ಜಾತಿ ಸಮೀಕ್ಷೆ ವೇಳೆ ನೈಜ ವಿವರ ದಾಖಲಿಸಿ: ಚುಂಚಶ್ರೀ

KannadaprabhaNewsNetwork |  
Published : Sep 17, 2025, 01:05 AM IST
೧೬ಕೆಎಂಎನ್‌ಡಿ-೬ಮಂಡ್ಯದ ಬಿಜಿಎಸ್ ಸಮುದಾಯ ಭವನದಲ್ಲಿ ನಡೆದ ಜಾತಿ ಜನಗಣತಿ ಕುರಿತ ಒಕ್ಕಲಿಗರ ಜಾಗೃತಿ ಸಭೆಯಲ್ಲಿ ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

೧೯೩೧ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗವನ್ನು ರಚಿಸಿ ಜಾತಿ ಸಮೀಕ್ಷೆಯನ್ನು ನಡೆಸಿದ್ದರು. ಅದಾದ ೮೦ ವರ್ಷಗಳ ಬಳಿಕ ರಾಜ್ಯಸರ್ಕಾರ ಜಾತಿ ಸಮೀಕ್ಷೆ ಕೈಗೊಂಡಿದ್ದರೂ ಅದು ಯಾರಿಗೂ ಸರ್ವಸಮ್ಮತವಾಗಿ ಕಂಡುಬರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಾತಿ ಗಣತಿ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನದತ್ತವಾದ ವ್ಯವಸ್ಥೆಗೆ ನಿಖರವಾದ ವಿವರಗಳನ್ನು ನೀಡಿದರೆ ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆಗೆ ಸಹಕರಿಸಬೇಕು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಸ್ವರ್ಣಸಂದ್ರ ಬಳಿ ಇರುವ ಬಿ.ಜಿ.ಎಸ್.ಭವನದಲ್ಲಿ ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

೨೦೧೩-೧೪ರಲ್ಲಿ ನಡೆದ ಜಾತಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಶೇ.೩೦ ರಿಂದ ಶೇ.೪೦ರಷ್ಟು ಸಮೀಕ್ಷೆ ನಡೆದಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರುಸಮೀಕ್ಷೆಗೆ ಆದೇಶ ಮಾಡಿದೆ. ಹೀಗಾಗಿ ಇಂದು ಪ್ರತಿಯೊಂದು ಸಮುದಾಯಕ್ಕೂ ಮಠಗಳಿವೆ, ಮಠಾಧೀಶರಿದ್ದಾರೆ, ನಾಯಕರಿದ್ದಾರೆ, ಸಂಘಗಳಿವೆ. ಅವರೆಲ್ಲರೂ ತಮ್ಮ ತಮ್ಮ ಸಮುದಾಯದ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನೂ ಈ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡಿ ಸಂವಿಧಾನ ಉಳಿಸುವ ಕಾರ್ಯ ಮಾಡುವುದು ಅವಶ್ಯಕವಾಗಿದೆ ಎಂದರು.

೧೯೩೧ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗವನ್ನು ರಚಿಸಿ ಜಾತಿ ಸಮೀಕ್ಷೆಯನ್ನು ನಡೆಸಿದ್ದರು. ಅದಾದ ೮೦ ವರ್ಷಗಳ ಬಳಿಕ ರಾಜ್ಯಸರ್ಕಾರ ಜಾತಿ ಸಮೀಕ್ಷೆ ಕೈಗೊಂಡಿದ್ದರೂ ಅದು ಯಾರಿಗೂ ಸರ್ವಸಮ್ಮತವಾಗಿ ಕಂಡುಬರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಾತಿ ಗಣತಿ ಮಾಡಲಾಗುತ್ತಿದೆ. ಈಗಲಾದರೂ ಪ್ರತಿ ಸಮುದಾಯದವರು ಸರಿಯಾದ ವಿವರಗಳನ್ನು ಕೊಟ್ಟರೆ ಮೀಸಲಾತಿ ಪ್ರಮಾಣ, ಜಾತಿವಾರು ಪ್ರಾಧಾನ್ಯತೆ ದೊರಕಲಿದೆ ಎಂದರು.

ವಿಶ್ವ ಒಕ್ಕಲಿಗರ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಜಾತಿ ಗಣತಿ ವೇಳೆ ಸಂಖ್ಯಾ ಬಲ ಕಡಿಮೆಯಾದರೆ ಮೀಸಲಾತಿ ನೀತಿ ನಿರೂಪಣೆ ಮಾಡಲು, ಜಾತಿವಾರು ಪ್ರಾತಿನಿಧ್ಯ ನೀಡಲು, ರಾಜಕೀಯ ಪ್ರಾತಿನಿಧ್ಯ ನೀಡುವುದಕ್ಕೂ ಜಾತಿಯ ಸಂಖ್ಯಾಬಲವನ್ನು ಪರಿಗಣಿಸಲಾಗುತ್ತದೆ. ಆರ್ಥಿಕ, ಔದ್ಯೋಗಿಕವಾಗಿ ಮೀಸಲಾತಿ ನೀಡುವುದರಿಂದ ಜಾತಿ ಗಣತಿ ಸ್ಪಷ್ಟವಾಗಿ ಆಗಬೇಕು. ಸಂಖ್ಯಾಬಲ ಸ್ಪಷ್ಟವಾಗಿ ನಮೂದಾಗಬೇಕು ಎಂದು ನುಡಿದರು.

