ತಾ.ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ ಅವರಿಗೆ ಅಧಿಕೃತ ಅಹ್ವಾನ
ಭದ್ರಾವತಿ ಆಕಾಶವಾಣಿ ಮೂಲಕ ಸುತ್ತಮುತ್ತಲಿನ ಎಲ್ಲ ಕಲಾ ಪ್ರಕಾರಗಳ ಕಲಾವಿದರನ್ನು ಗುರುತಿಸಿ, ಅವರ ಪ್ರತಿಭೆ ಬೆಳಕಿಗೆ ತಂದು ನಾಡು ನುಡಿಯ ಬಗ್ಗೆ ಗಮನಾರ್ಹ ಸಾಧನೆಯನ್ನು ಡಾ.ಎ.ಎಸ್.ಶಂಕರನಾರಾಯಣ ಮಾಡಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಅಭಿಪ್ರಾಯಪಟ್ಟದ್ದಾರೆ.ಭಾನುವಾರ ತಾ.ಕಸಾಪ ತರೀಕೆರೆ ತಾ. 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಬೆಂಗಳೂರು ಆಕಾಶವಾಣಿ ಕಾರ್ಯ ನಿರ್ವಾಹಕ ಡಾ.ಎ.ಎಸ್.ಶಂಕರನಾರಾಯಣ ಅವರ ತರೀಕೆರೆ ಪಟ್ಟಣದ ಸ್ವಗೃಹಕ್ಕೆ ಜಿಲ್ಲಾಧ್ಯಕ್ಷರು, ಕಸಾಪ ಪದಾದಿಕಾರಿಗಳು ತೆರಳಿ ಅಧಿಕೃತ ಆಹ್ವಾನ ನೀಡಿ ಮಾತನಾಡಿದರು.ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಟಿ.ಜಿ.ಶಶಾಂಕ ಮಾತನಾಡಿ ಪಟ್ಟಣದಲ್ಲಿ ಈವರೆವಿಗೂ 18 ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಮಾ.17ರಂದು ನೆರವೇರಲಿರುವ 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನೆರವೇರಲು ಎಲ್ಲರ ಸಹಕಾರದೊಂದಿದೆ ಸಕಲ ಸಿದ್ದತೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ ಪತ್ರ ನೀಡಿದರು.ಹಿರಿಯ ಸಾಹಿತಿ ರಾಜಪ್ಪ ದಳವಾಯಿ ಮಾತನಾಡಿ ಆಕಾಶವಾಣಿ ಅತ್ಯಂತ ಮಹತ್ವಪೂರ್ಣ ಶ್ರವಣ ಮಾಧ್ಯಮ. ಅಂತಹ ಪ್ರಮುಖ ಸಂಸ್ಥೆಯಲ್ಲಿ ಡಾ.ಎ.ಎಸ್,.ಶಂಕರನಾರಾಯಣ ಅಪಾರ ಅನುಭವ ಗಳಿಸಿದ್ದು ಇಂತಹವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದರು.
ಕನ್ನಡಶ್ರೀ ಬಿ,ಎಸ್.ಭಗವಾನ್ ಮಾತನಾಡಿ ನಾಡುನುಡಿ ಬಗ್ಗೆ ಅಧ್ಯಯನಶೀಲರಾದ ಹಾಗೂ ಸಾಹಿತ್ಯ ಚಿಂತಕರು, ಅನುಭವಿಗಳು ಆದ ಡಾ.ಎ.ಎಸ್. ಶಂಕರನಾರಾಯಣ ಅವರು ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಅಭಿವ್ಯಕ್ತ ಚಿಂತನೆ, ರಶ್ಮಿ, ಭಾಷಣ ಇತ್ಯಾದಿಗಳ ಮೂಲಕ ನಾಡಿನ ಹಿರಿಮೆ ಗರಿಮೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ತಾ.ಕಸಾಪ ಸಾಹಿತ್ಯ ಸಮ್ಮೇಳನ ನೆರವೇರಿಸಿರುವ ಪಂಕ್ತಿಯಲ್ಲಿ ತರೀಕೆರೆ ಅಗ್ರಸ್ಥಾನದಲಿದೆ. ಅನೇಕ ಶ್ರೇಷ್ಠ ಸಾಧಕರನ್ನು ಸಮ್ಮೇಳಾಧ್ಯಕ್ಷರನ್ನಾಗಿ ಗುರುತಿಸಿದ ಯಶಸ್ವಿ ತಾಲೂಕಾಗಿದೆ ಎಂದು ಹೇಳಿದರು.ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ್ ಮಾತನಾಡಿ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ತಾಲೂಕು ಕಸಾಪ ನನಗೆ ವಹಿಸಿದೆ. ಅತ್ಯಂತ ವಿನಮ್ರವಾಗಿ ಸ್ವಾಗತ ಸ್ವೀಕರಿಸಿ ಸಮ್ಮೇಳನ ಮುನ್ನೆಡೆಸುವ ಗುರುತರ ಹೊಣೆ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವೆಂದು ಭಾವಿಸಿ ಸುಸಂಪನ್ನಗೊಳಿಸೋಣ ಎಂದು ನುಡಿದರು.ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲಟರಿ ಶ್ರೀನಿವಾಸ್, ನವೀನ್ ಪೆನ್ನಯ್ಯ ಮತ್ತಿತರರು ಮಾತನಾಡಿದರು.ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಆಕಾಶವಾಣಿ ಗಮಕ ಕಲಾವಿದೆ ಶಾರದ ಎನ್.ಮಂಜುನಾಥ್, ಡಾ.ಅಂಜನಾ ಆಚಾರ್ಯ, ಲಕ್ಷ್ಮೀ ಭಗವಾನ್, ಕಲಾವಿದ ಲಿಂಗಪ್ಪಯ್ಯ, ಕೆ.ಎಸ್.ಶಿವಣ್ಣ, ಎಸ್. ಪರಮೇಶ್ ಅವರು ಭಾಗವಹಿಸಿದ್ದರು. -1ಕೆಟಿಆರ್.ಕೆ.1ಃ