ಕನ್ನಡಪ್ರಭ ವಾರ್ತೆ ಅರಕಲಗೂಡು
ಬೆಳಿಗ್ಗೆ 9 ಗಂಟೆಗೆ ಎಲ್ಲಾ ಶಾಲಾ ಕಾಲೇಜಿನವರು, ಸರ್ಕಾರಿ ಇಲಾಖೆಯವರು ಗ್ರಾಮಪಂಚಾಯತಿ ಆವರಣದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದರು. ಕೊಣನೂರು ಪಂಚಾಯತಿ ಆವರಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್ ಧ್ವಜಾರೋಹಣ ನೆರವೇರಿಸಿದರು. ನಂತರದಲ್ಲಿ ಅಂಬೇಡ್ಕರ್, ಗಾಂಧಿ, ಟಿಪ್ಪು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಧ್ವಜಾರೋಹಣದ ನಂತರ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಪ್ರಭಾತ್ ಪೇರಿ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್ ಸಂವಿಧಾನದ ಆಶೋತ್ತರಗಳ ಬಗ್ಗೆ ಮಾತನಾಡಿ, ಶೀಘ್ರದಲ್ಲಿ ಇಲ್ಲಿನ ಅಂಬೇಡ್ಕರ್ ಹಾಗೂ ಗಾಂಧೀಜಿಯವರ ವೃತ್ತದಲ್ಲಿ ಈಗಿರುವ ಪ್ರತಿಮೆಯ ಬದಲಾಗಿ ಕಂಚಿನ ಪ್ರತಿಮೆಯನ್ನು ಅಳವಡಿಸುವ ಸಂಬಂಧ ದೊಡ್ಡ ಕಾರ್ಯಕ್ರಮ ಮಾಡಬೇಕಿರುವುದರಿಂದ ಈ ಬಾರಿ ಗಣರಾಜ್ಯೋತ್ಸವವನ್ನು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ಸರಳವಾಗಿ ಆಚರಿಸಿದ್ದೇವೆ. ಪ್ರತಿಮೆ ಅನಾವರಣವನ್ನು ಹಬ್ಬದಂತೆ ಆಚರಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪಿಡಿಒ ದಿವಾಕರ್, ಉಪಾಧ್ಯಕ್ಷೆ ಜಯಲಕ್ಷ್ಮಿ ಸೋಮಶೇಖರ್, ಪಂಚಾಯತಿಯ ಸರ್ವ ಸದಸ್ಯರು, ಸಿಬ್ಬಂದಿ, ಮುಖಂಡರು ಎಲ್ಲಾ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಮುಂತಾದವರು ಉಪಸ್ಥಿತರಿದ್ದರು.