ಹೊಸಪೇಟೆ: ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಿಯಮ ಮೀರಿ ಸಂಚರಿಸುತ್ತಿದ್ದ ಶಾಲಾ-ಕಾಲೇಜು ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ನಡೆದ ಬೃಹತ್ ತಪಾಸಣಾ ಕಾರ್ಯಚರಣೆಯಲ್ಲಿ ನಿಯಮ ಉಲ್ಲಂಘಿಸಿದ 103 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ₹11.82 ಲಕ್ಷ ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ತಿಳಿಸಿದರು.
15 ವರ್ಷ ಪೂರ್ಣಗೊಂಡ ಹಾಗೂ ಸಂಚಾರಕ್ಕೆ ಅನರ್ಹವಾಗಿದ್ದ ಸುಮಾರು 61 ಶಾಲಾ ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್ಸಿ) ರದ್ದುಪಡಿಸಿದೆ. ಸೂಕ್ತ ರಹದಾರಿ (ಪರ್ಮಿಟ್) ಹಾಗೂ ಅರ್ಹತಾ ಪತ್ರ ಇಲ್ಲದೆ ರಸ್ತೆಯಲ್ಲಿ ಚಲಿಸುತ್ತಿದ್ದ ಸುಮಾರು 40ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಹಡಗಲಿಯಲ್ಲಿ 11 ವಾಹನಗಳು ಸೇರಿದಂತೆ ಹಲವು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ವರದಿಯಾದ 103 ಪ್ರಕರಣಗಳಿಂದ ₹5.37 ಲಕ್ಷ ತೆರಿಗೆ ಹಾಗೂ ₹6.45 ಲಕ್ಷ ದಂಡ ಸೇರಿದಂತೆ ಒಟ್ಟು ₹11.82 ಲಕ್ಷ ಮೊತ್ತ ದಂಡ ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದರು.
ಮಾನದಂಡ ಪಾಲಿಸಿಮಕ್ಕಳ ಪ್ರಾಣ ರಕ್ಷಣೆ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಂದು ಶಾಲಾ-ಕಾಲೇಜು ವಾಹನಗಳಲ್ಲಿ ವಾಹನದ ಲೊಕೇಶನ್ ಹಾಗೂ ಒಳಗಿನ ಚಟುವಟಿಕೆ ತಿಳಿಯಲು ಜಿಪಿಎಸ್ ಹಾಗೂ ಸಿಸಿಟಿವಿ ಅಳವಡಿಸಬೇಕು. ಆಕಸ್ಮಿಕ ಅಪಾಯದ ಸಮಯದಲ್ಲಿ ಬಳಸಲು ತುರ್ತು ನಿರ್ಗಮನ ಬಾಗಿಲು ಬಳಸಬೇಕು. ಬೆಂಕಿ ಅವಘಡಗಳಂತಹ ಪ್ರಕರಣ ತಡೆಯಲು ಅಗ್ನಿಶಾಮಕ ಉಪಕರಣ ಜತೆಗೆ ಮಿತ ವೇಗದಲ್ಲಿ ಚಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಮೂರು ತಿಂಗಳಲ್ಲಿ ₹1.09 ಕೋಟಿ ದಂಡ ವಸೂಲಿ
ಏಪ್ರಿಲ್ನಿಂದ ಜೂನ್ 2026ರ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದು, ಶಾಲಾ ಬಸ್ಗಳನ್ನು ಹೊರತುಪಡಿಸಿ ಲಾರಿ, ಮ್ಯಾಕ್ಸಿ ಕ್ಯಾಬ್, ಆಟೋ ರಿಕ್ಷಾ ಸೇರಿದಂತೆ ಬಹುತೇಕ ಎಲ್ಲ ವಾಣಿಜ್ಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನವೀಕರಿಸದಿರುವುದು, ವಾಹನ ವಿಮೆ ಇಲ್ಲದೆ ವಾಹನ ಚಾಲನೆ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು, ಮಿತಿಮೀರಿದ ಸರಕು ಸಾಗಣೆ ಮತ್ತು ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಸೇರಿದಂತೆ ಒಟ್ಟು 1931 ಪ್ರಕರಣ ದಾಖಲಿಸಲಾಗಿದ್ದು, ಅದಕ್ಕಾಗಿ ₹1,09,18,488 ದಂಡ ವಸೂಲಾತಿ ಮಾಡಲಾಗಿದೆ ಎಂದರು.