ಚಳ್ಳಕೆರೆ: ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹೋರಾಟ ಮಹಿಳಾ ಸಮುದಾಯಕ್ಕೆ ಸ್ಫೂರ್ತಿಯಾದೆ ಎಂದು ತಹಸೀಲ್ದಾರ್ ರೇಹಾನ್ಪಾಷ ಹೇಳಿದರು.
ನೂರಾರು ವರ್ಷಗಳ ಹಿಂದೆ ನಮ್ಮನ್ನಾಳಿದ ಎಲ್ಲಾ ಮಹಾರಾಜರು ಪ್ರಜೆಗಳ ಹಿತಕ್ಕಾಗಿ ಪ್ರಾಣತ್ಯಾಗ ಮಾಡಲು ಹಿಂದೇಟು ಹೊಡೆದವರಲ್ಲ. ಯಾವುದೇ ರೀತಿಯ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಪ್ರಜೆಗಳನ್ನು ರಕ್ಷಿಸಿದ ಕೀರ್ತಿ ಅವರದ್ದು. ಅಂತಹ ಮಹಾನ್ತ್ಯಾಗಿಗಳಲ್ಲಿ ಕಿತ್ತೂರು ಸಂಸ್ಥಾನದ ಕಿತ್ತೂರು ರಾಣಿ ಚೆನ್ನಮ್ಮ ಅಗ್ರಗಣ್ಯರು ಎಂದರು.
ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಮಹಾನ್ ಕಾರ್ಯವನ್ನು ದಾಖಲಿಸುವಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಮುಖರು. ಅಂದು ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದರೂ, ವೀರರಾಣಿ ಕಿತ್ತೂರು ಚೆನ್ನಮ್ಮ ಕೆಚ್ಚೆದೆಯ ಕಲಿಯಾಗಿ ಹೋರಾಟ ನಡೆಸಿ ಎಲ್ಲರಿಗೂ ಸ್ಫೂರ್ತಿಯಾದರು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘದ ಅಧ್ಯಕ್ಷ ಕೆ.ಟಿ.ಶಿವಕುಮಾರ್, ರಾಜ್ಯ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವದ ಮೂಲಕ ಅವರ ಹೋರಾಟ, ತ್ಯಾಗಬಲಿದಾನವನ್ನು ನಿರಂತರವಾಗಿ ನೆನಪಿಸುವ ಕಾರ್ಯವನ್ನು ಮಾಡಿದೆ. ಇಡೀ ಮಹಿಳಾ ಸಮುದಾಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಸದಾ ಆದರ್ಶಪ್ರಾಯರು. ನಾವೆಲ್ಲರೂ ಅವರ ಆದರ್ಶಗಳ ಪಾಲನೆಯಲ್ಲಿ ದೃಢಹೆಜ್ಜೆ ಇಡೋಣ ಎಂದರು.