ಮಹಿಳಾ ದಿನಾಚರಣೆ । ಸಾಧಕ ಮಹಿಳೆಯರಿಗೆ ಗೌರವ ಸಮರ್ಪಣೆ -ನುಡಿ ಕನ್ನಡೋತ್ಸವ ಉದ್ಘಾಟನೆ
ಮಹಿಳಾ ದಿನಾಚರಣೆ ಪ್ರಯುಕ್ತ ಹರಿಹರಪುರ ಹೋಬಳಿ ಸಾಧಕ ಮಹಿಳೆಯರ ಗುರುತಿಸುವ ಕಾರ್ಯ ಬಹಳ ವಿಶೇಷವಾಗಿ ನಡೆಯುತ್ತಿರುವುದು ಶ್ಲಾಘನೀಯ ಇಂತಹ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಸುವರ್ಣ ಕೇಶವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹರಿಹರಪುರ ದಿಂದ ಜೀವನಚೇತನ ವೇದಿಕೆ ಸಹಕಾರದೊಂದಿಗೆ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಗೌರವ ಸಮರ್ಪಣೆ ಹಾಗೂ ನುಡಿ ಕನ್ನಡೋತ್ಸವ ಉದ್ಘಾಟಿಸಿ ಮಾತನಾಡಿದರು. ನಿರಂತರವಾಗಿ ನಾವು ಪುಸ್ತಕ ಓದುವ ಅಭ್ಯಾಸ ಮಾಡಿ ಕೊಂಡಾಗ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಮಾತನಾಡಿ ನಮ್ಮಲ್ಲಿರುವ ಪ್ರತಿಭೆ ಹೊರ ಹೊಮ್ಮಿಸಲು ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯ ಕ್ರಮಗಳು ಹರಿಹರಪುರ ಹೋಬಳಿ ಯಾದ್ಯಂತ ಆಯೋಜಿಸಲಾಗುತ್ತಿದೆ. ದಿನದಿನವೂ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಕಾರ್ಯಕ್ರಮ ಜನ ಮಾನಸ ತಲುಪುತ್ತಿರುವುದಕ್ಕೆ ಸಾಕ್ಷಿ, ಈ ಕಾರ್ಯಕ್ರಮ ಒಂದೊಂದು ಹೊಸ ಚಿಂತನೆಗಳಿಗೆ ದಾರಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯದ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ವೇದಿಕೆಗಳಲ್ಲಿ ಅವಕಾಶ ಸಿಕ್ಕಿದಾಗ ಅದನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರ ಗುರುತಿಸುವ ಕಾರ್ಯ ಇದಾಗಿದ್ದು ಹರಿಹರಪುರ ಹೋಬಳಿಯಾದ್ಯಂತ ಸಾಧಕ ಹಿರಿಯರನ್ನು ಗುರುತಿಸಿ ಗೌರವಿಸುವ ಕಾರ್ಯ ಮುಂದಿನ ದಿನ ಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ನಡೆಯಲಿದೆ ಎಂದರು.ಮಹಿಳಾ ಸಾಧಕರಿಗೆ ಗೌರವ ಸಮರ್ಪಣೆ ನೆರವೇರಿಸಿದ ಹರಿಹರಪುರ ಗ್ರಾಪಂ ಉಪಾಧ್ಯಕ್ಷರಾದ ವಸಂತಿ ಶಿವಾನಂದ ಮಾತನಾಡಿ ಹಳ್ಳಿ ಹಳ್ಳಿಯ ಸಾಧಕರ ಗುರುತಿಸಿ ಗೌರವಿಸುತ್ತಿರುವುದು ತುಂಬಾ ಹೆಮ್ಮೆ ಮತ್ತು ಶ್ಲಾಘನೀಯವಾದ ಕೆಲಸ ಎಂದರು,
ಹರಿಹರಪುರ ಹೋಬಳಿಯಾದ್ಯಂತ ಹಳ್ಳಿಗಳಿಂದ ಆಗಮಿಸಿದ ಮಹಿಳೆಯರು ಮತ್ತು ಮಕ್ಕಳಿಂದ ಜನಪದ, ಭಾವಗೀತೆ, ಲಾವಣಿ, ಕೋಲಾಟ ನೃತ್ಯ, ಕವನವಾಚನ, ಸೋಬಾನೆ ಪದ ಕಾರ್ಯಕ್ರಮ ನೀಡಿದರು.