ಕನ್ನಡಪ್ರಭ ವಾರ್ತೆ ಇಂಡಿ
ಯಡ್ರಾಮಿ ತಾಲೂಕಿನ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಗೆ ಗಲ್ಲಿಗೇರಿಸಿ, ಶಾಲಾ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಜತೆಗೆ ನೊಂದ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಆಲ್-ಇಂಡಿಯಾ ಬಂಜಾರಾ ಸೇವಾ ಸಂಘ (ಎ.ಐ.ಬಿ.ಎಸ್.ಎಸ್.) ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅಪ್ರಾಪ್ತೆ ಮೇಲೆ ಶಾಲಾ ಮುಖ್ಯ ಶಿಕ್ಷಕ ಹಾಜಿ ಮಲಂಗ್ ಎನ್ನುವ ವ್ಯಕ್ತಿ ಶಾಲಾ ಬಾಲಕಿ ಮೇಲೆ ತನ್ನ ನೀಚತನ ತೋರಿಸಿ, ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ಶಾಲಾ ಶಿಕ್ಷಕರೇ ಈ ರೀತಿ ಭಕ್ಷಕರಾಗಿ ಅತ್ಯಾಚಾರ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದರು.
ಆ ಶಾಲೆ ಶಿಕ್ಷಕರಾದ ಹಾಜಿ ಮಂಗಲ್ನನ್ನು ಸೇವೆಯಿಂದ ವಜಾಗೊಳಿಸಿ, ಗಲ್ಲಿಗೇರಿಸಬೇಕು. ಜತೆಗೆ ಆ ಶಾಲಾ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ನೊಂದ ಅಪ್ರಾಪ್ತ ಬಾಲಕಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕೆಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ವಿನಂತಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ನಂತರ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ತಾಲೂಕು ಅಧ್ಯಕ್ಷ ಸಂಜೀವ ದ. ಚವ್ಹಾಣ, ವಿಜಯಕುಮಾರ ರಾಠೋಡ, ಮೋಹನ್ ರಾಠೋಡ, ಪ್ರಕಾಶ ಮಹಾರಾಜ, ರಾಜು ಪವಾರ, ನಿಲೇಶ ರಾಠೋಡ, ಶಶಿಕಾಂತ, ಬಾಬು ಪವಾರ, ಪ್ರಕಾಶ ರಾಠೋಡ, ಪಂಡಿತ ರಾಠೋಡ, ವಿಜಯ ಪವಾರ, ಸಚೀನ ರಾಠೋಡ, ಸಾಗರ ರಾಠೋಡ, ಲಕ್ಷ್ಮಣ ಚವ್ಹಾಣ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.