ಪ್ರಸ್ತುತ ಸಂದರ್ಭದಲ್ಲಿ ನಾವೆಲ್ಲರೂ ವರ್ತಮಾನದ ಜಗತ್ತು ಕೆಟ್ಟು ಹೋಗಿದೆ ಎಂದುಕೊಳ್ಳುತ್ತೇವೆ. ಅಲ್ಲದೆ, ಇದಕ್ಕೆಲ್ಲ ಪರಿಹಾರ ಇಲ್ಲವೆಂಬ ಒದ್ದಾಟದಲ್ಲೇ ಇದ್ದೇವೆ.
ಕನ್ನಡಪ್ರಭ ವಾರ್ತೆ ಮೈಸೂರು
ಲೌಖಿಕ ಜಗತ್ತೇ ಜಗತ್ತಲ್ಲಾ, ಸಮಾಜದಲ್ಲಿ ನಾವು ಉತ್ತಮವಾಗಿ ಬದುಕಲು ನಮ್ಮದೇ ಜಗತ್ತು ಸೃಷ್ಟಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ತಿಳಿಸಿದರು.ಯೋಗಾತ್ಮ ಶ್ರೀಹರಿ ಅವರು ಬರೆದಿರುವ ‘ಲೈಫ್ ಮ್ಯಾನೇಜ್ಮೆಂಟ್, ಸಕ್ಸಸ್ ಮಂತ್ರಗಳು’ ಕೃತಿಯನ್ನು ವಿಶ್ವೇಶ್ವರನಗರದ ಎಂಬಿಸಿಟಿ ಆಡಿಟೋರಿಯಂನಲ್ಲಿ ಜಿಎಸ್ಎಸ್ ಪಬ್ಲಿಕೇಷನ್ಸ್ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ನಾವೆಲ್ಲರೂ ವರ್ತಮಾನದ ಜಗತ್ತು ಕೆಟ್ಟು ಹೋಗಿದೆ ಎಂದುಕೊಳ್ಳುತ್ತೇವೆ. ಅಲ್ಲದೆ, ಇದಕ್ಕೆಲ್ಲ ಪರಿಹಾರ ಇಲ್ಲವೆಂಬ ಒದ್ದಾಟದಲ್ಲೇ ಇದ್ದೇವೆ. ಆದರೆ, ಜಗತ್ತಿನ ಯಾವ ಸಂತರೂ ಜನರು ಸರಿಯಿಲ್ಲ, ಕಾಲ ಚೆನ್ನಾಗಿಲ್ಲ ಎಂದು ಹೇಳದೆ, ಎಲ್ಲರಲ್ಲೂ ಒಳ್ಳೆಯದು ಬಯಸುತ್ತಾನೆ. ಜಗತ್ತು ಯಾವಾಗಲೂ ಹೀಗೆ ಇತ್ತು, ಇಂದು ಮಾಧ್ಯಮಗಳ ಕಾರಣದಿಂದ ಎಲ್ಲಾ ವಿಷಯ ಗೊತ್ತಾಗುತ್ತಿದೆ. ಹೀಗಾಗಿ, ನಾವು ಚೆನ್ನಾಗಿ ಬದುಕಲು ಇಂದಿನ ಪ್ರಪಂಚದಲ್ಲಿ ಮುಳುಗದೆ, ನಮ್ಮದೇ ಪ್ರಪಂಚ ಸೃಷ್ಟಿಸಿಕೊಳ್ಳಬೇಕು ಎಂದು ಅವರು ಹೇಳಿದರು.ನಮ್ಮ ದೇಹ ಮತ್ತು ಮೈಂಡ್ ಸರಿಯಾದ ಕ್ರಮದಲ್ಲಿ ನಿಲ್ಲಿಸಿದರೆ ಎಂದೂ ತಪ್ಪು ಮಾಡಲು ಸಾಧ್ಯವಿಲ್ಲ. ನಮ್ಮ ಮಾನಸಿಕ ಸ್ಥಿತಿ ಹೇಗಿರಲಿದೆ ಅದರ ಪ್ರೋಗ್ರಾಮಿಂಗ್ ಬದಲಾಗಬೇಕಿದೆ. ಜೀವನದ ಮೊದಲ 25 ವರ್ಷ ಅತ್ಯಂತ ಚಂಚಲವಾಗಿದ್ದು, ಆಗ ಉತ್ತಮವಾಗಿ ಬದುಕು ರೂಪಿಸಿಕೊಂಡರೆ ಎಂದಿಗೂ ನಮ್ಮನ್ನು ಬದಲು ಮಾಡಲು ಆಗುವುದಿಲ್ಲ. ಮೆದುಳು ಸರಿಯಾಗಿ ಪ್ರೋಗ್ರಾಂ ಆಗಿದ್ದರೆ ತಪ್ಪು ಮಾಡುವುದು ಕಷ್ಟವಾಗಿದ್ದು, ಶ್ರೀಹರಿ ಅವರ ಈ ಪುಸ್ತಕ ನಮ್ಮ ಆಲೋಚನೆಗಳನ್ನು ಹಲವು ಕಡೆಗಳಿಗೆ ಕೊಂಡೊಯ್ಯಲಿದೆ ಎಂದರು.