ರೆಡ್ಡಿ ಸಮಾಜವು ಶಾಂತಿ ಸಹಬಾಳ್ವೆಯ ಸಂಕೇತವಾಗಿದೆ. ಇವರು ಸರ್ವ ಜನಾಂಗದವರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಒಳಗೊಳ್ಳುವ ಪರಿಪಾಠ ಹೊಂದಿದ್ದಾರೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದರು.
ವೇಮನ ಜಯಂತಿ । ಜಿಲ್ಲಾಡಳಿತ, ಸಂಸ್ಕೃತಿ ಇಲಾಖೆ ಆಯೋಜನೆ । ಬೇರೆ ವರ್ಗಕ್ಕೆ ರೆಡ್ಡಿ ಸಮುದಾಯ ಸೇರ್ಪಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಬೀದರ್
ರೆಡ್ಡಿ ಸಮಾಜವು ಶಾಂತಿ ಸಹಬಾಳ್ವೆಯ ಸಂಕೇತವಾಗಿದೆ. ಇವರು ಸರ್ವ ಜನಾಂಗದವರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಒಳಗೊಳ್ಳುವ ಪರಿಪಾಠ ಹೊಂದಿದ್ದಾರೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದರು.
ಭಾನುವಾರ ನಗರದ ಹೇಮ ವೇಮ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಆಯೋಜಿಸಿದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿಗೆ ಕೆಲವರು ರೆಡ್ಡಿ ಸಮಾಜವನ್ನು 3ಎ ಯಿಂದ ಬೇರೆ ವರ್ಗಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಈ ಮನವಿಯನ್ನು ಪುರಸ್ಕರಿಸದೆ ಯಥಾವತ್ತಾಗಿ ಮುಂದುವರಿಸಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮನವರಿಕೆ ಮಾಡಲಾಗುವುದು ಎಂದ ಅವರು, ನಾನು ಕಳೆದ ಬಾರಿ ಘೋಷಿಸಿದ 10 ಲಕ್ಷ ರುಪಾಯಿ ಅನುದಾನವನ್ನು 15 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಸಹ ಶಿಕ್ಷಕ ಹಾಗೂ ಹುಮನಾಬಾದ ಮಾಜಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿರಂತರೆಡ್ಡಿ ಜಂಪಾ, ಅತಿಥಿ ಉಪನ್ಯಾಸ ನೀಡಿ, ವೇಮನರು ತಮ್ಮ ಪದ್ಯ ಹಾಗೂ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಆಂಧ್ರಪ್ರದೇಶದ ಕೆಲವು ಸಾಹಿತಿಗಳು ಉದ್ದೇಶಪೂರ್ವವಾಗಿ ಇವರ ಇತಿಹಾಸ ಮುಚ್ಚಿಟ್ಟಿದ್ದರು. ನಂತರ ದಿನಗಳಲ್ಲಿ ಸಿ.ಪಿ ಬ್ರೋನ್ ವೇಮನರ ಸಾಹಿತ್ಯವನ್ನು ಇಂಗ್ಲಿಷ್ಗೆ ಅನುವಾದ ಮಾಡಿದ್ದರಿಂದ ನಮಗೆ ಅವರ ಇತಿಹಾಸ ತಿಳಿಯಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ವೇಮನರ ಕುರಿತು ಇನ್ನು ಹೆಚ್ಚಿನ ಸಂಶೋಧನೆ ಆಗಬೇಕು ಎಂದು ಹೇಳಿದರು.
ಎನ್. ಬಿ. ರೆಡ್ಡಿ ಗುರುಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸಂಜುರೆಡ್ಡಿ ಜಂಪ್ಪಾ ಅವರು ದೇವಸ್ಥಾನದ ಭೂಮಿ ಖರೀದಿಗಾಗಿ 10 ಲಕ್ಷ ರುಪಾಯಿ ದೇಣಿಗೆ ನೀಡಿದರು. ಇತ್ತೀಚಿಗೆ ನಡೆದ ಪಿಕೆಪಿಎಸ್ ಹಾಗೂ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿಜೇತರಾದವರಿಗೆ ಹಾಗೂ ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹಾಗೂ ಪದೋನ್ನತಿ ಹೊಂದಿದ್ದವರಿಗೆ ಸನ್ಮಾನಿಸಲಾಯಿತು.
ನಗರ ಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಜಿ.ಪಂ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ರೆಡ್ಡಿ ಸಮಾಜದ ಅಧ್ಯಕ್ಷ ಶಂಕರರೆಡ್ಡಿ ಚಿಟ್ಟಾ, ಕಾರ್ಯದರ್ಶಿ ಗೋಪಾಲರೆಡ್ಡಿ, ಉಪಾಧ್ಯಕ್ಷ ರಾಜರೆಡ್ಡಿ ಸಮಾಜದ ಮುಖಂಡರಾದ ಸಂಜುರೆಡ್ಡಿ ಜಂಪ್ಪಾ, ರಾಜು ಚಿಂತಾಮಣಿ, ಸಂಗ್ರಾಮರೆಡ್ಡಿ, ಸಂಚಾಲಕ ಡಾ. ಶ್ರೀನಿವಾಸ್ ರೆಡ್ಡಿ, ಓಂರೆಡ್ಡಿ, ಸಮಾಜದ ಬಂದುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.