ಅಂಕೋಲಾ:
ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಬೆಂಗಳೂರಿನ ಪ್ರೀಡ್ಂ ಪಾರ್ಕ್ನಲ್ಲಿ ಫೆ. 13,14ರಂದು ರಾಜ್ಯಮಟ್ಟದ ‘ವಿಧಾನ ಸೌಧ ಚಲೋ’ ಬೃಹತ್ ಪ್ರತಿಭಟನೆ ಹಿನ್ನೆಲೆ ತಾಲೂಕು ಮಟ್ಟದ ಸಮಾವೇಶ ಪಟ್ಟಣದಲ್ಲಿ ನಡೆಯಿತು.ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ, 8 ವರ್ಷಗಳ ಹಿಂದೆ ರಾಜ್ಯ ಸರ್ಕಾರ, ಜಾರಿಗೊಳಿಸಿದ ಆರ್ಸಿಎಚ್ ಪೋರ್ಟಲ್ಗೆ ಲಿಂಕ್ ಮಾಡಿದ್ದು ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿದೆ. ವಿವಿಧ ದಾಖಲೆಗಳ ಪ್ರಕಾರ ಪ್ರತಿ ತಿಂಗಳು 10000 ದಿಂದ 12,000 ಆಶಾಗಳು ಆರ್ಸಿಎಚ್ ಪೋರ್ಟ್ನಲ್ಲಿ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗಿದ್ದಾರೆ. ಕಷ್ಟ ಪಟ್ಟು ದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣ ಎಲ್ಲಿ ಹೋಗುತ್ತಿದೆ?ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ ಎಂದರು.ಇದನ್ನು ಸರಿಪಡಿಸುವಂತೆ ಸಂಘವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ. ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಸಾಕಷ್ಟು ದಾಖಲೆ ಸಹ ಸಂಘವು ನೀಡಿದೆ. ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿ ಉಳಿಸಿಕೊಳ್ಳುವ ತನ್ನ ಹಠಮಾರಿಧೋರಣೆ ಮುಂದುವರಿಸಿದೆ ಎಂದು ಕಿಡಿಕಾರಿದರು.ಈ ಎಲ್ಲ ಸಮಸ್ಯೆಗಳ ಏಕೈಕ ಪರಿಹಾರವೆಂದರೆ ಆಶಾಗಳ ವೇತನ ಪಾವತಿ ಪ್ರಕ್ರಿಯೆಯನ್ನು ಆರ್ಸಿಎಚ್ ಪೋರ್ಟಲ್ನಿಂದ ಡಿ-ಲಿಂಕ್ ಮಾಡಬೇಕು. ಈ ಬೇಡಿಕೆ ಜತೆಗೆ ₹ 15000 ನಿಶ್ಚಿತ ವೇತನ, ಇನ್ನಿತರ ನ್ಯಾಯ ಸಮ್ಮತ ಬೇಡಿಕೆ ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಶಾಗಳು ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ತಾಲೂಕಾಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷರಾದ ಶಾರದಾ ನಾಯಕ, ನಾಗರತ್ನಾ ನಾಯಕ, ಮಾಲತಿ ನಾಯಕ, ಸುನಿತಾ ಗುಣಗಾ, ಜುಲೇಕಾ, ತಾರಾ ನಾಯ್ಕ, ಕಾರ್ಯದರ್ಶಿ ಸಂಗೀತಾ ನಾಯ್ಕ, ಜಂಟಿ ಕಾರ್ಯದರ್ಶಿಗಳಾದ ಸವಿತಾ ನಾಯಕ, ಗಿರಿಜಾ ವೆರ್ಣೇಕರ, ಸದಸ್ಯರಾದ ಸೌಭಾಗ್ಯ ಬಂಟ, ಪ್ರತಿಭಾ ನಾಯಕ, ರೂಪಾ ನಾಯ್ಕ, ರೋಹಿಣಿ ಗೌಡ, ಪ್ರೀತಿ ಭಂಟ್ ಸೇರಿದಂತೆ ತಾಲೂಕಿನ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.