ಮುಂಡಗೋಡ: ಎಲ್ಲೆಲ್ಲಿಯೂ ಅಯ್ಯಪ್ಪ ಎಂದು ಹೇಳಿದರೆ ಜೀವನ ಸಾರ್ಥಕವಾಗುತ್ತದೆ. ಅಯ್ಯಪ್ಪಸ್ವಾಮಿ ಆರಾಧನೆಯಿಂದ ಹರಿ-ಹರನ ಆರಾಧನೆ ಮಾಡಿದಂತಾಗುತ್ತದೆ ಎಂದು ಹೊನ್ನಾವರ ತಾಲೂಕು ಕರ್ಕಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಹೇಳಿದರು.
ಅದ್ಧೂರಿ ಮೆರವಣಿಗೆ:ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಹೊನ್ನಾವರ ತಾಲೂಕು ಕರ್ಕಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳ ಮೆರವಣಿಗೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರ ಪೂರ್ಣಕುಂಭ, ಚಂಡೆ ವಾದ್ಯ ಹಾಗೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಅಯ್ಯಪ್ಪ ನಾಮಸ್ಮರಣೆ ಗಮನ ಸೆಳೆಯಿತು.ಬಳಿಕ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪನೆ, ಕಲಾನ್ಯಾಸ, ಕಲಾವೃದ್ಧಿ ಹೋಮ ನಡೆದ ಬಳಿಕ ಮಧ್ಯಾಹ್ನ ಪೂರ್ಣಾಹುತಿ, ಪೂರ್ಣಕಲಾರೋಹಣ, ಕುಂಭಾಭಿಷೇಕ, ಅಲಂಕಾರ ಮಹಾ ನೈವೇದ್ಯ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವಿಶ್ವಸ್ಥ ಸಮಿತಿ ಅಧ್ಯಕ್ಷ ವಿನಾಯಕ ರಾಯ್ಕರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.