ನಮ್ಮ ಬದುಕು ಎಂಬುದು ಹುಟ್ಟಿನ ನಂತರ ನಿಧಾನವಾಗಿ ವಿಕಾಸವಾಗಲಿದೆ. ಯಾವುದೇ ಯಶಸ್ವಿ ಪುರುಷ ಅಥವಾ ಮಹಿಳೆಯ ಬದುಕಿನ ಯಶಸ್ವಿನ ಸೂತ್ರ ಹೊಳೆಯಲಿದ್ದು, ಅವರಿಗೆ ಸಾಧ್ಯವಾಗುವ ರೀತಿಯಲ್ಲಿ ಬದುಕನ್ನು ವಿಕಾಸಗೊಳಿಸಬೇಕು. ನಮಗೊಂದು ಫೋಕಸ್ ಇದ್ದರೆ, ನಮ್ಮ ಮನಸ್ಸನ್ನು ಸರಿಯಾಗಿ ಮೌಲ್ಡ್ಮಾಡಿಕೊಳ್ಳಬೇಕು. ಆಗ ಅದು ಬದುಕನ್ನು ಸರಿಯಾಗಿ ಕೊಂಡೊಯ್ಯಲಿದೆ. ಮೈಂಡ್ ಎಂಬುದು ಒಬಿಡಿಯಂಟ್ ಸ್ಟೂಡೆಂಟ್ ಇದ್ದಂತೆ, ಅದರ ಪ್ರೋಗ್ರಾಂ ಸರಿಯಾಗಿ ಮಾಡಿದರೆ ನಮಗೆ ಬೇಕಾದ ಯಶಸ್ವಿನ ಸೂತ್ರವನ್ನು ನಮ್ಮ ಮೈಂಡ್ ದಾನ ಮಾಡುತ್ತದೆ ಎಂದು ಅವರು ತಿಳಿಸಿದರು. ಹೆಚ್ಚಿನ ಪುಸ್ತಕ ಬರೆಯಲಿವಿಜಯ ವಿಠಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ಶ್ರೀಹರಿ ಅವರು ಪುಸ್ತಕದಲ್ಲಿ ಬಹಳಷ್ಟು ವಿಷಯ ತಿಳಿಸಿದ್ದಾರೆ. ಹೀಗೆ ನಮ್ಮ ಜೀವನ ಸತ್ಯ ಬರೆದು ಬೇರೆಯವರಿಗೆ ತಿಳಿಸಬೇಕು. ಇಂತಹ ಪುಸ್ತಕ ಮೂಲಕ ನಮ್ಮ ಜೀವನದ ಯಶಸ್ಸನು ತಿಳಿಸಬೇಕು ಎಂದರು.ಶ್ರೀಹರಿ ಅವರು ಯಾವುದೇ ಕೆಲಸ ಮಾಡಿದರು ನಮಗೆ ಖುಷಿ. ಅವರು ಒಳ್ಳೆಯ ಹಾಗೂ ಸೃಜನಶೀಲವಾಗಿ ಕೆಲಸ ಮಾಡುತ್ತಾರೆ. ಈ ಪುಸ್ತಕವನ್ನು ಎಲ್ಲರೂ ಓದಬೇಕಿದ್ದು, ಹಿರಿಯರಿಗೂ ಸಲಹೆ ಇದೆ. ಇಂದಿನ ಯುವ ಜನಾಂಗಕ್ಕೆ ಅನುಗುಣವಾಗಿ ಭಾಷೆ ಬಳಸಿದ್ದಾರೆ. ಶ್ರೀಹರಿ ಅವರ ಪ್ರಥಮ ಪುಸ್ತಕ ಇದಾಗಿದ್ದು, ಮುಂದೆ ಇನ್ನೂ ಹೆಚ್ಚು ಪುಸ್ತಕ ಬರೆಯಲಿ ಎಂದು ಅವರು ಆಶಿಸಿದರು.ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್. ಮುರಳಿ, ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್, ಪತ್ರಕರ್ತರಾದ ಐತಿಚಂಡ ರಮೇಶ್ ಉತ್ತಪ್ಪ, ಎಂ.ಆರ್. ಸತ್ಯನಾರಾಯಣ, ಸಿ.ಕೆ. ಮಹೇಂದ್ರ, ಕೃತಿಯ ಕರ್ತೃ ಹಾಗೂ ಜಿಎಸ್ಎಸ್ಸಂಸ್ಥೆ ಮುಖ್ಯಸ್ಥ ಶ್ರೀಹರಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.