ಕನ್ನಡಪ್ರಭ ವಾರ್ತೆ ಜಮಖಂಡಿ
ಬುಧವಾರ ಸಂಜೆ ನಗರದ ಕಲ್ಯಾಣ ಮಠದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸರ್ವಧರ್ಮದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಮೈಗೂರು ರಸ್ತೆಯ ಕಲೂತಿ ಕಲ್ಯಾಣ ಮಂಟಪದ ಆವರಣದಲ್ಲಿ ನಿರ್ಮಿಸುತ್ತಿರುವ ಮಾನವ ಧರ್ಮ ಮಂಟಪದಲ್ಲಿ ಸಮ್ಮೇಳನ ನಡೆಯಲಿದ್ದು, ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪೀಠಾಧ್ಯಕ್ಷ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮ ಸಮ್ಮೇಳನ ಜರುಗಲಿದೆ.
ನಾಡಿನ ವಿವಿಧ ಭಾಗಗಳ ಶಿವಾಚಾರ್ಯರು, ಧರ್ಮಗುರುಗಳು, ಸಾಹಿತಿಗಳು, ವಿದ್ವಾಂಸರು, ಸಮಾಜ ಚಿಂತಕರು, ಕವಿ-ಕಲಾವಿದರು ಹಾಗೂ ರಾಜಕೀಯ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನಗರದಲ್ಲಿ ನಡೆಯಲಿರುವ ಧರ್ಮ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಎಲ್ಲ ಸಮಾಜದವರ ಜವಾಬ್ದಾರಿಯಾಗಿದೆ. ಗುರುಹಿರಿಯರು, ಯುವಕರು, ಮಹಿಳೆಯರು ಹಾಗೂ ಧರ್ಮಾಭಿಮಾನಿಗಳು ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮ್ಮೇಳನವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಹತ್ತು ದಿನಗಳ ಕಾಲ ನಡೆಯಲಿರುವ ಧರ್ಮ ಸಮ್ಮೇಳನವನ್ನು ವ್ಯವಸ್ಥಿತವಾಗಿ ನಡೆಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು. ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಿಂಗಡಿಸಿ ಪ್ರತ್ಯೇಕ ಉಪಸಮಿತಿಗಳನ್ನು ರಚಿಸಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ವಸತಿ, ಊಟ, ಉಪಹಾರ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಅತಿಥಿಗಳ ಸ್ವಾಗತ, ಶೋಭಾಯಾತ್ರೆ, ವೇದಿಕೆ ನಿರ್ವಹಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ತಮಗೆ ಯಾವುದೇ ಜವಾಬ್ದಾರಿ ನೀಡಿದರೂ ಪೂರ್ಣ ಸಮಯ ನೀಡಿ ನಿರ್ವಹಿಸಲು ಸಿದ್ಧನಿದ್ದೇನೆ ಎಂದರು.
ಸಭೆಯಲ್ಲಿ ಕಲ್ಯಾಣ ಮಠದ ಶ್ರೀಗಳು, ಹೀರೆಪಡಸಲಗಿ ಶ್ರೀಗಳು, ಬನಹಟ್ಟಿ ಹಿರೇಮಠದ ಶ್ರೀಗಳು, ಶ್ರೀಗಳು, ಸಿಂದಗಿ ಸಾರಂಗ ಮಠದ ಶ್ರೀಗಳು, ಕೊಣ್ಣೂರ ಹೊರಗಿನ ಮಠದ ಶ್ರೀಗಳು, ಮುತ್ತೂರಿನ ಶ್ರೀಗಳು, ತೇರದಾಳ ಹಿರೇಮಠದ ಶ್ರೀಗಳು, ಜಕನೂರು ಮಾಧುಲಿಂಗ ಶ್ರೀಗಳು, ಕುಂಚನೂರು ಸಿದ್ದಲಿಂಗ ದೇವರು, ಆಲಗೂರು ಲಕ್ಷ್ಮಣ ಮುತ್ಯಾ ಹಾಗೂ ಸಿದ್ದಮುತ್ಯಾ ಸೇರಿದಂತೆ ವಿವಿಧ ಮಠಗಳ ಶ್ರೀಗಳು, ಧರ್ಮಗುರುಗಳು ಹಾಗೂ ವಿವಿಧ ಸಮಾಜಗಳ ಗಣ್ಯರು ಉಪಸ್ಥಿತರಿದ್ದರು.