ಶಿರಸಿ: ಶ್ರದ್ಧೆಯಿಂದ ದೇವರ ಸಾಕ್ಷಾತ್ಕಾರ, ಸಂಶೋಧನೆಯಿಂದಲ್ಲ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಜಗತ್ತಿನಲ್ಲಿ ತತ್ವ ದರ್ಶನಕ್ಕೆ ಹೊರಟ, ತತ್ವ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸುತ್ತಿರುವ ವ್ಯಕ್ತಿಗಳಲ್ಲಿ ಎರಡು ಪ್ರಕಾರ. ಒಂದು ಶ್ರದ್ಧೆಯ ಮಾರ್ಗ ಇನ್ನೊಂದು ಸಂಶೋಧನೆಯ ಮಾರ್ಗ. ಪರಮಾತ್ಮನ ತತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಎರಡು ಪ್ರಕಾರಗಳಲ್ಲಿ ಇದ್ದಾರೆ. ಶ್ರದ್ಧೆ- ಭಕ್ತಿಯಿಂದ ಅವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಹೊರಟವರು ಮತ್ತು ಅವನನ್ನು ವಿಚಾರದಿಂದ, ತರ್ಕದಿಂದ, ಸಂಶೋಧನೆಯಿಂದ ವೈಜ್ಞಾನಿಕ ಆವಿಷ್ಕಾರಗಳಿಂದ ಅವನನ್ನು ಹುಡುಕುವ ಪ್ರಯತ್ನ ಮಾಡುವವರು. ಈ ಎರಡು ಮಾರ್ಗಗಳಲ್ಲಿ ಶ್ರದ್ಧೆಯಿಂದ ತತ್ವ ಸಾಕ್ಷಾತ್ಕಾರ ಎನ್ನುವ ಮಾರ್ಗವೇ ಶ್ರೇಷ್ಠವಾದದ್ದು ಎಂದರು.
ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರು ವಿಶ್ವನಾಥ ಹೆಗಡೆ ಶೀಗೆಹಳ್ಳಿ, ಶ್ರೀನಿವಾಸ ಹೆಗಡೆ ಇತರರು ಇದ್ದರು.