ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಡಿ.ವಿ. ಗುಂಡಪ್ಪನವರ ಮಂಕುತ್ತಿಮ್ಮನ ಕಗ್ಗ ಓದಿದರೆ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಗೌಡ ಹೇಳಿದರು.ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ತಾಲೂಕು ಕಸಾಪ ಹಾಗೂ ಅನಿಕೇತನ ಬಳಗದಿಂದ ವತಿಯಿಂದ ಹಮ್ಮಿಕೊಂಡಿದ್ದ ಡಿವಿಜಿ ಅವರ ಸಂಸ್ಮರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರಾದ ಡಿವಿಜಿ ಅವರ ಅತ್ಯಂತ ಗಮರ್ನಾಹ ಕೃತಿ ಮಂಕುತಿಮ್ಮನ ಕಗ್ಗ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ದಾರಿ ದೀಪವಾಗಿದೆ. ಮನುಷ್ಯರಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಈ ಕೃತಿಯನ್ನು ಓದಬೇಕು. ಡಿವಿಜಿ ಮನೆಯಲ್ಲಿ ಕಡು ಬಡತನವಿದ್ದರೂ ಸಹ ಎಂದಿಗೂ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ. ಒಮ್ಮೆ ಸಂಘ ಸಂಸ್ಥೆಗಳು ಸೇರಿ ಡಿವಿಜಿ ಅವರನ್ನು ಸನ್ಮಾನಿಸಿ 1 ಲಕ್ಷ ನೀಡಿದರು. ಆದರೆ ಆ ಹಣವನ್ನು ಟ್ರಸ್ಟ್ಗೆ ದಾನವಾಗಿ ನೀಡಿದರು.ಡಿ.ವಿ.ಗುಂಡಪ್ಪರ ಬಡತನವನ್ನು ಚೆನ್ನಾಗಿ ಅರಿತಿದ್ದ ಅಂದಿನ ದಿವಾನ್ ವಿಶ್ವೇಶ್ವರಯ್ಯ ನಿಮ್ಮ ಮನೆಗೆ ಬರುವೆ ಎಂದಿದ್ದರೂ ನಿರಾಕರಿಸಿದ್ದರು. ಇದಲ್ಲದೆ ಆಂಗ್ಲ ಪ್ರತಿಕೆಯೊಂದಕ್ಕೆ ಸಂಪಾದಕರಾಗುವ ಅವಕಾಶ ಸಿಕ್ಕರೂ ಮತ್ತೊಬ್ಬರೊಂದಿಗೆ ಗುಲಾಮರಾಗಿ ಕೆಲಸ ಮಾಡುವುದು ಬೇಡವೆಂದು ಅದನ್ನೂ ನಿರಾಕರಿಸಿದ ಸ್ವಾಭಿಮಾನಿ ಡಿವಿಜಿ. ಅಂದಿನ ಸರ್ಕಾರಕ್ಕೆ ಸಲಹೆ ನೀಡಿದ್ದಕ್ಕೆ ನೀಡಿದ್ದ ಚೆಕ್ಗಳನ್ನು ಬಳಸದೆ ಪೆಟ್ಟಿಗೆಯಲ್ಲಿ ಎಸೆದಿದ್ದದ್ದು ಅವರು ಸತ್ತ ನಂತರ ಬೆಳೆಕಿಗೆ ಬಂದಿದೆ. ಸಾಹಿತ್ಯವಲ್ಲದೆ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಡಿವಿಜಿ ನೈಪುಣ್ಯತೆಯನ್ನು ಹೊಂದಿದ್ದರು. ಎಂದರಲ್ಲದೆ ಇಂದಿನ ಜಾತಿ ಪದ್ಧತಿ ವಿರುದ್ದ ಡಿವಿಜಿ 52 ವರ್ಷಗಳ ಹಿಂದೆಯೇ ವಿರೋಧ ಮಾಡಿದ್ದರು. ಡಿವಿಜಿ ಸ್ವಾಭಿಮಾನ ಹಾಗೂ ಆದರ್ಶ ಅಂಶಗಳು ಇಂದಿನ ಜನತೆ ಅನುಕರಣಿಯವಾಗಿದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಆರ್.ಅಶ್ವಥ್ ಮಾತನಾಡಿ, ರಾಜ್ಯದಲ್ಲಿ ಉದ್ಯೋಗ ಮಾಡುವ ಅನ್ಯ ಭಾಷಿಗರಿಗೆ ಕನ್ನಡ ಕಲಿತರೆ ಮಾತ್ರ ಇಲ್ಲಿ ಉದ್ಯೋಗ ಮಾಡಲು ಸಾಧ್ಯವೆಂಬ ಭಾವನೆ ಮೂಡಿಸಬೇಕು. ಅನ್ಯ ಭಾಷಿಕರ ಉದ್ಯೋಗಿಗಳಿಗೆ ಸರ್ಕಾರ ತರಬೇತಿ ನೀಡಿದ ನಂತವೇ ಬ್ಯಾಂಕ್ ಹಾಗೂ ಇತರೇ ಕಡೆ ಉದ್ಯೋಗ ನೀಡಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಪರಿಷತ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಹಾಗೂ ಶಿಕ್ಷಣದಲ್ಲಿ ಪೂರಕವಾದ ಅಂಶಗಳನ್ನು ಶಾಲಾ ಕಾಲೇಜುಗಳಿಗೆ ಉಣಬಡಿಸಲಾಗುತ್ತಿದೆ. ಜನಸಾಮಾನ್ಯರ ಹತ್ತಿರ ಸಾಹಿತ್ಯ ಪರಿಷತ್ ಕೊಂಡ್ಯೊಬೇಕೆಂದು ಜನರ ಮಧ್ಯೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ನಿಟಕ ಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಎಸ್.ರಾಮ್ಪ್ರಸಾದ್, ಹಿರಿಯ ವಕೀಲ ಜಯಪ್ರಕಾಶ್, ಜೈನ್ ಕಾಲೇಜಿನ ಉಪನ್ಯಾಸಕ ಶ್ರೀನಿವಾಸ್ ಪ್ರಸಾದ್, ಶಿಕ್ಷಕಿ ಶ್ಯಾಮಲ, ಶ್ರೀನಾಥ್, ಬಿ.ನಾಗರಾಜ್ ಇತರರು ಇದ್ದರು.