ನಾಲೆಗೆ ಅಳವಡಿಸಿದ್ದ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯ ಮುಂದುವರಿಕೆ

KannadaprabhaNewsNetwork | Published : Feb 10, 2025 1:51 AM

ಸಾರಾಂಶ

ಮಲೇಬೆನ್ನೂರು ಭಾಗದಲ್ಲಿ ನಾಲೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯ ಮುಂದುವರಿದಿದ್ದು, ಶನಿವಾರ ಸಂಜೆವರೆಗೂ ನೀರಾವರಿ ನಿಗಮದ ೩ ಮತ್ತು ೪ನೇ ಉಪ ವಿಭಾಗದಲ್ಲಿ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳ ಫುಟ್ವಾಲ್ ಮತ್ತಿತರೆ ವಸ್ತುಗಳ ಸಂಪರ್ಕಗಳನ್ನು ಅಧಿಕಾರಿಗಳ ತಂಡದವರು ಕತ್ತರಿಸಿದ್ದಾರೆ.

- ಫುಟ್ವಾಲ್ ಮತ್ತಿತರೆ ವಸ್ತುಗಳ ಸಂಪರ್ಕಗಳ ಕಿತ್ತೆಸೆದ ಅಧಿಕಾರಿಗಳು - - - ಮಲೇಬೆನ್ನೂರು: ಮಲೇಬೆನ್ನೂರು ಭಾಗದಲ್ಲಿ ನಾಲೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯ ಮುಂದುವರಿದಿದ್ದು, ಶನಿವಾರ ಸಂಜೆವರೆಗೂ ನೀರಾವರಿ ನಿಗಮದ ೩ ಮತ್ತು ೪ನೇ ಉಪ ವಿಭಾಗದಲ್ಲಿ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳ ಫುಟ್ವಾಲ್ ಮತ್ತಿತರೆ ವಸ್ತುಗಳ ಸಂಪರ್ಕಗಳನ್ನು ಅಧಿಕಾರಿಗಳ ತಂಡ ಕತ್ತರಿಸಿದರು. ದಿಬ್ಬದಹಳ್ಳಿಯಿಂದ ಆರಂಭವಾದ ತೆರವು ಕಾರ್ಯ ಜಿ.ಬೇವಿನಹಳ್ಳಿ, ಯಲವಟ್ಟಿ ಬಳಿ ನಾಲ್ಕು ಅಕ್ರಮ ಪಂಪ್‌ಸೆಟ್‌ಗಳನ್ನು ಹಾನಿಗೊಳಿಸಿ, ನಾಲೆಯ ನೀರಲ್ಲಿ ಹಾಕಲಾಯಿತು ಎಂದು ತಿಳಿದಿದೆ. ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯದಲ್ಲಿ ಎಂಜಿನಿಯರ್ ಕೃಷ್ಣಮೂರ್ತಿ, ಉಪ ತಹಸೀಲ್ದಾರ್ ರವಿ, ಗ್ರಾಮ ಆಡಳಿತಾಧಿಕಾರಿ ರಾಮಕೃಷ್ಣ, ಷರೀಫ್ ಮತ್ತಿತರರು ಇದ್ದರು.

ಗೇಜ್ ಕುಸಿತ:

ಕೊಮಾರನಹಳ್ಳಿ ಬಳಿಯ ಮುಖ್ಯ ನಾಲೆಯಲ್ಲಿ ಮಧ್ಯಾಹ್ನದ ವೇಳೆಗೆ ೪.೩ ಅಡಿ ಇದ್ದರೆ ಕೊನೆ ಭಾಗಕ್ಕೆ ನೀರು ಹರಿಯೋದಿಲ್ಲ ಎಂಬುದು ನೀರಗಂಟಿಗಳ ಅಭಿಪ್ರಾಯವಾಗಿದೆ. ಕೊನೆ ಭಾಗದ ಭತ್ತದ ಗದ್ದೆಗಳಿಗೆ ನೀರಿಲ್ಲ ಎಂದರೆ ತೋಟಗಳಿಗೆ ನೀರು ದೊರೆಯುವುದು ಕನಸಿನ ಮಾತು ಎಂದು ರೈತ ಪ್ರಭುಗೌಡ ಬೇಸರಿಸಿದರು.

ಬೇಸಿಗೆ ಹಂಗಾಮಿಗೆ ಭದ್ರಾ ನಾಲೆಗಳ ವ್ಯಾಪ್ತಿಯಲ್ಲಿ ನೀರು ಹರಿಸಲಾಗಿದೆ. ಕಾಲುವೆಗಳಿಗೆ ಅಕ್ರಮ ಪಂಪ್‌ಸೆಟ್‌ಗಳನ್ನು ಹಾಕಿ, ನೀರು ಹರಿಸುವ ಕಾರಣ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ಅಕ್ರಮ ಪಂಪ್‌ಸೆಟ್‌ಗಳು, ಮೋಟಾರ್, ಡೀಸೆಲ್ ಎಂಜಿನ್‌ಗಳು ಇತರೆ ಉಪಕರಣಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದಾರೆ. ಈ ಹಿನ್ನೆಲೆ ಹರಿಹರ ತಹಸೀಲ್ದಾರ್ ಗುರುಬಸವರಾಜ್ ತಾಲೂಕಿನ ನಾಲಾ ವ್ಯಾಪ್ತಿಯಲ್ಲಿ ೧೪೪ನೇ ಸೆಕ್ಷನ್‌ಅಡಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

- - -

-೯ಎಂಬಿಆರ್೨: ನಾಲೆಯಲ್ಲಿದ್ದ ಅಕ್ರಮ ಪಂಪ್‌ಸೆಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

Share this article