ರೆಡ್ಡಿ ರಾಮುಲು ಸಂಘರ್ಷ: ನಾಯಕರ ಪರ-ವಿರೋಧ ಆರೋಪ-ಪ್ರತ್ಯಾರೋಪ

KannadaprabhaNewsNetwork |  
Published : Jan 26, 2025, 01:32 AM IST
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಬಿ.ಶ್ರೀರಾಮುಲು ಬೆಂಬಲಿತ ವಾಲ್ಮೀಕಿ ಸಮಾಜದ ಮುಖಂಡರು ಜನಾರ್ದನ ರೆಡ್ಡಿ ವಿರುದ್ಧ ಹರಿಹಾಯ್ದರು.  | Kannada Prabha

ಸಾರಾಂಶ

ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಜನಾರ್ದನ ರೆಡ್ಡಿ ನಡುವಿನ ಸಂಘರ್ಷ ಬೆನ್ನಲ್ಲೇ ಈ ಇಬ್ಬರು ನಾಯಕರ ಪರವಾದ ವಾಲ್ಮೀಕಿ ಸಮುದಾಯದ ಮುಖಂಡರು ಬೆಂಬಲಕ್ಕೆ ನಿಂತಿದ್ದಾರೆ.

ಬಳ್ಳಾರಿ: ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಜನಾರ್ದನ ರೆಡ್ಡಿ ನಡುವಿನ ಸಂಘರ್ಷ ಬೆನ್ನಲ್ಲೇ ಈ ಇಬ್ಬರು ನಾಯಕರ ಪರವಾದ ವಾಲ್ಮೀಕಿ ಸಮುದಾಯದ ಮುಖಂಡರು ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ಶನಿವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ರೆಡ್ಡಿ-ರಾಮುಲು ಬೆಂಬಲಿತ ವಾಲ್ಮೀಕಿ ಸಮಾಜದ ಗಣ್ಯರು ತಮ್ಮ ನಾಯಕನನ್ನು ಸಮರ್ಥಿಸಿಕೊಂಡಿದ್ದಾರೆ.

ಶ್ರೀರಾಮುಲು- ಜನಾರ್ದನ ರೆಡ್ಡಿ ನಡುವೆ ಆಸ್ತಿಗಾಗಿಯೇ ಸಂಘರ್ಷ ನಡೆದಿದೆ. ಹಿಂದೆ ಅಣ್ಣ ತಮ್ಮಂದಿರಂತೆ ಇದ್ದಾಗ ಮಾಡಿದ್ದ ಆಸ್ತಿಯನ್ನು ಜನಾರ್ದನ ರೆಡ್ಡಿಗೆ ಶ್ರೀರಾಮುಲು ವಾಪಸ್‌ ಕೊಡಬೇಕು ಎಂದು ರೆಡ್ಡಿ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು ಆಗ್ರಹಿಸಿದರು.

ಶ್ರೀರಾಮುಲು ಬೆಂಬಲಿಸಿ ಮಾಧ್ಯಮಗೋಷ್ಠಿ ನಡೆಸಿದ ಸುಮಾರು 50ಕ್ಕೂ ಹೆಚ್ಚು ಮುಖಂಡರು, ರಾಜಕೀಯವಾಗಿ ಶ್ರೀರಾಮುಲು ಅವರನ್ನು ತುಳಿಯಲು ಜನಾರ್ದನ ರೆಡ್ಡಿ ಸಂಚು ಮಾಡಿದ್ದಾರೆ ಎಂದು ದೂರಿದರು.

