ನೈಋತ್ಯ ರೈಲ್ವೆಯಿಂದ ದಾಖಲೆಯ ಸರಕು ಸಾಗಣೆ

KannadaprabhaNewsNetwork |  
Published : Jul 03, 2026, 02:45 AM IST
ನೈಋತ್ಯ ರೈಲ್ವೆಯ ವ್ಯಾಗನ್ ಲೋಡಿಂಗ್ ಮಾಡುತ್ತಿರುವುದು. | Kannada Prabha

ಸಾರಾಂಶ

ನೈಋತ್ಯ ರೈಲ್ವೆ ವಲಯವು ಜೂನ್​ನಲ್ಲಿ ಸರಕು ಸಾಗಣೆಯಲ್ಲಿ ಗಮನಾರ್ಹ ದಾಖಲೆ ಮಟ್ಟದ ಪ್ರಗತಿ ಸಾಧಿಸಿದೆ. ಜೂನ್​ನಲ್ಲಿ 4.18 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ 2025ರ ಜೂನ್ ಅವಧಿಯ (3.98 ಮಿಲಿಯನ್ ಟನ್) ಸಾಧನೆಗಿಂತ ಶೇ. 5.2ರಷ್ಟು ಹೆಚ್ಚಾಗಿದೆ.

ಹುಬ್ಬಳ್ಳಿ:

ನೈಋತ್ಯ ರೈಲ್ವೆ ವಲಯವು ಜೂನ್​ನಲ್ಲಿ ಸರಕು ಸಾಗಣೆಯಲ್ಲಿ ಗಮನಾರ್ಹ ದಾಖಲೆ ಮಟ್ಟದ ಪ್ರಗತಿ ಸಾಧಿಸಿದೆ. ಜೂನ್​ನಲ್ಲಿ 4.18 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ 2025ರ ಜೂನ್ ಅವಧಿಯ (3.98 ಮಿಲಿಯನ್ ಟನ್) ಸಾಧನೆಗಿಂತ ಶೇ. 5.2ರಷ್ಟು ಹೆಚ್ಚಾಗಿದೆ.

ಜೂನ್ ತಿಂಗಳ ಇತಿಹಾಸದಲ್ಲೇ ಇದು ಈ ವರೆಗೆ ದಾಖಲಾದ ಅತ್ಯಧಿಕ ಸಾಧನೆಯಾಗಿದೆ. ಇದರೊಂದಿಗೆ, ದೈನಂದಿನ ಸರಾಸರಿ ವ್ಯಾಗನ್ ಲೋಡಿಂಗ್​ನಲ್ಲೂ ಹೊಸ ದಾಖಲೆ ನಿಮಾಣವಾಗಿದೆ. ನಿತ್ಯ ಸರಾಸರಿ 2,221 ವ್ಯಾಗನ್​ಗಳನ್ನು ಲೋಡ್ ಮಾಡಲಾಗಿದೆ. ಇದು ಕಳೆದ ವರ್ಷದ (2,143 ವ್ಯಾಗನ್​ಗಳು) ಸಾಧನೆಗಿಂತ ಶೇ. 3.6ರಷ್ಟು ಅಧಿಕವಾಗಿದೆ.

ಕಬ್ಬಿಣದ ಅದಿರು 1.69 ಮಿಲಿಯನ್ ಟನ್ (ಎಂಟಿ) ಸಾಗಣೆಯಾಗಿದ್ದು, ಶೇ. 6.3ರಷ್ಟು ಬೆಳವಣಿಗೆ ಕಂಡಿದೆ. ಉಕ್ಕು (ಸ್ಟೀಲ್) 0.90 ಎಂಟಿ ಸಾಗಣೆಯೊಂದಿಗೆ ಶೇ. 7.4ರಷ್ಟು ಏರಿಕೆಯಾಗಿದೆ. ಆರ್​ಎಂಎಸ್​ಪಿ ಶೇ. 34.5ರಷ್ಟು ಭಾರಿ ಹೆಚ್ಚಳ ಕಂಡುಬಂದಿದ್ದು, 0.23 ಎಂಟಿ ತಲುಪಿದೆ. ಖನಿಜ ತೈಲ 0.21 ಎಂಟಿ ಸಾಗಣೆಯಾಗಿದ್ದು, ಶೇ. 15.8ರಷ್ಟು ಪ್ರಗತಿ ಸಾಧಿಸಿದೆ. ಸಿಮೆಂಟ್ 0.03 ಎಂಟಿ ಸಾಗಣೆಯೊಂದಿಗೆ ಶೇ. 32ರಷ್ಟು ತೇಜಿ ಕಂಡಿದೆ. ಕಂಟೇನರ್ ಸಾಗಣೆ 0.09 ಎಂಟಿ ತಲುಪಿದ್ದು, ಶೇ. 15.8 ರಷ್ಟು ಏರಿಕೆಯಾಗಿದೆ.

ಜೂನ್ 2026ರಲ್ಲಿ ದಾಖಲಾದ ಒಟ್ಟು ಆದಾಯ ₹733.23 ಕೋಟಿ ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 1.55 ರಷ್ಟು (₹11.22 ಕೋಟಿ) ಹೆಚ್ಚಾಗಿದೆ. ಪ್ರಯಾಣಿಕರ ವಿಭಾಗದಿಂದ ಬಂದ ಆದಾಯ ₹290.43 ಕೋಟಿಗಳಾಗಿದ್ದು, ಶೇ. 15.08ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಪ್ರಯಾಣಿಕರ ಸಂಖ್ಯೆಯಲ್ಲೂ ಶೇ. 4.36ರಷ್ಟು ಪ್ರಗತಿಯಾಗಿದ್ದು, ಒಟ್ಟು 14.85 ಮಿಲಿಯನ್ ಜನ ಸಂಚರಿಸಿದ್ದಾರೆ.

ರೈಲ್ವೆಯ ಪ್ರಮುಖ ಆದಾಯದ ಮೂಲವಾದ ಸರಕು ಸಾಗಣೆಯಿಂದ ₹402.61 ಕೋಟಿ ಸಂದಾಯವಾಗಿದೆ. ಪಾರ್ಸೆಲ್ ಸೇವೆಗಳ ಮೂಲಕ ₹14.30 ಕೋಟಿ (ಶೇ. 5.30 ಏರಿಕೆ) ಗಳಿಕೆಯಾಗಿದೆ. ಉಳಿದಂತೆ ಇತರ ಕೋಚಿಂಗ್ ಆದಾಯದಿಂದ ₹26.66 ಕೋಟಿ ಹಾಗೂ ಇತರೆ (ಸಂಡ್ರಿ) ಮೂಲಗಳಿಂದ ₹13.53 ಕೋಟಿ ಆದಾಯ ಬಂದಿದೆ. ಇನ್ನು ಕಾರ್ಯಾಚರಣಾ ವಿಭಾಗದಲ್ಲಿ ಟಿಕೆಟ್ ಪರಿಶೀಲನೆ ತಪಾಸಣೆಯ ಮೂಲಕ 58 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ₹4.96 ಕೋಟಿ ದಂಡದ ರೂಪದಲ್ಲಿ ಆದಾಯ ಬಂದಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗಿನಾದ್ಯಂತ ಬಿರುಸು ಪಡೆದ ಮಳೆ
ಮಾದಕ ವಸ್ತು ವಿರೋಧಿ ದಿನ ಆಚರಣೆ