ಪತ್ರಕರ್ತರಿಗೆ ನಿವೇಶನಕ್ಕೆ ಕಾನೂನು ಸಡಿಲಿಸಿ

KannadaprabhaNewsNetwork |  
Published : Aug 03, 2025, 01:30 AM IST
ಹಾಸನ ಸಮೀಪ ಪವನಪುತ್ರ ರೆಸಾರ್ಟ್ನಲ್ಲಿ ಶನಿವಾರ ನಡೆದ ಮಾಧ್ಯಮ ದಿನಾಚರಣೆ - 2025 ಕಾರ್ಯಕ್ರಮವನ್ನು ಶಾಸಕ ಶಿವಲಿಂಗೇಗೌಡ ಉದ್ಷಾಟಿಸಿದರು. | Kannada Prabha

ಸಾರಾಂಶ

ಹಾಸನ ನಗರದ ಸಮೀಪ ಪವನಪುತ್ರ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಮಾಧ್ಯಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮ ತಾತ್ಕಾಲಿಕವಾಗಿದ್ದು, ಮುದ್ರಣ ಮಾಧ್ಯಮವೇ ಭವಿಷ್ಯದಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಗೃಹ ಮಂಡಳಿಯಲ್ಲಿ ಸುಮಾರು ೬,೫೦೦ ನಿವೇಶನಗಳು ಲಭ್ಯವಿದ್ದು, ಅವುಗಳನ್ನು ಹಂಚಿಕೆ ಮಾಡುವ ಅಧಿಕಾರ ಸಚಿವ ಸಂಪುಟಕ್ಕೆ ಮಾತ್ರ ಇದೆ. ಈ ಕಾನೂನನ್ನು ಸಡಿಲಿಸಿ ಪತ್ರಕರ್ತರಿಗೆ ನಿವೇಶನ ನೀಡುವಂತೆ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರ ಮೇಲೆ ವಿಶೇಷ ಕಾಳಜಿ ಇದೆ ಎಂದೂ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಪತ್ರಕರ್ತರಿಗೆ ನಿವೇಶನ ನೀಡಲು ಕಾನೂನುಗಳನ್ನು ಸಡಿಲಗೊಳಿಸಬೇಕು ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹ ಪಡಿಸಿದರು. ನಗರದ ಸಮೀಪ ಪವನಪುತ್ರ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಮಾಧ್ಯಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮ ತಾತ್ಕಾಲಿಕವಾಗಿದ್ದು, ಮುದ್ರಣ ಮಾಧ್ಯಮವೇ ಭವಿಷ್ಯದಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಗೃಹ ಮಂಡಳಿಯಲ್ಲಿ ಸುಮಾರು ೬,೫೦೦ ನಿವೇಶನಗಳು ಲಭ್ಯವಿದ್ದು, ಅವುಗಳನ್ನು ಹಂಚಿಕೆ ಮಾಡುವ ಅಧಿಕಾರ ಸಚಿವ ಸಂಪುಟಕ್ಕೆ ಮಾತ್ರ ಇದೆ. ಈ ಕಾನೂನನ್ನು ಸಡಿಲಿಸಿ ಪತ್ರಕರ್ತರಿಗೆ ನಿವೇಶನ ನೀಡುವಂತೆ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರ ಮೇಲೆ ವಿಶೇಷ ಕಾಳಜಿ ಇದೆ ಎಂದೂ ಅವರು ತಿಳಿಸಿದರು.

ಮಾಧ್ಯಮಗಳು ಪ್ರಗತಿಗೆ ಮುಖ್ಯ:

ಡಿಜಿಟಲ್ ಮಾಧ್ಯಮವು ಜನರನ್ನು ಖುಷಿಪಡಿಸುವ ಜೊತೆಗೆ ಸಮಸ್ಯೆಗಳನ್ನೂ ಸೃಷ್ಟಿಸುತ್ತಿದೆ. ಅತಿಯಾದ ಹೊಗಳಿಕೆ ಅಥವಾ ಟೀಕೆ ಸರಿಯಲ್ಲ, ಇದರಿಂದ ಸಮಸ್ಯೆಗಳೇ ಹೆಚ್ಚಾಗುತ್ತವೆ. ತಾವು ಈಗಲೂ ಸಂಪಾದಕೀಯವನ್ನು ಓದುತ್ತಿದ್ದು, ಮುದ್ರಣ ಮಾಧ್ಯಮವನ್ನು ಮಾತ್ರ ನಂಬುವುದಾಗಿ ಹೇಳಿದರು. "ನಕಲಿ ಸುದ್ದಿಗಳನ್ನು ನಿಲ್ಲಿಸದೇ ಇದ್ದರೆ ಅನೇಕ ಜನರಿಗೆ ಹಾರ್ಟ್ ಅಟ್ಯಾಕ್ " ಆಗಿ ಸಾಯುತ್ತಾರೆ. ಅದಕ್ಕೇ ನಾನು ಕೀಪ್ಯಾಡ್ ಮೊಬೈಲ್ ಇಟ್ಟುಕೊಂಡಿದ್ದೇನೆ ಎಂದು ತಮ್ಮ ಗ್ರಾಮೀಣ ಶೈಲಿಯಲ್ಲಿ ಹಾಸ್ಯಭರಿತವಾಗಿ ಹೇಳಿದಾಗ ಕಾರ್ಯಕ್ರಮದಲ್ಲಿ ನಗುವಿನ ಅಲೆ ಎದ್ದಿತು. ಮಾಧ್ಯಮವು ವ್ಯಾಪಾರೀಕರಣಗೊಳ್ಳಬಾರದು, ಸನಾತನ ಕಾಲದಿಂದ ಉಳಿದಿರುವ ಬದ್ಧತೆಯೇ ಮುಂದುವರಿಯಲಿ. ಮಾಧ್ಯಮಗಳು ಜಗತ್ತಿನ ಪ್ರಗತಿಗೆ ಮುಖ್ಯವಾಗಿದ್ದು, ಕೇಂದ್ರ ಸರ್ಕಾರವು ಜಿಎಸ್ಟಿ ಕುರಿತು ತೋರುತ್ತಿರುವ ಮಲತಾಯಿ ಧೋರಣೆಯ ಬಗ್ಗೆ ಬೆಳಕು ಚೆಲ್ಲುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಬದಲಾಗಿ ಅಭಿಪ್ರಾಯಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗಿದೆ. ಮೊಬೈಲ್ ಹೊಂದಿರುವವರೆಲ್ಲರೂ ಪತ್ರಕರ್ತರಾಗಿದ್ದು, ಸುದ್ದಿ ನಿಜವೋ ಸುಳ್ಳೊ ಅಥವಾ ಅದರ ಹಿಂದಿನ ಉದ್ದೇಶ ಏನಿದೆ ಎಂಬುದನ್ನು ಪರಿಶೀಲಿಸುವ ಸಂಯಮ ತೋರುತ್ತಿಲ್ಲ. ಇದು ಉತ್ತಮ ಪತ್ರಿಕೋದ್ಯಮಕ್ಕೆ ದೊಡ್ಡ ಬೆದರಿಕೆಯಾಗಿದ್ದು, ಆತಂಕಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು. ಮಾಧ್ಯಮವು ಸಮಾಜವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟವೇ ಇದಕ್ಕೆ ಉತ್ತಮ ಉದಾಹರಣೆ. ಸಮಾಜದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ನಂಬಿಕೆ ಇದೆ, ಆದರೆ ಅವರ ಸುರಕ್ಷತೆಯನ್ನು ಒದಗಿಸುವಲ್ಲಿ ಸಮಾಜ ವಿಫಲವಾಗಿದೆ. ಆದ್ದರಿಂದ, ಪತ್ರಕರ್ತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದರು. ನಿಖರವಾದ ಸುದ್ದಿಗೆ ಹೇಗೆ ಬೇಡಿಕೆಯಿದೆಯೋ, ಅದೇ ರೀತಿ ನಿಖರವಾದ ಪತ್ರಕರ್ತರ ಅವಶ್ಯಕತೆ ಜಗತ್ತಿಗಿದೆ, ಅದು ಯಾವುದೇ ಮಾಧ್ಯಮವಾಗಲಿ ಎಂದರು.