ಶ್ರೀರಾಮುಲು ಅವರನ್ನು ನಾನೇ ಬೆಳೆಸಿದ್ದೇನೆ ಎಂಬಂತೆ ಜನಾರ್ದನ ರೆಡ್ಡಿ ಮಾತನಾಡುತ್ತಿದ್ದಾರೆ. ಶ್ರೀರಾಮುಲು ಸ್ವಂತ ಶಕ್ತಿಯಿಂದ ಬೆಳೆದಿದ್ದಾರೆ. ರೆಡ್ಡಿಯ ಹಂಗಿನಲ್ಲಿ ಬೆಳೆದಿಲ್ಲ. ಶ್ರೀರಾಮುಲುಗೆ ವಾಲ್ಮೀಕಿ ಸಮುದಾಯದ ಬೆಂಬಲವಿದೆ. ರೆಡ್ಡಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಶ್ರೀರಾಮುಲು ಕೊಲೆಗಡುಕ ಎಂಬಂತೆ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ. ಕೊಲೆಗಡುಕನ ಜೊತೆ ಇಷ್ಟು ದಿನ ಏಕೆ ಸ್ನೇಹ ಮಾಡಿದಿರಿ? ನಿಮಗೆ ಆಗ ಈ ವಿಷಯ ಗೊತ್ತಿರಲಿಲ್ಲವೇ? ಜನಾರ್ದನ ರೆಡ್ಡಿ "ಎನ್ನೋಬಲ್ " ಎಂಬ ಸಂಸ್ಥೆ ನಡೆಸುತ್ತಿರುವಾಗಲೇ ಶ್ರೀರಾಮುಲು ರಾಜಕೀಯಕ್ಕೆ ಬಂದಿದ್ದರು. ಇದನ್ನು ರೆಡ್ಡಿ ಮರೆಯಬಾರದು. ತಾನೇ ಶ್ರೀರಾಮುಲು ಅವರನ್ನು ಉದ್ಧಾರ ಮಾಡಿದಂತೆ ಮಾತಾಡಬಾರದು ಎಂದರು.

ಸಂಡೂರು ಉಪ ಚುನಾವಣೆಯಲ್ಲಿ ಜವಾಬ್ದಾರಿ ಹೊತ್ತು ಅಲ್ಲಿಯೇ ವಾಸ್ತವ್ಯ ಮಾಡಿದ ಜನಾರ್ದನ ರೆಡ್ಡಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಏಕೆ ಗೆಲ್ಲಿಸಲಿಲ್ಲ? ರೆಡ್ಡಿಗೆ ನಿಜಕ್ಕೂ ಸಾಮರ್ಥ್ಯವಿದ್ದರೆ ಸಂಡೂರಿನಲ್ಲಿ ಬಿಜೆಪಿ ಸೋತಿದ್ದೇಕೆ ? ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ ಸ್ವಂತ ಅಣ್ಣ ಸೋಮಶೇಖರ ರೆಡ್ಡಿಯನ್ನೇ ಸೋಲಿಸಲು ಜನಾರ್ದನ ರೆಡ್ಡಿ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದರು. ಬಂಗಾರು ಹನುಮಂತು, ಕೆ.ಎಸ್. ದಿವಾಕರ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರ ರಾಜಕೀಯ ಭವಿಷ್ಯವನ್ನು ಅಂತ್ಯ ಮಾಡಲು ರೆಡ್ಡಿ ಹುನ್ನಾರ ನಡೆಸಿದ್ದಾರೆ. ವಾಲ್ಮೀಕಿ ಸಮಾಜದ ಮುಖಂಡ ಶಾಸಕ ಬಿ.ನಾಗೇಂದ್ರ ಬೆಳವಣಿಗೆಯನ್ನು ಸಹ ರೆಡ್ಡಿ ಸಹಿಸಲಿಲ್ಲ. ನಾಗೇಂದ್ರ ಅವರನ್ನು ಟಿಶ್ಯೂ ಪೇಪರ್ ಎಂದು ಅಪಮಾನ ಮಾಡಿದ್ದಾರೆ ಎಂದು ವಾಲ್ಮೀಕಿ ಮುಖಂಡರು ಆರೋಪಿಸಿದರು.

ಶ್ರೀರಾಮುಲು ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನುಮಾಡಿರುವ ಜನಾರ್ದನ ರೆಡ್ಡಿ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ವಾಲ್ಮೀಕಿ ಸಮಾಜದ ಗಣ್ಯರಾದ ಎನ್.ಸತ್ಯನಾರಾಯಣ, ಜೋಳದರಾಶಿ ತಿಮ್ಮಪ್ಪ, ಶಿವಾನಂದ, ಗಡ್ಡ ತಿಮ್ಮಪ್ಪ, ಗವಿಸಿದ್ದಪ್ಪ, ಹನುಮಂತಪ್ಪ, ಜನಾರ್ದನ ನಾಯಕ, ಮೆಡಿಕಲ್ ಮಲ್ಲಿಕಾರ್ಜುನ, ಉಮೇಶ್, ರಾಮು ದಮ್ಮೂರು, ಬದಾಮಿ ಶಿವಲಿಂಗನಾಯಕ, ರೂಪನಗುಡಿ ಗೋವಿಂದಪ್ಪ ಉಪಸ್ಥಿತರಿದ್ದರು.

