ಮೂಲಭೂತ ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ

KannadaprabhaNewsNetwork | Updated : Dec 27 2023, 01:32 AM IST

ಸಾರಾಂಶ

ಜಾತಿ ಪ್ರಮಾಣ ಪತ್ರ ಒಂದೇ ಸಲ ಶಾಶ್ವತವಾಗಿ ಕೊಡಬೇಕು ಮತ್ತೆ ಬೇಕಾದರೆ ಆರ್.ಡಿ.ನಂಬರ್ ಮೂಲಕ ಪ್ರತಿ ಕೊಡಬೇಕು ಮತ್ತು ಅದನ್ನು ಎಲ್ಲ ಶಾಲೆ,ಕಾಲೇಜು ಮತ್ತು ಇಲಾಖೆಗಳಿಗೆ ಸ್ಪಷ್ಟವಾದ ಅಧಿಸೂಚನೆ ಮೂಲಕ ಮನವರಿಕೆ ಮಾಡಿಕೊಡಬೇಕು.

ಕೊಪ್ಪಳ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ತುರ್ತಾಗಿ ಇತ್ಯರ್ಥಪಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಮಹಿಳಾ ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ.ಗೊಂಡಬಾಳ ಸಚಿವರಿಗೆ ಮನವಿ ಮಾಡಿದರು.

ರಾಜ್ಯದ ಮೊದಲ ಕಂದಾಯ ಹೋಬಳಿ ವಿಸ್ತಿರಣ ಕಚೇರಿ ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದ ಅವರು, ಜಿಲ್ಲಾ ಕೇಂದ್ರದಿಂದ ಕನಿಷ್ಠ 8 ಕಿಮೀ ಒಳಗಡೆ ಯಾವುದೇ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಬಾರದು, ಕೊಟ್ಟಿದ್ದನ್ನು ಸಹ ಮರಳಿ ಪಡೆಯಬೇಕು. ಇದು ಜನರ ಆರೋಗ್ಯ ಮತ್ತು ಬದುಕಿನ ಪ್ರಶ್ನೆಯಾಗಿದ್ದು, ಮಾನವ ಉತ್ತಮ ಜೀವನ ನಡೆಸಲು ಸರ್ಕಾರ ಮಾಡಬೇಕಾದ ಬಹಳ ಮುಖ್ಯವಾದ ಕಾರ್ಯ ಎಂದು ಭಾವಿಸಿ ಇದರ ಬಗ್ಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು, ಕೊಪ್ಪಳದಲ್ಲಿ ಆರ್ ಎಸ್ ಸ್ಟೀಲ್ ಕಾರ್ಖಾನೆಗೆ ಮಂಜೂರು ಮಾಡಿರುವ ಭೂಮಿ ಮರಳಿ ಪಡೆಯಬೇಕು.

ಜಾತಿ ಪ್ರಮಾಣ ಪತ್ರ ಒಂದೇ ಸಲ ಶಾಶ್ವತವಾಗಿ ಕೊಡಬೇಕು ಮತ್ತೆ ಬೇಕಾದರೆ ಆರ್.ಡಿ.ನಂಬರ್ ಮೂಲಕ ಪ್ರತಿ ಕೊಡಬೇಕು ಮತ್ತು ಅದನ್ನು ಎಲ್ಲ ಶಾಲೆ,ಕಾಲೇಜು ಮತ್ತು ಇಲಾಖೆಗಳಿಗೆ ಸ್ಪಷ್ಟವಾದ ಅಧಿಸೂಚನೆ ಮೂಲಕ ಮನವರಿಕೆ ಮಾಡಿಕೊಡಬೇಕು. ಯಾವುದೇ ಸನ್ನಿವೇಶದಲ್ಲೂ ಬದಲಾಗದ ಜಾತಿ ಪ್ರಮಾಣ ಪತ್ರ ಪದೇ ಪದೇ ಕೇಳುವ ಅದಕ್ಕಾಗಿ ಜನರು ಪರಿತಪಿಸುವದನ್ನು ತಡೆಯಬೇಕು.ಸುಳ್ಳು ಜಾತಿ ಪ್ರಮಾಣ ಪತ್ರ ತಡೆಯಲು ಸಹ ಇದು ಅನುಕೂಲ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಕುಕನೂರ ಬ್ಲಾಕ್ ಅಧ್ಯಕ್ಷೆ ಫರೀದಾಬೇಗಂ ತಂಬಾಕದಾರ್, ಯಲಬುರ್ಗಾ ಬ್ಲಾಕ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್, ಶರಣಮ್ಮ ಪೂಜಾರ್, ಮಲ್ಲಮ್ಮ ಇತರರು ಇದ್ದರು.

Share this article