ಪತ್ರಕರ್ತರಿಗೆ ಸಹಕಾರ:

ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿಯನ್ನು ಶ್ಲಾಘಿಸಿದ ಲತಾಕುಮಾರಿ ಅವರು, ನಗರೀಕರಣದ ಮಿಶ್ರಣವಿಲ್ಲದೆ ಗ್ರಾಮೀಣ ಸೊಗಡಿನಲ್ಲಿ ಮಾತು ಮತ್ತು ವಿಶ್ಲೇಷಣೆ ಮಾಡುವ ಅವರ ಕಾರ್ಯ ನಿಜಕ್ಕೂ ವಿಶೇಷ ಎಂದರು. ನೋಡಿದ್ದನ್ನು ಪ್ರಮಾಣೀಕರಿಸುವ ಸಂಪ್ರದಾಯವನ್ನು ಪತ್ರಕರ್ತರು ಹೆಚ್ಚು ಅಳವಡಿಸಿಕೊಳ್ಳಬೇಕು ಮತ್ತು ಪ್ರಜ್ಞಾವಂತರಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ, ಪತ್ರಕರ್ತರಿಗಾಗಿ ನಿವೇಶನ ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದ ಅವರು, ಕಾರ್ಯಕ್ರಮಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟಿರುವುದಾಗಿ ತಿಳಿಸಿ, ಪತ್ರಕರ್ತರಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು. ಕನ್ನಡಪ್ರಭ ಮತ್ತು ಸುವರ್ಣ ಟಿವಿ ವಾಹಿನಿಯ ಮುಖ್ಯಸ್ಥ ರವಿ ಹೆಗಡೆ ಡಿಜಿಟಲ್ ಮಾಧ್ಯಮದ ಬೆಳವಣಿಗೆಯ ಬಗ್ಗೆ ಮಾತನಾಡಿ, ಇಂದಿನ ಡಿಜಿಟಲ್ ಕ್ರಾಂತಿ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರು ಮಾತ್ರ ಬದುಕುಳಿಯುತ್ತಾರೆ. ಕಲ್ಲಚ್ಚಿನಿಂದ ಫ್ಲಾಷ್‌ನ್ಯೂಷ್ ನ್ಯೂಸ್‌ವರೆಗೆ ಮಾಧ್ಯಮ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಇದೀಗ ಒಂದು ರೀತಿಯ ಡಿಜಿಟಲ್ ಸುನಾಮಿ ಉಂಟಾಗಿದೆ. ಮುದ್ರಣ ಮಾಧ್ಯಮವು ಹೆಚ್ಚು ಕಾಲ ಉಳಿಯುವುದು ಕಷ್ಟ, 2043ರ ವೇಳೆಗೆ ಅದು ಸಂಪೂರ್ಣ ನಿಂತುಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಿದ ಅವರು, ದೃಶ್ಯ ಮಾಧ್ಯಮವೂ ಕೂಡ ದೀರ್ಘಕಾಲ ಮುಂದುವರಿಯುವುದಿಲ್ಲ ಎಂದು ಭವಿಷ್ಯ ನುಡಿದರು. ಕೋವಿಡ್ ನಂತರ,24/7 ಸುದ್ದಿ ವಾಹಿನಿಗಳ ಟಿಆರ್‌ಪಿ ಕಡಿಮೆಯಾಗುತ್ತಿದೆ. ಆದರೆ, ಸುದ್ದಿಗಳನ್ನು ಓದುವವರು ಮತ್ತು ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುದ್ರಣ ಮಾಧ್ಯಮ ಓದುಗರು ಡಿಜಿಟಲ್ ವೇದಿಕೆಗಳತ್ತ, ಟಿವಿ ವೀಕ್ಷಕರು ಯೂಟ್ಯೂಬ್ ಕಡೆಗೆ ಬದಲಾಗುತ್ತಿದ್ದಾರೆ ಎಂಬ ಗಂಭೀರ ವಿಷಯವನ್ನು ಅವರು ತಿಳಿಸಿದರು. ಇದೇ ರೀತಿಯ ಬದಲಾವಣೆ ಸಿನಿಮಾ ಕ್ಷೇತ್ರದಲ್ಲೂ ಆಗಿದ್ದು, ಪತ್ರಿಕೋದ್ಯಮ ಇನ್ನು ಪತ್ರಿಕೋದ್ಯಮವಲ್ಲ, ಅದು ಮೀಡಿಯಾ ಟೆಕ್ ಉದ್ಯಮವಾಗಿದೆ ಎಂದು ರವಿ ಹೆಗಡೆ ಹೇಳಿದರು.

ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು:

ಸಾಂಪ್ರದಾಯಿಕ ಮಾಧ್ಯಮವನ್ನು ಈ ಡಿಜಿಟಲ್ ಯುಗದಲ್ಲಿ ಹೇಗೆ ಉಳಿಸಿಕೊಳ್ಳುವುದು ಎಂಬುದೇ ಪ್ರಸ್ತುತದ ಮುಖ್ಯ ಪ್ರಶ್ನೆ. ಯಾರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಬದುಕುಳಿಯುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು. ಡಿಜಿಟಲ್ ಕ್ರಾಂತಿಯನ್ನು ಎರಡು ಅಲುಗಿನ ಕತ್ತಿಯ ಪರಿಸ್ಥಿತಿ ಎಂದು ಬಣ್ಣಿಸಿದ ಅವರು, ಡಿಜಿಟಲ್ ಮಾಧ್ಯಮದಲ್ಲಿ ಎಲ್ಲರಿಗೂ ಅವಕಾಶವಿದೆ, ಆದರೆ ಇಲ್ಲಿ ಸಂಯಮದ ಕೊರತೆ ಇದೆ ಎಂದು ಎಚ್ಚರಿಸಿದರು. ಸೌಜನ್ಯ ಪ್ರಕರಣವು ಪದೇ ಪದೇ ಮುನ್ನೆಲೆಗೆ ಬರುತ್ತಿರುವುದು ಡಿಜಿಟಲ್ ಮಾಧ್ಯಮಗಳಿಂದಲೇ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸಂಯಮ, ವಿವೇಚನೆ ಇದೆ ಆದರೆ ಡಿಜಿಟಲ್ ವೇದಿಕೆಗಳಲ್ಲಿ ಬಟನ್‌ಗಳು ಮಾತ್ರ ಇರುತ್ತದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಡಿಜಿಟಲ್ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ನಡುವೆ ಒಂದು ರೀತಿಯ ಯುದ್ಧವೇ ನಡೆಯುತ್ತಿದೆ. ಆದರೆ ಇದು ಅನಗತ್ಯ, ಎಲ್ಲರೂ ಸಮಾಜದ ಒಳಿತಿಗಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಆಶಿಸಿದರು. ಕೃತಕ ಬುದ್ಧಿಮತ್ತೆ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಅಪಾಯವನ್ನು ಹೆಚ್ಚಿಸುತ್ತಿರುವುದು ಸತ್ಯ. ಮಾಧ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯವಾಗಿದ್ದು, ಎಲ್ಲಾ ಮಾಧ್ಯಮಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಜಿಲ್ಲಾಧ್ಯಕ್ಷ ವೇಣುಕುಮಾರ್ ಪತ್ರಕರ್ತರನ್ನು ಒಂದುಗೂಡಿಸಲು ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು. ನುಡಿದಂತೆ ನಡೆಯುವ ಶಾಸಕರು ಕೆ.ಎಂ. ಶಿವಲಿಂಗೇಗೌಡ ಎನ್ನುತ್ತಾ, ಅವರು ಪತ್ರಿಕಾ ಭವನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಪತ್ರಕರ್ತರಿಗೆ ನಿವೇಶನ ಒದಗಿಸಲು ಜಿಲ್ಲಾಧಿಕಾರಿಗಳು ಸಹಕರಿಸಬೇಕೆಂದು ಅವರು ಆಶಿಸಿದರು.