ಜಾತಿ ಸಂಖ್ಯೆ ಕಡಿಮೆಯಾದರೆ ನಮ್ಮನ್ನು ಕೊನೆಗೆ ದೂಡುವರು, ಸೌಲಭ್ಯಗಳ ಪ್ರಮಾಣ ಕಡಿಮೆಯಾಗಲಿದೆ. ಆ ನಿಟ್ಟಿನಲ್ಲಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಸೆ.೨೨ ರಿಂದ ಅ.೭ರವರೆಗೆ ನಡೆಯುವ ಸಮುದಾಯದ ನಾಯಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಮೀಕ್ಷೆಯ ವೇಳೆ ಪ್ರತಿಯೊಂದು ಗ್ರಾಮ, ಮನೆ ಮನೆಗೆ ತೆರಳಿ ಸಮುದಾಯದ ಜನರು ಭಾಗವಹಿಸುವಂತೆ ಮಾಡಬೇಕು ಎಂದು ಸೂಚಿಸಿದರು.

ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲೀಗೆರೆ ಬಾಲು, ಅಶೋಕ್ ಜಯರಾಂ, ಮೂಡ್ಯ ಚಂದ್ರು, ರಾಘವೇಂದ್ರ, ನೇಗಿಲಯೋಗಿ ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ತಿಮ್ಮೇಗೌಡ ಸೇರಿದಂತೆ ಇತರರಿದ್ದರು.ಒಕ್ಕಲಿಗರಲ್ಲಿ ಜಾಗೃತಿ ಮೂಡಿಲ್ಲ: ಪಿ.ರವಿಕುಮಾರ್

ಶಾಸಕ ಪಿ.ರವಿಕುಮಾರ್ ಮಾತನಾಡಿ, ರಾಜ್ಯಸರ್ಕಾರ ಮೊದಲ ಬಾರಿ ನಡೆದ ಜಾತಿ ಸಮೀಕ್ಷೆಯಲ್ಲಿ ಕೆಲವು ಗೊಂದಲವಿತ್ತು. ಕೆಲವರು ಸ್ವಾಗತಿಸಿದರು, ಮತ್ತೆ ಕೆಲವರು ವಿರೋಧ ಮಾಡಿದರು. ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಯಾಗಿ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಅದಕ್ಕೆ ತಿಲಾಂಜಲಿ ಹಾಡುವುದಕ್ಕೆ ಇದೀಗ ಎರಡನೇ ಬಾರಿಗೆ ಸಮೀಕ್ಷೆ ಕೈಗೊಂಡಿದೆ. ಸಮೀಕ್ಷೆ ವೇಳೆ ಸಮುದಾಯದ ಜನರ ಜವಾಬ್ದಾರಿ ಹೆಚ್ಚಿದೆ. ಕೇವಲ ಚೀಟಿ ಅಂಟಿಸಿ ಹೋಗದೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಒಕ್ಕಲಿಗರಲ್ಲಿ ಇನ್ನೂ ಜಾಗೃತಿ ಆಗಿಲ್ಲ. ಸಮೀಕ್ಷೆ ಸಮಯದಲ್ಲೇ ಜಾಗೃತಿ ವಹಿಸಿ ಸರಿಯಾದಂತಹ ವಿವರಗಳನ್ನು ನೀಡಬೇಕು. ಸಮೀಕ್ಷೆ ಎಲ್ಲಾ ಮುಗಿದ ಮೇಲೆ ನಾವಿನ್ನೂ ಹೆಚ್ಚಾಗಿದ್ದೆವು. ಕಡಿಮೆ ತೋರಿಸಿದ್ದಾರೆ ಎಂದರೆ ಅದು ಬೇಜವಾಬ್ದಾರಿತನವಾಗುತ್ತದೆ. ಈಗಲೇ ಎಚ್ಚೆತ್ತುಕೊಂಡು ನಿಮ್ಮ ವಿವರಗಳನ್ನು ವೈಜ್ಞಾನಿಕವಾಗಿ ದಾಖಲಿಸಬೇಕು. ಸಂಘದವರು, ಸಮುದಾಯದ ನಾಯಕರು ಜನರನ್ನು ಜಾಗೃತಿ ಮೂಡಿಸಬೇಕಿದೆ. ಜಾತಿ ಸಮೀಕ್ಷೆಯ ಅಗತ್ಯತೆ, ಅದರ ಮಹತ್ವ, ಉಪಯೋಗ ಎಲ್ಲವನ್ನು ಜನರಿಗೆ ಕರಪತ್ರಗಳ ಮೂಲಕ ಮುದ್ರಿಸಿ ಅರಿವು ಮೂಡಿಸಬೇಕಿದೆ. ಹಳ್ಳಿಗಳಲ್ಲಿ ಬಾಯಿಮಾತಿನ ಪ್ರಚಾರಕ್ಕಿಂತ ಮತ್ತೊಂದು ಪ್ರಚಾರ ಬೇಕಿಲ್ಲ. ಎಲ್ಲರೂ ಬಾಯಿ ಮಾತಿನ ಮೂಲಕ ಪ್ರಚಾರ ಮಾಡಿ ಒಕ್ಕಲಿಗರ ನಿಖರ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