ತಗ್ಗಿದ ಮಳೆ, ಪ್ರವಾಹ: ಬಹುತೇಕ ಸಹಜ ಸ್ಥಿತಿಗೆ ದ.ಕ.

KannadaprabhaNewsNetwork | Published : Aug 1, 2024 12:28 AM

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಪ್ರವಾಹ ಪೀಡಿತ ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಧಾರಾಕಾರ ಸುರಿದ ಮಳೆ ಹಾಗೂ ಭೋರ್ಗರೆದು ಪ್ರವಾಹರೂಪಿಯಾದ ನದಿಗಳಿಂದ ಮಂಗಳವಾರ ತತ್ತರಿಸಿದ್ದ ದಕ್ಷಿಣ ಕನ್ನಡದ ಜನಜೀವನ ಬುಧವಾರ ಬಹುತೇಕ ಸಹಜಸ್ಥಿತಿಗೆ ಮರಳಿದೆ. ಜಿಲ್ಲೆಯಲ್ಲಿ ಮಳೆಯೂ ಕಡಿಮೆಯಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ತೀವ್ರ ಮಳೆಯಾಗಿದ್ದರಿಂದ ಮಂಗಳವಾರ ಬೆಳಗ್ಗಿನಿಂದಲೇ ನದಿಗಳೆಲ್ಲವೂ ಪ್ರವಾಹರೂಪಿಯಾಗಿ ಜಿಲ್ಲಾದ್ಯಂತ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. ಬಂಟ್ವಾಳ ತಾಲೂಕಿನಲ್ಲಂತೂ ಹಲವು ಮನೆಗಳು, ಅಂಗಡಿ ಮುಂಗಟ್ಟುಗಳು ಪ್ರವಾಹದಿಂದ ಜಲಾವೃತಗೊಂಡಿದ್ದವು. ಜಿಲ್ಲಾದ್ಯಂತ ಅಲ್ಲಲ್ಲಿ ರಸ್ತೆಗಳ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಂಡಿತ್ತು. ವಿವಿಧೆಡೆ ಗುಡ್ಡ ಕುಸಿತ, ಉರುಳಿದ ಮರಗಳಿಂದ ಸಂಚಾರ ವ್ಯತ್ಯಯ, ಮನೆಗಳಿಗೆ ಹಾನಿ ಉಂಟಾಗಿ ಇಡೀ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿತ್ತು. ಗ್ರಾಮಾಂತರದ ಎಕರೆಗಟ್ಟಲೆ ಕೃಷಿಭೂಮಿ, ತೋಟ ಜಲಾವೃತವಾಗಿ ಅಪಾರ ಹಾನಿ ಸಂಭವಿಸಿತ್ತು.

ಇಳಿದ ಪ್ರವಾಹ: ಬಂಟ್ವಾಳದಲ್ಲಿ 8.5 ಮೀ. ಅಪಾಯದ ಮಟ್ಟವನ್ನು ಮೀರಿ ನೇತ್ರಾವತಿ ನದಿ ಮಂಗಳವಾರ ರಾತ್ರಿ ವೇಳೆಗೆ ಅತ್ಯಂತ ಅಪಾಯದ ಮಟ್ಟವಾದ 10.5 ಮೀ. ತಲುಪಿತ್ತು. ಆದರೆ ಬುಧವಾರ ಬೆಳಗ್ಗಿನಿಂದ ಇಳಿಮುಖವಾಗತೊಡಗಿದ್ದ ನದಿ ನೀರಿನ ಮಟ್ಟ ಸಂಜೆ ವೇಳೆ 5.30 ಮೀ.ಗೆ ಇಳಿದಿದೆ.

ಬುಧವಾರ ಜಿಲ್ಲೆಯಲ್ಲಿ ನಾಲ್ಕು ಮನೆಗಳು ಸಂಪೂರ್ಣ ಅಥವಾ ತೀವ್ರ ಹಾನಿಗೆ ಒಳಗಾಗಿದ್ದರೆ, 7 ಮನೆಗಳು ಭಾಗಶಃ ಹಾನಿಗೀಡಾಗಿವೆ. 161 ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಕಡಬ ತಾಲೂಕಿನಲ್ಲಿ ಒಂದು ಕಾಳಜಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ 19 ಮಂದಿ ಆಶ್ರಯ ಪಡೆದಿದ್ದಾರೆ.

ಸರಾಸರಿ 129.1 ಮಿಮೀ ಮಳೆ: ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯಲ್ಲಿ ಸರಾಸರಿ 129.1 ಮಿಮೀ. ಮಳೆ ದಾಖಲಾಗಿದೆ. ಬಂಟ್ವಾಳದಲ್ಲಿ ಅತಿ ಹೆಚ್ಚು 164.4 ಮಿಮೀ, ಮಂಗಳೂರಿನಲ್ಲಿ 116.7 ಮಿಮೀ, ಪುತ್ತೂರು 149.2 ಮಿಮೀ, ಸುಳ್ಯ 112.9 ಮಿಮೀ, ಮೂಡುಬಿದಿರೆ 130 ಮಿಮೀ, ಕಡಬ 118.2 ಮಿಮೀ, ಉಳ್ಳಾಲ 118.1 ಮಿಮೀ ಮಳೆ ಸುರಿದಿದೆ.

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಪ್ರವಾಹ ಪೀಡಿತ ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಸಂಭಾವ್ಯ ಪ್ರವಾಹ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಪ್ರದೇಶಗಳ ನಿವಾಸಿಗಳ ಸ್ಥಳಾಂತರ ಮತ್ತು ಕಾಳಜಿ ಕೇಂದ್ರಗಳ ಸ್ಥಾಪನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಳಜಿ ಕೇಂದ್ರಗಳಲ್ಲಿ ತಂಗಿರುವ ನಾಗರಿಕರೊಂದಿಗೆ ಸಮಾಲೋಚಿಸಿ, ಧೈರ್ಯ ತುಂಬಿದ ಜಿಲ್ಲಾಧಿಕಾರಿ, ಸಹಜ ಪರಿಸ್ಥಿತಿ ಬರುವವರೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಹರೇಕಳ, ಬಂಟ್ವಾಳ, ಆಲಡ್ಕ, ಉಪ್ಪಿನಂಗಡಿ ಮತ್ತಿತರ ಕಡೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.

ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತಿತರರು ಇದ್ದರು.

Share this article