌದು ಅತ್ಯಂತ ಖಡಕ್ ಹಾಗೂ ಜಾಗೃತ ದೇವರಾಗಿರುವ ರಾಮಲಿಂಗೇಶ್ವರ ರಂಭಾಪುರದಲ್ಲಿ ನೆಲೆಸಿರುವುದರಿಂದ ಈ ಊರಲ್ಲಿ ನಾನವೆಜ್ ತಿಂದು ಯಾರಾದರೂ ದೇವಸ್ಥಾನದ ಆವರಣ ಪ್ರವೇಶಿಸಿದರೆ ಮುಗಿಯಿತು ಅವರ ಕಥೆ. ಯಾಕಂದ್ರೆ ಕ್ಷಣಾರ್ಧದಲ್ಲಿ ಅವರ ಮೈಮೇಲೆಲ್ಲ ಗುಳ್ಳೆಗಳಾಗಿ ಹುಚ್ಚರಂತೆ ವರ್ತಿಸುತ್ತಾರೆ. ತಕ್ಷಣವೇ ಅವರನ್ನು ತಣ್ಣೀರಿನಲ್ಲಿ ಸ್ನಾನ ಮಾಡಿಸಿ, ದೇವರ ವಿಭೂತಿ ಹಚ್ಚಿದಾಗ ಮಾತ್ರ ಅವರ ಮೇಮೇಲಿನ ತುರಿಕೆ ನಿಲ್ಲುತ್ತದೆ.
ರಾಮಲಿಂಗೇಶ್ವರನ ಬಳಿ ಬಂದು ಭಕ್ತಿಯಿಂದ ಹರಕೆ ಹೊತ್ತರೆ ಮಾರನೇ ವರ್ಷದ ಜಾತ್ರೆಯೊಳಗಡೆ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಮದುವೆ, ಮಕ್ಕಳು, ನೌಕರಿ, ಇತರೇ ಸಮಸ್ಯೆಗಳೆಲ್ಲವನ್ನೂ ಅದೆಷ್ಟೋ ಭಕ್ತರು ಹರಕೆ ಹೊತ್ತು ಈಡೇರಿಸಿಕೊಂಡಿದ್ದಾರೆ.