ಶಾಸಕ ಜನಾರ್ದನ ರೆಡ್ಡಿ ಆಸ್ತಿ ರಾಮುಲು ವಾಪಸ್‌ ಕೊಡಲಿ:

ಇನ್ನು ಜನಾರ್ದನ ರೆಡ್ಡಿ ಪರ ಸುದ್ದಿಗೋಷ್ಠಿ ನಡೆಸಿದ ವಾಲ್ಮೀಕಿ ಸಮಾಜದ ಮುಖಂಡ ದರಪ್ಪ ನಾಯಕ ಮತ್ತಿತರರು, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಂದ ವಾಲ್ಮೀಕಿ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಶ್ರೀರಾಮುಲು, ಜನಾರ್ದನ ರೆಡ್ಡಿ ನಡುವೆ ಆಸ್ತಿ ವಿಚಾರದಲ್ಲಿ ಮನಸ್ತಾಪವಾಗಿದೆ. ರೆಡ್ಡಿ, ರಾಮುಲು, ಸುರೇಶ್‌ ಬಾಬು, ಅಣ್ಣ-ತಮ್ಮಂದಿರಂತೆ ಇದ್ದರು. 14 ವರ್ಷದ ನಂತರ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿದ್ದಾರೆ. ಅಣ್ಣ ತಮ್ಮಂದಿರಂತೆ ಇದ್ದಾಗ ಮಾಡಿದ ಆಸ್ತಿಯನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಜನಾರ್ದನ ರೆಡ್ಡಿ ಅವರಿಗೆ ವಾಪಸ್‌ ಕೊಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಅವರ ರಾಜಕೀಯ ಬೆಳವಣಿಗೆಗೆ ಶಾಸಕ ಜನಾರ್ದನ ರೆಡ್ಡಿಯೇ ಕಾರಣ. ರೆಡ್ಡಿ ಜಾತ್ಯಾತೀತ ನಾಯಕ. ಎಸ್ಸಿ-ಎಸ್ಟಿ ಸಮುದಾಯಗಳನ್ನು ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ತಿಳಿಸಿದರು.ಮಾಜಿ ಶಾಸಕ ಸುರೇಶ್‌ ಬಾಬು, ಶಾಸಕರಾದ ಬಿ.ನಾಗೇಂದ್ರ, ನೇಮರಾಜ್‌ ನಾಯ್ಕ, ಚಂದ್ರನಾಯ್ಕ ಅವರನ್ನು ಶಾಸಕರಾಗಿ ಮಾಡಿದ್ದರು. ಜನಾರ್ದನ ರೆಡ್ಡಿ ಅವರಿಂದ ವಾಲ್ಮೀಕಿ ನಾಯಕರು ಸಾಕಷ್ಟು ಬೆಳೆದಿದ್ದಾರೆ. ಒಂದೇ ಸಮುದಾಯದಿಂದ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದರು.

ರಾಮುಲು - ರೆಡ್ಡಿ ನಡುವೆ ಉಂಟಾದ ಭಿನ್ನಾಭಿಪ್ರಾಯವನ್ನು ಪಕ್ಷದ ನಾಯಕರು ಸರಿ ಪಡಿಸುತ್ತಿದ್ದಾರೆ. ಈ ವಿಚಾರವನ್ನು ಜಾತಿ ಹೆಸರಲ್ಲಿ ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಮುಖಂಡರಾದ ವಿಜಯ್‌ ಕುಮಾರ್‌, ಅಂಬಣ್ಣ, ನರಸಿಂಹ, ಶೇಕ್‌ಶಾವಲಿ, ಚಂದ್ರ, ಹನುಮೇಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