ರಸ್ತೆ ದುರಸ್ತಿ ಪಡಿಸಿ, ಇಲ್ಲ ಹಣ ನಗರಸಭೆಗೆ ವರ್ಗಾವಣೆ ಮಾಡಿ: ಕೆ.ಶೇಷಾದ್ರಿ

KannadaprabhaNewsNetwork |  
Published : Feb 11, 2025, 12:47 AM IST
10ಕೆಆರ್ ಎಂಎನ್ 7.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. | Kannada Prabha

ಸಾರಾಂಶ

ದುರಸ್ತಿ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿತ್ತು. ಆನಂತರ ಮತ್ತೊಂದು ಸಭೆಯಲ್ಲಿ ಜಲಮಂಡಳಿ ಕೈಗೊಳ್ಳಬೇಕಾದ ದುರಸ್ತಿಯನ್ನು ಕೈಗೊಳ್ಳುವಂತೆ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಆದರೆ ರಸ್ತೆ ದುರಸ್ತಿ ಕಾಮಗಾರಿ ನಡೆದೇ ಇಲ್ಲ ಎಂದು ನಗರಸಭಾ ಸದಸ್ಯರು ತುರ್ತು ಸಭೆಯಲ್ಲಿ ವಾದಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಕುಡಿಯುವ ನೀರಿನ ಪೈಪುಗಳ ಅಳವಡಿಕೆಗೆ ಅಗೆದಿರುವ ರಸ್ತೆಗಳನ್ನು ದುರಸ್ತಿಪಡಿಸಿ, ಇಲ್ಲವೇ ಅದಕ್ಕೆ ತಗಲುವ ಹಣವನ್ನು ನಗರಸಭೆಗೆ ವರ್ಗಾವಣೆ ಮಾಡಿ. ಶಾಸಕರ ಮಾತು ಕೇಳಿಕೊಂಡು ರಸ್ತೆ ದುರಸ್ತಿ ಪಡಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಜಲಮಂಡಳಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಪೈಪ್ ಲೈನ್ ಹಾದು ಹೋಗಿರುವ ಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಅದನ್ನು ದುರಸ್ತಿ ಪಡಿಸದಿರುವ ವಿಚಾರ ಪ್ರಸ್ತಾಪವಾದಾಗ ಕೆ.ಶೇಷಾದ್ರಿರವರು, ರಸ್ತೆ ದುರಸ್ತಿ ಪಡಿಸದಿದ್ದರೆ ಜನರೇ ದಂಗೆ ಏಳುತ್ತಾರೆ. ಇಲ್ಲಿ ತುಘಲಕ್ ದರ್ಬಾರ್ ನಡೆಸಲು ಅವಕಾಶ ಇಲ್ಲ. ನೀವೇ ಶಾಸಕರಿಗೆ ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು.

ಪೈಪು ಅಳವಡಿಕೆ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳ ಭಾಗವನ್ನು ಸರಿಪಡಿಸುವುದು ಟೆಂಡರ್ ನಲ್ಲಿ ಉಲ್ಲೇಖವಾಗಿದೆ. ಸುಮಾರು 160 ಕಿಮೀ ಪ್ರಮಾಣದ ರಸ್ತೆ ದುರಸ್ತಿ ಆಗಬೇಕು. ಆದರೆ, ನಗರದ ಎಲ್ಲಾ ರಸ್ತೆಗಳಿಗೆ ಪೂರ್ಣ ಪ್ರಮಾಣದಲ್ಲಿ ಡಾಂಬರೀಕರಣ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಜಲಮಂಡಳಿ ಬಳಿ ಇರುವ ರಸ್ತೆ ದುರಸ್ತಿಯ ಹಣವನ್ನು ನಗರಸಭೆಗೆ ವರ್ಗಾಯಿಸುವಂತೆ ಶಾಸಕರು ಈ ಹಿಂದೆ ನಡೆದಿದ್ದ ಸಭೆಗಳಲ್ಲಿ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ, ದುರಸ್ತಿ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿತ್ತು. ಆನಂತರ ಮತ್ತೊಂದು ಸಭೆಯಲ್ಲಿ ಜಲಮಂಡಳಿ ಕೈಗೊಳ್ಳಬೇಕಾದ ದುರಸ್ತಿಯನ್ನು ಕೈಗೊಳ್ಳುವಂತೆ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಆದರೆ ರಸ್ತೆ ದುರಸ್ತಿ ಕಾಮಗಾರಿ ನಡೆದೇ ಇಲ್ಲ ಎಂದು ನಗರಸಭಾ ಸದಸ್ಯರು ತುರ್ತು ಸಭೆಯಲ್ಲಿ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧಿಕಾರಿಗಳು, ಈವರೆಗೆ 1.5 ಕೋಟಿ ರು.ವೆಚ್ಚದಲ್ಲಿ ಕೆಲವು ರಸ್ತೆಗಳ ದುರಸ್ತಿ ಆಗಿದೆ ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ಕೆ.ಶೇಷಾದ್ರಿ , ಆ ಕಾಮಗಾರಿಯೂ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