ಗುಂಡ್ಲುಪೇಟೆ ನೆಹರು ಪಾರ್ಕ್ ಬೀದಿ ದೀಪ ಸೋಮವಾರ ರಾತ್ರಿ ಜಗಮಗಿಸಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕನ್ನಡಪ್ರಭ ವರದಿ ಪ್ರಕಟಗೊಂಡ ದಿನವೇ ಪಟ್ಟಣದ ಜೋಡಿ ರಸ್ತೆ ಹಾಗೂ ನೆಹರು ಪಾರ್ಕ್ ಹೈಮಾಸ್ಟ್ ದೀಪಗಳು ದಿಢೀರ್ ಉರಿಯಲು ಶುರು ಮಾಡಿವೆ. ಇದನ್ನು ಕಂಡ ಪಟ್ಟಣದ ನಾಗರೀಕರು ಪುರಸಭೆಯ ಈ ಮೋಡಿ ಕಂಡು ಹೌಹಾರಿದ್ದಾರೆ.ಜೂ.೨ ಸೋಮವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಕಗ್ಗತ್ತಲಲ್ಲಿ ಜೋಡಿ ರಸ್ತೆ, ಅರಸು ಕ್ರೀಡಾಂಗಣ, ನೆಹರು ಪಾರ್ಕ್! ಎಂದು ವರದಿ ಪ್ರಕಟಗೊಂಡಿತ್ತು. ಕಳೆದ ಹಲವು ತಿಂಗಳಿಂದ ಜೋಡಿ ರಸ್ತೆ, ನೆಹರು ಪಾರ್ಕ್ ಹಾಗೂ ಡಿ.ದೇವರಾಜ ಅರಸು ಕ್ರೀಡಾಂಗದೊಳಗಿನ ಹೈಮಾಸ್ಟ್ ದೀಪಗಳು ಉರಿಯುತ್ತಿರಲಿಲ್ಲ. ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣ ಕನ್ನಡಪ್ರಭ ಪತ್ರಿಕೆಯ ವರದಿ ಗಮನಿಸಿ ಪುರಸಭೆ ಸಿಬ್ಬಂದಿ ಜೊತೆ ಚರ್ಚಿಸಿ ಬೀದಿ ದೀಪ ಉರಿಯದೆ ಇರುವ ಕಾರಣ ಕೇಳಿದ್ದಾರೆ.
ಬೀದಿ ದೀಪ ನಿರ್ವಹಣೆ ಹೊತ್ತ ಗುತ್ತಿಗೆದಾರನಿಗೆ ಹಣ ಕೊಟ್ಟಿರಲಿಲ್ಲ ಎಂಬುದು ಬಯಲಾಗಿದೆ. ಇದು ಪಟ್ಟಣದ ಜನರ ದುರಂತ ವಿಷಯವಲ್ಲವೇ? ಪಟ್ಟಣದ ಜೋಡಿ ರಸ್ತೆಯ ಬಹುತೇಕ ದೀಪಗಳು ಸೋಮವಾರ ಸಂಜೆಯಿಂದಲೇ ಬೆಳಗಲು ಶುರು ಮಾಡಿವೆ. ನೆಹರು ಪಾರ್ಕ್ ದೀಪದಿಂದ ಜಗಮಗಿಸಿದೆ.
ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕನ್ನಡಪ್ರಭ ಪತ್ರಿಕೆಯ ವರದಿಗೆ ಎಚ್ಚೆತ್ತು ಹಲವು ತಿಂಗಳಿನಿಂದ ಉರಿಯದ ಜೋಡಿ ರಸ್ತೆಯ ದೀಪ ಬೆಳಕು ಬರಲು ಕಾರಣರಾಗಿದ್ದಾರೆ ಎಂದು ಸಾರ್ವಜನಿಕರು ಅಭಿನಂದಿಸಿದ್ದಾರೆ.
ಅಭಿನಂದನೆ ಸುರಿಮಳೆ:
ಕನ್ನಡಪ್ರಭಕ್ಕೆ ನೂರಾರು ಮಂದಿ ಸಾರ್ವಜನಿಕರು ಅಭಿನಂದನೆ ಸಲ್ಲಿಸುವ ಜೊತೆಗೆ ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣರ ಕಾಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುರಸಭೆ ಬಣ್ಣ ಬಯಲು:
ಪಟ್ಟಣದ ಜೋಡಿ ರಸ್ತೆಯ ದೀಪಗಳ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರನಿಗೆ ಪುರಸಭೆ ನಿರ್ವಹಣೆಯ ಹಣ ಕೊಡದೇ ಇದ್ದದ್ದು, ಜೋಡಿ ರಸ್ತೆಯ ಲೈಟ್ ಗಳು ಉರಿಯದಿರಲು ಪ್ರಮುಖ ಕಾರಣ ಎನ್ನಲಾಗಿದೆ.
ಪಟ್ಟಣದ ಎಲ್ಲ ಬೀದಿ ದೀಪಗಳನ್ನು ೧೫ ದಿನಗಳಲ್ಲಿ ಉರಿಸಲು ಕ್ರಮ ವಹಿಸುತ್ತೇನೆ. ಜೋಡಿ ರಸ್ತೆ ಬೀದಿ ದೀಪಗಳ ಕೇಬಲ್ ಬದಲಿಸಲು ಕ್ರಿಯಾ ಯೋಜನೆ ಆಗಿದೆ ಹದಿನೈದು ದಿನಗಳೊಳಗೆ ಎಲ್ಲ ಬೀದಿ ದೀಪಗಳು ಉರಿಯಲು ಕ್ರಮ ತೆಗೆದುಕೊಳ್ಳಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.