ಕನ್ನಡಪ್ರಭ ವಾರ್ತೆ ಯಮಕನಮರಡಿ ಮಾರ್ಕಂಡೇಯ ಫೌಂಡೇಶನ್ನ ಕುತುಬ ಉಲ್ ಉಲೂಮ ಮದರಸಾ ಕಳೆದ ಹಲವು ಬಡವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಸಮಾಜ ಸೇವೆ ಮಾಡುತ್ತಿದೆ. ಮದರಸಾದಲ್ಲಿ ಮಕ್ಕಳಿಗೆ ಕುರಾನ್ ಜೊತೆಗೆ ದೇಶಾಭಿಮಾನ ಬೆಳೆಸುವ ಶಿಕ್ಷಣ ನೀಡಲಾಗುತ್ತಿದೆ ಎಂದು ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ ವಿಜೇತ ಆಲಮ್ಖಾನ ದೇಸಾಯಿ ಹೇಳಿದರು. ಅವರು ಶುಕ್ರವಾರ ಪಾಶ್ಚಾಪೂರ-ರುಸ್ತುಂಪೂರ ಕುತುಬ ಉಲ್ ಉಲೂಮ ಮದರಸಾದಲ್ಲಿ 75ನೇ ಗಣರಾಜೋತ್ಸವ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದು - ಮುಸ್ಲಿಂರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯಸಿಕ್ಕಿದೆ. ಮುಂದಿನ ಪೀಳಿಗೆಗೆ ಇದರ ಅರಿವು ಮೂಡಿಸಿ ದೇಶಾಭಿಮಾನ ಬೆಳಸುವ ಕಾರ್ಯ ನಡೆಯಬೇಕು ಎಂದರು.
ಹೊಸಪೇಟ ಗ್ರಾ.ಪಂ. ಉಪಾಧ್ಯಕ್ಷ ಎನ್.ಆರ್. ಖನಗಾಂವಿ ಮಾತನಾಡಿ, ಮಾರ್ಕಂಡೇಯ ಫೌಂಡೇಶನ್ ಕುತುಬ ಉಲ್ ಉಲೂಮ ಮದರಸಾದಲ್ಲಿ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತಿದ್ದು, ಹಿಂದು, ಮುಸ್ಲಿಂ, ಕ್ರೈಸ್ತರು ಎಂಬ ಭೇದ, ಭಾವ ಇಲ್ಲಿ ಇಲ್ಲ. ಇದು ದೇಶದಲ್ಲಿ ಮಾದರಿ ಮದರಸಾ ಎಂದು ಹೇಳಿದರು.
ಈ ವೇಳೆ ನಿವೃತ್ತ ಸೈನಿಕ ಬಸವರಾಜ ಕುರಬೇಟ, ಸಮಾಜ ಸೇವಕ ವಸೀಂ ವತನದಾರ, ಮಾರ್ಕಂಡೇಯ ಫೌಂಡೇಶನ್ ಅಧ್ಯಕ್ಷ ಅಬ್ದುಲಾ ದೇಸಾಯಿ, ಹಯಾತಚಾಂದ ಸನದಿ, ಮಹಾರಾಷ್ಟ್ರ ಮೂಲದ ಮಾನವ ಹಕ್ಕುಗಳ ಹೋರಾಟಗಾರ್ತಿ ನೀತು ಚವ್ಹಾಣ, ನ್ಯಾಯವಾದಿ ಶಿವಲಿಂಗ ತೇಲಿ ಹಾಗೂ ಹಲವರು ಇದ್ದರು. ಮಾಜಿ ಸೈನಿಕ ಬಸಲಿಂಗಯ್ಯ ಹಿರೇಮಠ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸತ್ಕರಿಸಲಾಯಿತು. ಸುನೀಲ ನಿಪನಾಳ ಕಾರ್ಯಕ್ರಮ ನಿರೂಪಿಸಿದರು.