93 ವರ್ಷಗಳ ಇತಿಹಾಸವಿರುವ ಸಂಘದಲ್ಲಿ 10 ಸಾವಿರ ಸದಸ್ಯರಿದ್ದು, ಅದರ ಬೆಳವಣಿಗೆಯಲ್ಲಿ ಹಾಸನ ಜಿಲ್ಲೆಯ ಪಾತ್ರ ದೊಡ್ಡದಿದೆ ಎಂದರು. ಬಾಳು ಗೋಪಾಲ್ ಸಾತ್ವಿಕ ಮನಸ್ಸಿನ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿರುವರು ಎಂದರು. ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಹಾಗೂ ಗ್ರಾಮೀಣ ಪತ್ರಕರ್ತರ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಘವು ಕೃತಜ್ಞತೆ ಸಲ್ಲಿಸಿತು. ಅಲ್ಲದೆ, ಈ ಯೋಜನೆಗಳನ್ನು ಮಾನ್ಯತೆ ಇಲ್ಲದ ಸದಸ್ಯರಿಗೂ ವಿಸ್ತರಿಸುವಂತೆ ಶಾಸಕ ಶಿವಲಿಂಗೇಗೌಡರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್.ಬಿ. ಮದನ್ ಗೌಡ ಮಾತನಾಡಿ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಪತ್ರಕರ್ತರ ಬಗ್ಗೆ ತೋರಿಸಿರುವ ಪ್ರೀತಿ ಮತ್ತು ಕಾಳಜಿಯನ್ನು ಶ್ಲಾಘಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್‌ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಿರಂತರವಾಗಿ ಕಾರ್ಯಚಟುವಟಿಕೆ ನಡೆಸಲಾಗುತ್ತಿದ್ದು, ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪತ್ರಕರ್ತರ ಬಗ್ಗೆ ಕಾಳಜಿವಹಿಸಿ ಉತ್ತಮ ಕೆಲಸ ಮಾಡುತ್ತಿರುವುದಾಗಿ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ, ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಿದರು. ಜೊತೆಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್‌. ಮಂಜುನಾಥ್, ಎಸ್.ಆರ್. ಪ್ರಸನ್ನಕುಮಾರ್, ರವಿನಾಕಲಗೂಡು, ಜ್ಞಾನದೀಪ ಪತ್ರಿಕೆ ಸಂಪಾದಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಿ.ಜೆ. ರಾಜಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಭಾರತೀ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಉಪಾಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್, ಕೆ.ಎಂ. ಹರೀಶ್, ಡಿ.ಬಿ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಕಾರ್ಯದರ್ಶಿ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.*ಬಾಕ್ಸ್‌: ಡಿಜಿಟಲ್ ಕ್ರಾಂತಿ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿದೆ: ರವಿ ಹೆಗಡೆ

ಇಂದಿನ ಡಿಜಿಟಲ್ ಕ್ರಾಂತಿ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರು ಮಾತ್ರ ಬದುಕುಳಿಯುತ್ತಾರೆ. ಕಲ್ಲಚ್ಚಿನಿಂದ ಫ್ಲಾಷ್‌ನ್ಯೂಷ್ ನ್ಯೂಸ್‌ವರೆಗೆ ಮಾಧ್ಯಮ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಇದೀಗ ಒಂದು ರೀತಿಯ ಡಿಜಿಟಲ್ ಸುನಾಮಿ ಉಂಟಾಗಿದೆ. ಬದಲಾದ ತಂತ್ರಜ್ಞಾನದಲ್ಲಿ ಕಾಗದದ ಪತ್ರಿಕೆ ಓದುಗರಿಗಿಂತ ಡಿಜಿಟಲ್ ಸುದ್ದಿ ಓದುವವರ ಸಂಖ್ಯೆ ಹೆಚ್ಚಾಗಿದೆ ಎಂದು ಏಷ್ಯಾನೆಟ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ತಿಳಿಸಿದರು. ಬರೀ ಮೀಡಿಯಾ ಆಗಿರಲು ಸಾಧ್ಯವಿಲ್ಲ. ಹಾಗಿದ್ದರೆ ಆ ಸಂಸ್ಥೆ ಹೆಚ್ಚುಕಾಲ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಅದು ಮೀಡಿಯಾ ಟೆಕ್ ಆಗಬೇಕು. ಆಗ ಮಾತ್ರ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಹಾಗಾಗಿ ಮಾಧ್ಯಮ ಡಿಜಿಟಲೀಕರಣ ಆದ ನಂತರದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಮೊಬೈಲ್ ಕೈಗೆ ಬಂದ ನಂತರದಲ್ಲಿ ಮಾಧ್ಯಮವೂ ಬದಲಾಗಿದೆ. ವೇಗ ಹೆಚ್ಚಾಗಿದೆ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